ವಿಶ್ವನಾಥ್ ಜತೆ ಭಿನ್ನಾಭಿಪ್ರಾಯವಿಲ್ಲ: ಸಿದ್ದರಾಮಯ್ಯ
Team Udayavani, May 11, 2017, 10:55 AM IST
ಬೆಂಗಳೂರು: ಕಾಂಗ್ರೆಸ್ ಹಿರಿಯ ನಾಯಕ ಎಚ್. ವಿಶ್ವನಾಥ ಹಾಗೂ ತಮ್ಮ ನಡುವೆ ಯಾವುದೇ ರೀತಿಯ ಗೊಂದಲ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿದ ಅವರು, ನಾನು ಬದಲಾಗಿದ್ದೇನೆ ಎಂದು ವಿಶ್ವನಾಥ ಹೇಳಿರುವುದು ಗೊತ್ತಿಲ್ಲ. ನಾನು ಅಧಿಕಾರ ಸ್ವೀಕರಿಸುವಾಗ ಅವರೇಕೆ ಎಕ್ಸೆ„ಟ್ ಆಗಿದ್ದರು ಅಂತ ಅವರನ್ನೇ ಕೇಳಿ ಎಂದರು. ಎಸ್.ಎಂ. ಕೃಷ್ಣ ಹಾಗೂ ಶ್ರೀನಿವಾಸ ಪ್ರಸಾದ ಅವರು ವಯಕ್ತಿಕ ಕಾರಣಕ್ಕೆ ಪಕ್ಷ ತೊರೆದಿದ್ದಾರೆ. ಸಂಪುಟದಿಂದ ಶ್ರೀನಿವಾಸ ಪ್ರಸಾದ ಅವರೊಬ್ಬರನ್ನೇ ಕೈ ಬಿಟ್ಟಿರಲಿಲ್ಲ. ಆದರೆ, ಅವರು ವಯಕ್ತಿಕ ಪ್ರತಿಷ್ಠೆಗೆ ಪಕ್ಷ ತೊರೆದಿದ್ದಾರೆ. ಎಸ್.ಎಂ. ಕೃಷ್ಣ ಅವರೂ ವಯಕ್ತಿಕ ಕಾರಣಕ್ಕೆ ಪಕ್ಷ ತೊರೆದಿದ್ದು, ಅವರೇನು ನನ್ನ ಮೇಲೆ ಆರೋಪ ಮಾಡಿರಲಿಲ್ಲ. ನಮ್ಮ ಪಕ್ಷದಲ್ಲಿ ಕೆಲಸ ಮಾಡಲು ಎಲ್ಲರಿಗೂ ಮುಕ್ತ ಅವಕಾಶ ಇದೆ ಎಂದು ಹೇಳಿದರು.
ರಾಜ್ಯ ಸರ್ಕಾರ ಲಿಂಗಾಯತ ಸಮುದಾಯವನ್ನು ಕಡೆಗಣಿಸುತ್ತಿದೆ ಎಂದು ಮಾಜಿ ಸಚಿವ ಶಾಮನೂರು ಶಿವಶಂಕರಪ್ಪ ಮಾಡಿರುವ ಆರೋಪವನ್ನು ತಳ್ಳಿ ಹಾಕಿರುವ ಮುಖ್ಯಮಂತ್ರಿ, ಅವರು ಆ ರೀತಿ ಹೇಳಿಕೆಯನ್ನೇ ನೀಡಿಲ್ಲ. ಮಾಧ್ಯಮಗಳಲ್ಲಿ ತಪ್ಪು ವರದಿಯಾಗಿದೆ ಎಂದು ಹೇಳಿದರು.