ರಾಜಭವನ ಮುತ್ತಿಗೆ:ವಾಟಾಳ್ ಎಚ್ಚರಿಕೆ
Team Udayavani, Aug 25, 2018, 6:00 AM IST
ಬೆಂಗಳೂರು: ಕೇಂದ್ರ ಸರ್ಕಾರ ಕೊಡಗಿನ ಸಂತ್ರಸ್ಥರಿಗೆ ಪರಿಹಾರ ಘೋಷಿಸಬೇಕೆಂದು ಒತ್ತಾಯಿಸಿ ಆ.27ರಂದು ರಾಜಭವನ ಮುತ್ತಿಗೆ ಹಾಕಲಾಗುವುದು ಎಂದು ಕನ್ನಡ ಒಕ್ಕೂಟದ ಅಧ್ಯಕ್ಷ ವಾಟಾಳ್ ನಾಗರಾಜ್ ತಿಳಿಸಿದ್ದಾರೆ.
ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇರಳದಲ್ಲಿ ಮಾತ್ರವೇ ಪ್ರವಾಹದಿಂದಾಗಿ ಜನರು ತತ್ತರಿಸಿಲ್ಲ. ಕರ್ನಾಟಕದ ಕೊಡಗಿನಲ್ಲೂ ಉಂಟಾದ ನೆರೆಯಿಂದಾಗಿ ಜನರು ಬದುಕನ್ನು ಕಳೆದುಕೊಂಡಿದ್ದಾರೆ. ಕೇಂದ್ರ ಸರ್ಕಾರ ಕೇವಲ ಕೇರಳಕ್ಕೆ ಮಾತ್ರ ಪರಿಹಾರಧನ ಘೋಷಿಸಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಕರ್ನಾಟಕಕ್ಕೂ ಭೇಟಿ ನೀಡಿ ಇಲ್ಲಿನ ಸಂತ್ರಸ್ಥರ ಪರಿಸ್ಥಿತಿ ಅರಿಯಬೇಕು. ಕೊಡಗಿನ ಸಂತ್ರಸ್ಥರ ಬಗ್ಗೆ ಕೇಂದ್ರದ ಗಮನ ಸೆಳೆಯಲು ಸೋಮವಾರ ಬೆಳಗ್ಗೆ 11.30ಕ್ಕೆ ರಾಜಭವನ ಮುತ್ತಿಗೆ ಹಾಕಲಾಗುವುದು ಎಂದು ಹೇಳಿದರು.
ಕರ್ನಾಟಕ ಕಾಶ್ಮೀರ ಎಂದೇ ಕೊಡಗು ಪ್ರಸಿದ್ಧ. ಪುನಃ ನೈಜ ಕೊಡಗನ್ನು ನಿರ್ಮಿಸಬೇಕು. ಕೇಂದ್ರ ಸರ್ಕಾರ ಕೊಡಗಿನ ಸಂತ್ರಸ್ಥರಿಗೆ 10 ಸಾವಿರ ಕೋಟಿ ರೂ.ಗಳ ನೆರವು ನೀಡಬೇಕು. ಒಕ್ಕೂಟದ ಸದಸ್ಯರು ಇನ್ನೇರಡು ಮೂರು ದಿನದೊಳಗಾಗಿ ಕೊಡಗಿಗೆ ಭೇಟಿ ನೀಡಿ ಅಲ್ಲಿನ ಪರಿಸ್ಥಿತಿಯನ್ನು ತಿಳಿದುಕೊಳ್ಳಲಿದ್ದಾರೆ. ಕೇಂದ್ರ ಸರ್ಕಾರ ನೆರವಿಗೆ ಧಾವಿಸಬೇಕೆಂದು ಮೈಸೂರು ಮತ್ತು ಕೊಡಗಿನಲ್ಲಿ ಚಳವಳಿ ಹಮ್ಮಿಕೊಳ್ಳಲಾಗುವುದು. ಇನ್ನೊಂದು ವಾರದೊಳಗಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ ಕೊಡಗಿಗೆ ಭೇಟಿ ನೀಡದಿದ್ದರೆ ಕರ್ನಾಟಕ ಬಂದ್ ಮಾಡಲಾಗುವುದು ಎಂದು ಎಚ್ಚರಿಸಿದರು.