ಕಿಂಡಿ ಕೊರೆದು ಬ್ಯಾಂಕ್ ದರೋಡೆ ಯತ್ನ ವಿಫಲ
Team Udayavani, Dec 26, 2018, 12:05 PM IST
ಬೆಂಗಳೂರು: ಲೊಟ್ಟೆಗೊಲ್ಲಹಳ್ಳಿರುವ ಕೆನರಾ ಬ್ಯಾಂಕ್ ಕಟ್ಟಡದ ಚಾವಣಿಯಲ್ಲಿ “ಕಿಂಡಿ’ ಕೊರೆದು ಸ್ಟ್ರಾಂಗ್ ರೂಂ ಪ್ರವೇಶಿಸಿರುವ ದುಷ್ಕರ್ಮಿಯೊಬ್ಬ ಲಾಕರ್ ಮುರಿದು ದರೋಡೆಗೆ ವಿಫಲಯತ್ನ ನಡೆಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಬ್ಯಾಂಕ್ ಸ್ಟ್ರಾಂಗ್ ರೂಂಗೆ ಹೊಂದಿಕೊಂಡಂತೆ ಚಾವಣಿಯಲ್ಲಿ ಮೇಲೆ ಒಂದು ಸಣ್ಣ ಕೊಠಡಿಯಿದೆ. ಅದೇ ಕೊಠಡಿಯಲ್ಲಿ ಒಬ್ಬ ಮಾತ್ರ ಇಳಿಯಲು ಅನುಕೂಲವಾಗುವಂತೆ ಕಿಂಡಿ ಕೊರೆಯಲಾಗಿದೆ. ಕಿಂಡಿಯ ಮೂಲಕ ಸ್ಟ್ರಾಂಗ್ ರೂಂಗೆ ಇಳಿದಿದ್ದು, ಲಾಕರ್ಗಳನ್ನು ಹೊಡೆಯಲು ನಡೆಸಿರುವ ಯತ್ನ ವಿಫಲವಾಗಿದೆ. ಹೀಗಾಗಿ ದುಷ್ಕರ್ಮಿ ವಾಪಾಸ್ ಹೊರಟು ಹೋಗಿರುವ ಸಾಧ್ಯತೆಯಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ದೇಶಾದ್ಯಂತ ಡಿ.21ರಿಂದ ರಾಷ್ಟ್ರೀಕೃತ ಬ್ಯಾಂಕ್ಗಳು ಮುಷ್ಕರ ಆರಂಭಿಸಿವೆ. ಈ ಅವಧಿಯಲ್ಲಿಯೇ ಬ್ಯಾಂಕ್ ದರೋಡೆಗೆ ಯತ್ನ ನಡೆದಿದ್ದು, ಸೋಮವಾರ ಬೆಳಗ್ಗೆ ಕೃತ್ಯ ಬೆಳಕಿಗೆ ಬಂದಿದೆ. ಈ ಕುರಿತು ಬ್ಯಾಂಕ್ನ ಮ್ಯಾನೇಜರ್ ಸಿ. ಶಿವರಾಮ್ ಪ್ರಸಾದ್, ಕೊಡಿಗೇಹಳ್ಳಿ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಡಿಸೆಂಬರ್ 20ರಂದು ಕೆಲಸ ಮುಗಿದ ಬಳಿಕ ಬ್ಯಾಂಕ್ ಮ್ಯಾನೇಜರ್ ಕೇಶವಮೂರ್ತಿ, ಸ್ಟ್ರಾಂಗ್ ರೂಂ ಹಾಗೂ ಬ್ಯಾಂಕ್ನ ಮುಖ್ಯ ದ್ವಾರಕ್ಕೆ ಬೀಗ ಹಾಕಿಕೊಂಡು ತೆರಳಿದ್ದರು. ಮುಷ್ಕರ ಹಿನ್ನೆಲೆಯಲ್ಲಿ ಮೂರು ದಿನಗಳು ಬ್ಯಾಂಕ್ ತೆರೆದಿರಲಿಲ್ಲ. ಸೋಮವಾರ ಕೇಶವಮೂರ್ತಿ ರಜೆ ಇದ್ದ ಕಾರಣ, ಇತರೆ ಅಧಿಕಾರಿಗಳಾದ ಗೋವರ್ಧನ್ ಹಾಗೂ ಕೇಶವಮೂರ್ತಿ, ಬಾಗಿಲು ತೆಗದು ಸ್ಟ್ರಾಂಗ್ ರೂಂ ತೆರೆದಾಗ ಕೃತ್ಯ ಗೊತ್ತಾಗಿದೆ. ಬಳಿಕ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.