ವಿದ್ಯಾರ್ಥಿಗಳಿಂದ 9 ಬಗೆಯ ಯಂತ್ರಗಳ ಆವಿಷ್ಕಾರ
Team Udayavani, Jul 5, 2018, 11:47 AM IST
ಬೆಂಗಳೂರು: ಸಾಯಿರಾಂ ಇಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿಗಳು ಎಲೆಕ್ಟ್ರಿಕ್ ವಾಹನ, ಕೊಳವೆಬಾವಿಯಲ್ಲಿ ಆಕಸ್ಮಿಕವಾಗಿ ಮಗು ಬಿದ್ದರೆ ಮೇಲೆತ್ತಬಹುದಾದ ಯಂತ್ರ ಸೇರಿ 9 ಬಗೆಯ ಯಂತ್ರಗಳು ಹಾಗೂ ಸ್ಮಾರ್ಟ್ ಮೆಟ್ರೋ ನಿಲ್ದಾಣದ ಪರಿಕಲ್ಪನೆಯನ್ನು ಆವಿಷ್ಕರಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾಲೇಜು ಪ್ರಾಂಶುಪಾಲ ಡಾ.ವೈ.ವಿಜಯಕುಮಾರ್, ಕೊಳವೆಬಾವಿಗಳಲ್ಲಿ ಮಕ್ಕಳು ಬಿದ್ದಾಗ ಮಕ್ಕಳನ್ನು ಮೇಲೆತ್ತುವುದು ತೀವ್ರ ಕಷ್ಟಕರವಾದ ಕೆಲಸ. ಸಾಕಷ್ಟು ಪ್ರಕರಣಗಳಲ್ಲಿ ಕೊಳವೆಬಾವಿಗೆ ಬಿದ್ದ ಮಕ್ಕಳು ಮೃತಪಟ್ಟಿದ್ದಾರೆ. ಆ ನಿಟ್ಟಿನಲ್ಲಿ ಬೋರ್ವೆಲ… ರೆಸ್ಕ್ಯೂರೋಬೋಟ್ ಎಂಬ ವಿಶೇಷ ಸಾಧನವನ್ನು ವಿದ್ಯಾರ್ಥಿಗಳು ಆವಿಷ್ಕರಿಸಿದ್ದು, ಕೊಳವೆಬಾವಿಗೆ ಬಿದ್ದ ಮಗುವನ್ನು ಮೇಲೆತ್ತಲು ಇದು ಸಹಕಾರಿಯಾಗಲಿದೆ ಎಂದು ಹೇಳಿದರು.
ಉಪಪ್ರಾಂಶುಪಾಲ ಬಿ. ಷಡಕ್ಷರಪ್ಪ ಮಾತನಾಡಿ, ಸಾರ್ವಜನಿಕರ ಸುರಕ್ಷತೆಗಾಗಿ ಸ್ಮಾರ್ಟ್ ಮೆಟ್ರೋ ನಿಲ್ದಾಣ ಪರಿಕಲ್ಪನೆ ಆವಿಷ್ಕರಿಸಲಾಗಿದೆ. ರೈಲು ನಿಲ್ದಾಣದಲ್ಲಿ ಪ್ಲಾಟ್ಫಾರ್ಮ್ಗೆ ಗೇಟ್ ಅಳವಡಿಸಲಾಗಿದ್ದು, ರೈಲು ಪ್ಲಾಟ್ಫಾರ್ಮ್ಗೆ ಬಂದ ಕೂಡಲೇ ಗೇಟು ತಂತಾನೇ ತೆರೆದುಕೊಳ್ಳುತ್ತದೆ. ನಂತರ ಜನರು ಪ್ಲಾಟ್ಫಾರ್ಮ್ಗೆ ಪ್ರವೇಶಿಸಬಹುದು. ಈ ಯೋಜನೆಗೆ 10 ಸಾವಿರ ರೂ. ಖರ್ಚಾಗಲಿದೆ ಎಂದು ತಿಳಿಸಿದರು.