ಹೆಬ್ಬೂರು ಕೆರೆಗೆ ಹೇಮೆ ಹರಿಸಲು ಸಿಎಂ ಭೇಟಿ
Team Udayavani, Aug 8, 2018, 12:20 PM IST
ಬೆಂಗಳೂರು: ಹೇಮಾವತಿ ನೀರಿನಿಂದ ವಂಚಿತಗೊಂಡಿರುವ ತುಮಕೂರು ತಾಲೂಕಿನ ಕೆರೆಗಳು ಅದರಲ್ಲೂ ಮುಖ್ಯವಾಗಿ ಹೆಬ್ಬೂರು ಮತ್ತು ಗೂಳೂರು ಹೋಬಳಿಯ ಕೆರೆಗಳಿಗೆ ಏತ ನೀರಾವರಿ ಯೋಜನೆಯಡಿ ಹಂಚಿಕೆಯಾಗಿರುವ ಪೂರ್ಣ ಪ್ರಮಾಣದ ನೀರನ್ನು ಮಂಜೂರು ಮಾಡಬೇಕು ಎಂದು ಮಾಜಿ ಶಾಸಕ ಎಚ್. ನಿಂಗಪ್ಪ ನೇತೃತ್ವದ ರೈತರು ಹಾಗೂ ನೀರಾವರಿ ಹೋರಾಟಗಾರರ ನಿಯೋಗ ಮುಖ್ಯಮಂತ್ರಿಯರನ್ನು ಮನವಿ ಮಾಡಿತು.
ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿಯರನ್ನು ಭೇಟಿ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಎಚ್. ನಿಂಗಪ್ಪ, 1992ರಿಂದ ಈ ಹೋರಾಟ ನಡೆಯುತ್ತಿದೆ. 2004ರಲ್ಲಿ ತುಮಕೂರು ಕೆರೆಗಳಿಗೆ ನೀರು ಹರಿಸುವ ಯೋಜನೆಗೆ ಮಂಜೂರಾತಿ ಸಿಕ್ಕಿತು.
ಅದರಂತೆ 11 ಪಂಪುಗಳು ಹಾಗೂ 1,105 ಎಂಸಿಎಫ್ಟಿ ನೀರು ಹಂಚಿಕೆಯಾಗಿತ್ತು. ಆದರೆ 700 ಎಂಸಿಎಫ್ಟಿ ನೀರು ಮಂಜೂರಾಯಿತು. ನಂತರ 150 ಆಮೇಲೆ 90 ಎಂಸಿಎಫ್ಟಿ ಮಂಜೂರಾಯಿತು. ಅದನ್ನೂ ಸಹ ಕೆರೆಗಳಿಗೆ ಹರಿಸಿಲ್ಲ ಎಂದು ಆರೋಪಿಸಿದರು.
ಆದ್ದರಿಂದ ಮಂಜೂರಾಗಿರುವ ಪೂರ್ಣ ಪ್ರಮಾಣದ ನೀರನ್ನು ಕೆರೆಗಳಿಗೆ ಹರಿಸುವಂತೆ ಮನವಿ ಮಾಡಲಾಗಿದೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳ ಸಭೆ ನಡೆಸಿ ಕ್ರಮ ಕೈಗೊಳ್ಳುವುದಾಗಿ ಮುಖ್ಯಮಂತ್ರಿಯವರು ಭರವಸೆ ನೀಡಿದ್ದಾರೆ ಎಂದು ನಿಂಗಪ್ಪ ತಿಳಿಸಿದರು.