ಸಮನ್ಸ್ ರದ್ದುಕೋರಿ ಕೋರ್ಟ್ ಮೊರೆ
Team Udayavani, Feb 5, 2019, 12:35 AM IST
ಬೆಂಗಳೂರು: ದೆಹಲಿಯ ಫ್ಲ್ಯಾಟ್, ಮನೆ ಹಾಗೂ ಬೆಂಗಳೂರಿನ ಹಲವು ಕಡೆ 2017ರ ಆಗಸ್ಟ್ 2ರಂದು ನಡೆದ ಐಟಿ ದಾಳಿ ಪ್ರಕರಣ ದಲ್ಲಿ ವಿಚಾರಣೆಗೆ ಹಾಜರಾ ಗುವಂತೆ ಜಾರಿ ನಿರ್ದೇ ಶನಾಲಯ ಜಾರಿಗೊಳಿಸಿರುವ ಸಮನ್ಸ್ ಹಾಗೂ ಈ ಪ್ರಕರಣದ ಸಂಬಂಧ ಆರ್ಥಿಕ ಅಪರಾಧಗಳ ವಿಶೇಷ ನ್ಯಾಯಾಲಯದಲ್ಲಿ ದಾಖಲಾಗಿರುವ ದೂರು ರದ್ದು ಗೊಳಿಸುವಂತೆ ಕೋರಿ ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.
ಜಾರಿ ನಿರ್ದೇಶನಾಲಯದ ಕ್ರಮ ಪ್ರಶ್ನಿಸಿ ಸಚಿವ ಡಿ.ಕೆ ಶಿವಕುಮಾರ್ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದು, ಈ ಅರ್ಜಿಯು ಯಾವ ನ್ಯಾಯಪೀಠದ ಮುಂದೆ ವಿಚಾರಣೆಗೆ ಬರಬೇಕು ಅನ್ನು ವುದು ಇನ್ನಷ್ಟೇ ನಿಗದಿಯಾಗಬೇಕಿದೆ.
ಐಟಿ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಆದಾಯ ತೆರಿಗೆ ಪ್ರಧಾನ ನಿರ್ದೇಶಕರು (ತನಿಖೆ) ತಮ್ಮ ವಿರುದ್ಧ ಪ್ರಾಸಿಕ್ಯೂಷನ್ಗೆ 2018ರ ಮೇ 28ರಂದು ನೀಡಿದ ಅನುಮತಿ ಈ ಸಂಬಂಧ ಆರ್ಥಿಕ ಅಪರಾಧಗಳ ವಿಶೇಷ ನ್ಯಾಯಾಲಯದಲ್ಲಿ 2018ರ ಜೂ.13 ರಂದು ದಾಖಲಾದ ದೂರು, ಆ ದೂರನ್ನು ಆಧರಿಸಿ ಪ್ರಕರಣವನ್ನು ವಿಶೇಷ ನ್ಯಾಯಾ ಲಯ ಜೂ.18ರಂದು ವಿಚಾರಣೆಗೆ ಅಂಗೀಕರಿಸಿದ್ದನ್ನು ರದ್ದುಗೊಳಿಸಬೇಕು ಹಾಗೂ ವಿಚಾರಣೆಗೆ ಹಾಜರಾಗುವಂತೆ ಜಾರಿ ನಿರ್ದೇಶನಾಲಯ 2019ರ ಜ.17ರಂದು ಜಾರಿಗೊಳಿಸಿರುವ ಸಮನ್ಸ್ ಗೆ ತಡೆ ನೀಡಬೇಕೆಂದು ಅರ್ಜಿಯಲ್ಲಿ ಕೋರಲಾಗಿದೆ.