ಕನ್ನಡ ಫಲಕ ಹಾಕಿ ಎಂದಿದ್ದಕ್ಕೆ ಹಲ್ಲೆಗೆ ಮುಂದಾದ ಮಹಿಳೆ
Team Udayavani, Nov 15, 2017, 11:33 AM IST
ಬೆಂಗಳೂರು: ಬೇಕರಿಯ ನಾಮಫಲಕ ಕನ್ನಡದಲ್ಲಿ ಹಾಕದಿರುವುದನ್ನು ಪ್ರಶ್ನಿಸಿದ ಕನ್ನಡ ಪರ ಸಂಘಟನೆ ಸದಸ್ಯರ ಮೇಲೆ ಅಂಗಡಿಯ ಯಜಮಾನಿ ಹಲ್ಲೆಗೆ ಮುಂದಾದ ಘಟನೆ ಹುಳಿಮಾವು ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಹುಳಿಮಾವುನಲ್ಲಿರುವ ಜಸ್ಟ್ ಬೇಕ್ ಬೇಕರಿಯ ನಾಮಫಲಕದಲ್ಲಿ ಕನ್ನಡ ಅಕ್ಷರಗಳು ಇರಲಿಲ್ಲ.
ಇದನ್ನು ಪ್ರಶ್ನಿಸಲು ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಸಂಘಟನೆ ಹತ್ತಾರು ಮಂದಿ ಕಾರ್ಯಕರ್ತರು ಬೇಕರಿಗೆ ಹೋಗಿದ್ದು, ನಾಮಫಲಕವನ್ನು ಕನ್ನಡದಲ್ಲಿ ಪ್ರಕಟಿಸದಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಕೂಡಲೇ ಕನ್ನಡ ನಾಮಫಲಕ ಹಾಕಬೇಕೆಂದು ಆಗ್ರಹಿಸಿದ್ದಾರೆ. ಬೇಕರಿಯ ಯಜಮಾನಿ ನಡುವೆ ಮಾತಿನ ಚಕಮಕಿ ನಡೆದಿದೆ.
ಈ ವೇಳೆ ಕೋಪಗೊಂಡ ಯಜಮಾನಿ ಕನ್ನಡ ಪರ ಸಂಘಟನೆ ಕಾರ್ಯಕರ್ತರೊಬ್ಬರ ಮೊಬೈಲ್ ಕಸಿದುಕೊಂಡು ನೆಲಕ್ಕೆ ಹೊಡೆದು ಪುಡಿ ಪುಡಿ ಮಾಡಿದ್ದಾರೆ. ಅಲ್ಲದೇ ಹಲ್ಲೆಗೆ ಮುಂದಾಗಿದ್ದಾರೆ. ಆದರೂ ಬೇಕರಿಯ ಯಜಮಾನಿ ಕನ್ನಡದಲ್ಲಿ ನಾಮಫಲಕ ಹಾಕುವುದಿಲ್ಲ ಎಂದು ಉದ^ಟತನ ತೋರಿದ್ದಾರೆ. ನಂತರ ಬೇಕರಿಯ ಯಜಮಾನಿಯ ವರ್ತನೆ ವಿರುದ್ಧ ಸಂಘಟನೆ ಕಾರ್ಯಕರ್ತರು ಹುಳಿಮಾವು ಠಾಣೆಗೆ ದೂರು ನೀಡಿದ್ದರು. ಈ ಸಂಬಂಧ ಇಬ್ಬರನ್ನು ಕರೆಸಿ ಎಚ್ಚರಿಕೆ ನೀಡಿ ಕಳುಹಿಸಿದ್ದಾರೆ.