ಬ್ರಿಗೇಡ್ ರಸ್ತೆ, ಎಂ.ಜಿ.ರಸ್ತೆ ಕಡೆ ಏಕಮುಖ ಸಂಚಾರ
Team Udayavani, Jan 1, 2023, 12:02 PM IST
ಬೆಂಗಳೂರು: ಪ್ರತಿ ವರ್ಷ ಕಾವೇರಿ ಎಂಪೋರಿಯಂ ಬಳಿ ತಡರಾತ್ರಿ 11.59ಕ್ಕೆ ಎಲ್ಲೆಡೆ ಲೈಟ್ ಆಫ್ ಮಾಡಿ 12 ಗಂಟೆಗೆ ಸರಿಯಾಗಿ ಲೈಟ್ ಆನ್ ಮಾಡುತ್ತಿದ್ದರು. ಆದರೆ, ಈ ವರ್ಷ ಭದ್ರತೆ ದೃಷ್ಟಿಯಿಂದ ಲೈಟ್ ಆಫ್ ಮಾಡಲಿಲ್ಲ. ಹಾಗೆಯೇ ಹೊಸವರ್ಷ ಸ್ವಾಗತಿಸಿದರು.
ಸಂಭ್ರಮಾಚರಣೆ ಮುಗಿಯುತ್ತಿದ್ದಂತೆ ಬ್ರಿಗೇಡ್ ರಸ್ತೆ, ಎಂ.ಜಿ. ರಸ್ತೆ ಕಡೆ ಏಕಮುಖ ಸಂಚಾರ ಮೂಲಕ ವಾಪಸ್ ತೆರಳಲು ಪೊಲೀಸರು ಸೂಚಿಸುತ್ತಿದ್ದರು. ನಗರಾದ್ಯಂತ ಸಿಸಿಬಿ ಜಂಟಿ ಪೊಲೀಸ್ ಆಯುಕ್ತ , ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತ, ಇಬ್ಬರು ಹೆಚ್ಚುವರಿ ಪೊಲೀಸ್ ಆಯುಕ್ತರ ನೇತೃತ್ವದಲ್ಲಿ ಸಿವಿಲ್ ಡಿಫೆನ್ಸ್, ಗೃಹ ರಕ್ಷಕ ದಳ, ಕೆಎಸ್ಆರ್ಪಿ, ಸಿಎಆರ್ ಹಾಗೂ ಸ್ಥಳೀಯ ಪೊಲೀಸರು ಸೇರಿ ಒಟ್ಟು 10 ಸಾವಿರಕ್ಕೂ ಅಧಿಕ ಮಂದಿ ಕರ್ತವ್ಯ ನಿರ್ವಹಿಸಿದ್ದರು. ಸ್ಥಳಕ್ಕೆ ಆಗಮಿಸಿದ ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ , ಹೆಚ್ಚುವರಿ ಪೊಲೀಸ್ ಆಯುಕ್ತರಾದ ಸಂದೀಪ್ ಪಾಟೀಲ್, ಕೇಂದ್ರ ವಿಭಾಗ ಡಿಸಿಪಿ ಶ್ರೀನಿವಾಸ್ ಗೌಡ ಎಂ.ಜಿ.ರಸ್ತೆ, ಬ್ರಿಗೇಡ್ ರಸ್ತೆಯಲ್ಲಿ ಭದ್ರತೆ ಪರಿಶೀಲಿಸಿದರು.
ಇನ್ನು ವೀಲಿಂಗ್, ಡ್ರಾಗ್ ರೇಸ್, ಅತಿವೇಗ ವಾಹನ ಚಾಲನೆ ತಡೆಯಲು ಮುನ್ನೆಚ್ಚ ರಿಕಾ ಕ್ರಮವಾಗಿ ನಗರದ 44 ಮೇಲು ಸೇತುವೆಗಳಲ್ಲಿ ರಾತ್ರಿ 10 ಗಂಟೆಯಿಂದಲೇ ಸಂಚಾರ ನಿರ್ಬಂಧಿಸಲಾಗಿತ್ತು. ಮತ್ತೂಂದೆಡೆ ತಡರಾತ್ರಿ ಕಾರ್ಯಕ್ರಮ ಮುಗಿಸಿಕೊಂಡು ಹೋಗುವಾಗ ಮೆಜೆಸ್ಟಿಕ್, ಓಕಳಿಪುರಂ, ಆನಂದರಾವ್ ವೃತ್ತ, ರೇಸ್ಕೋರ್ಸ್ ರಸ್ತೆ, ಮಲ್ಯ ಆಸ್ಪತ್ರೆ ರಸ್ತೆ, ಕಾರ್ಪೋರೆಷನ್ ಸೇರಿ ಪ್ರಮುಖ ರಸ್ತೆಗಳಲ್ಲಿ ಅಧಿಕ ಸಂಚಾರ ದಟ್ಟಣೆ ಉಂಟಾಯಿತು. ರಾತ್ರಿ 10.30ರಿಂದ ತಡರಾತ್ರಿ 2 ಗಂಟೆವರೆಗೆ ಶಿವಾಜಿನಗರ, ಮೆಯೋ ಹಾಲ್ ಸೇರಿ ಎಂ.ಜಿ.ರಸ್ತೆ ಸಂಪರ್ಕಿಸುವ ಎಲ್ಲ ರಸ್ತೆಗಳಲ್ಲಿ ಸಂಚಾರ ನಿರ್ಬಂಧಿಸಲಾಗಿತ್ತು. ಎಂ.ಜಿ.ರಸ್ತೆ, ಬ್ರಿಗೇಡ್ ರಸ್ತೆ, ಚರ್ಚ್ ಸ್ಟ್ರೀಟ್, ಮ್ಯೂಸಿಯಂ ರಸ್ತೆ, ರೆಸಿಡೆನ್ಸಿ ಕ್ರಾಸ್ ರಸ್ತೆಯಲ್ಲಿ ವಾಹನಗಳ ನಿಷೇಧಿಸಲಾಗಿತ್ತು.
ಹೀಗಾಗಿ ಈ ಮಾರ್ಗಗಳಲ್ಲಿ ನಿರೀಕ್ಷೆಗೂ ಮೀರಿದ ಸಂಚಾರ ದಟ್ಟಣೆ ಉಂಟಾಗಿತ್ತು. ಈ ಮಧ್ಯೆ ವಾಹನ ನಿಲುಗಡೆ ನಿಷೇಧಿತ ಪ್ರದೇಶದಲ್ಲಿ ನಿಲ್ಲಿಸಿದ್ದ ವಾಹನಗಳನ್ನು ಹೊತೊಯ್ದ ಸಂಚಾರ ಪೊಲೀಸರು ಜ.1ರ ಬೆಳಗ್ಗೆ ನಂತರವೇ ಬಿಡುಗಡೆ ಮಾಡಿದರು.