ಮನೆ ಬಿಡಿಸಿಕೊಟ್ಟ ಮುಖ್ಯಮಂತ್ರಿ
Team Udayavani, Sep 6, 2018, 10:45 AM IST
ಬೆಂಗಳೂರು: ಸಾಲ ಕೊಟ್ಟ ವ್ಯಕ್ತಿ ತನ್ನ ಮನೆಯನ್ನು ಅಕ್ರಮವಾಗಿ ಸ್ವಾಧೀನಕ್ಕೆ ಪಡೆದುಕೊಂಡ ಬಗ್ಗೆ ಜನತಾ ದರ್ಶನದಲ್ಲಿ ದೂರು ಸಲ್ಲಿಸಿದ್ದ ಮಹಿಳೆಗೆ ಐದೇ ದಿನದಲ್ಲಿ ನ್ಯಾಯ ಸಿಕ್ಕಿದೆ. ಮುಖ್ಯಮಂತ್ರಿಗಳ ಸೂಚನೆಯಂತೆ ಪೊಲೀಸರು ಅಕ್ರಮ ಸ್ವಾಧೀನವನ್ನು ತೆರವುಗೊಳಿಸಿ ಮನೆ ಮತ್ತು ಅದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಮಹಿಳೆಗೆ
ವಾಪಸ್ ಕೊಡಿಸಿದ್ದಾರೆ.
ಗಿರಿನಗರದ ಕನ್ನಿಯಮ್ಮ ಎಂಬುವರು ಸೆ.1ರಂದು ಮುಖ್ಯಮಂತ್ರಿಗಳ ಜನತಾ ದರ್ಶನಕ್ಕೆ ಆಗಮಿಸಿ, ಸಿಎಂ
ಕುಮಾರಸ್ವಾಮಿ ಅವರಿಗೆ ದೂರು ನೀಡಿದ್ದರು. ತಮ್ಮ ಪತಿ ವ್ಯಕ್ತಿಯೊಬ್ಬರಿಂದ ಕೈಸಾಲ ಪಡೆದಿದ್ದು, ಅದನ್ನು ಪ್ರಾಮಾಣಿಕವಾಗಿ ತೀರಿಸುತ್ತಾ ಬಂದಿದ್ದರು. ಆದರೆ, ನಾವು ಊರಲ್ಲಿ ಇಲ್ಲದ ಸಂದರ್ಭದಲ್ಲಿ ಸಾಲ ಕೊಟ್ಟ ವ್ಯಕ್ತಿ
ಮನೆಯ ಬೀಗ ಒಡೆದು ಅಕ್ರಮವಾಗಿ ತನ್ನ ಸ್ವಾಧೀನಕ್ಕೆ ಪಡೆದಿದ್ದಲ್ಲದೆ, ಬೇರೆಯವರಿಗೆ ಬಾಡಿಗೆಗೆ ನೀಡಿದ್ದಾರೆ.
ಸಾಲ ವಾಪಸ್ ಮಾಡುತ್ತೇವೆ. ಮನೆ ವಾಪಸ್ ಕೊಡಿ ಎಂದು ಕೇಳಿಕೊಂಡರೂ ಒಪ್ಪುತ್ತಿಲ್ಲ ಎಂದು ದೂರಿನಲ್ಲಿ ತಿಳಿಸಿದ್ದರು.
ಈ ದೂರು ಸ್ವೀಕರಿಸಿದ ಮುಖ್ಯಮಂತ್ರಿಗಳು, ತಕ್ಷಣ ನಗರ ಪೊಲೀಸ್ ಆಯುಕ್ತ ಟಿ.ಸುನೀಲ್ಕುಮಾರ್ ಅವರಿಗೆ
ಕರೆ ಮಾಡಿ ಮನೆ ಯನ್ನು ಒತ್ತುವರಿದಾರರಿಂದ ವಾಪಸ್ ಮಹಿಳೆಗೆ ಕೊಡಿಸುವಂತೆ ಸೂಚಿಸಿದ್ದರಲ್ಲದೆ, ಆಕೆಗೆ
ರಕ್ಷಣೆ ನೀಡುವಂತೆಯೂ ತಿಳಿಸಿದ್ದರು. ಅದರಂತೆ ಪೊಲೀಸರು ಒತ್ತುವರಿ ತೆರವುಗೊಳಿಸಿ ಮಹಿಳೆಗೆ ಮನೆ ವಾಪಸ್ ಕೊಡಿಸಿದ್ದಾರೆ. ಬುಧವಾರ ನಗರ ಪೊಲೀಸ್ ಆಯುಕ್ತ ಟಿ.ಸುನೀಲ್ ಕುಮಾರ್ ಮತ್ತು ಡಿಸಿಪಿ ಶರಣಪ್ಪ ಅವರೊಂದಿಗೆ ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾಗೆ ಆಗಮಿಸಿದ ಕನ್ನಿಯಮ್ಮ, ಮನೆ ವಾಪಸ್ ಕೊಡಿಸಿದ್ದಕ್ಕಾಗಿ ಮುಖ್ಯಮಂತ್ರಿಗಳಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.