Crime: ಒಂಟಿ ಮಹಿಳೆ ಕೊಲೆಗೈದ ಕೆಲಸಗಾರ ಸೆರೆ
Team Udayavani, Jan 12, 2024, 12:26 PM IST
ಬೆಂಗಳೂರು: ಇತ್ತೀಚೆಗೆ ಬೆಟ್ಟದಾಸನಪುರ ಸಮೀಪದ ಪ್ರಭಾಕರ್ ರೆಡ್ಡಿ ಲೇಔಟ್ನ ಮನೆಯಲ್ಲಿ ಒಂಟಿಯಾಗಿದ್ದ ನೀಲಂ ಎಂಬಾಕೆಯನ್ನು ಕೊಲೆಗೈದಿದ್ದ “ಕೆಲಸಗಾರ’ನನ್ನು ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ಬಂಧಿಸಿದ್ದಾರೆ.
ಎಲೆಕ್ಟ್ರಾನಿಕ್ ಸಿಟಿ ನಿವಾಸಿ ರಜನೀಶ್ ಕುಮಾರ್(28) ಬಂಧಿತ. ಆರೋಪಿ ಜ.4ರಂದು ತನ್ನ ಮಾಲೀಕ ಪ್ರದ್ಯುನ್ಮ ಎಂಬುವರ ಪತ್ನಿ ನೀಲಂ(30) ಎಂಬಾಕೆಯನ್ನು ಕುತ್ತಿಗೆ ಬಿಗಿದು ಕೊಲೆಗೈದು, 8 ಸಾವಿರ ರೂ. ನಗದು, ಕಿವಿಯೊಲೆ ದೋಚಿ ಪರಾರಿಯಾಗಿದ್ದ. ಅದೇ ದಿನ ಸಂಜೆ ನೀಲಂ ಮಗ ಶಾಲೆಯಿಂದ ಮನೆಗೆ ಬಂದಾಗ ಕೊಲೆ ವಿಚಾರ ಹೊತ್ತಾಗಿದೆ. ಆರೋಪಿ ಯನ್ನು ಉತ್ತರ ಪ್ರದೇಶದಲ್ಲಿ ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದರು.
ಉತ್ತರ ಪ್ರದೇಶದ ಅಮರ ಗ್ರಾಮದ ನಿವಾಸಿ ರಜನೀಶ್ ಕುಮಾರ್ 5 ವರ್ಷಗಳ ಹಿಂದೆ ಬೆಂಗ ಳೂರಿಗೆ ಬಂದಿದ್ದು, ಪೇಂಟಿಂಗ್ ಕೆಲಸ ಮಾಡು ತ್ತಿದ್ದ. ಎಲೆಕ್ಟ್ರಾನಿಕ್ ಸಿಟಿಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ. ಇದೇ ವೇಳೆ 2 ವರ್ಷದಿಂದ ಪ್ರಭಾಕರ್ ರೆಡ್ಡಿ ಲೇಔಟ್ನಲ್ಲಿ ವಾಸವಾಗಿದ್ದ ತಮ್ಮ ಊರಿನವರಾದ ಪೇಂಟಿಂಗ್ ಗುತ್ತಿಗೆದಾರ ಹಾಗೂ ಎಲೆಕ್ಟ್ರಾನಿಕ್ ಸಿಟಿಯಲ್ಲಿ ಹಾರ್ಡ್ವೇರ್ ಶಾಪ್ ಹೊಂದಿರುವ ಪ್ರದ್ಯುನ್ಮ ಎಂಬಾತನ ಪರಿಚಯವಾಗಿತ್ತು. ಹೀಗಾಗಿ ಕುಟುಂಬ ಸದಸ್ಯರಿಗೂ ಆರೋಪಿ ಪರಿಚಯಸ್ಥನಾಗಿದ್ದಾನೆ.
ಹಾರ್ಡ್ವೇರ್ ಶಾಪ್ ಅನ್ನು ಕೊಲೆಯಾದ ನೀಲಂ ಸಹೋದರ ಪಂಕಜ್ ನೋಡಿಕೊಳ್ಳುತ್ತಿದ್ದು, ಜತೆಗೆ ಪ್ರತಿಷ್ಠಿತ ಪೇಂಟ್ ಕಂಪನಿಯ ಡೀಲರ್ ಕೂಡ ಆಗಿದ್ದರು. ಹೀಗಾಗಿ ಗ್ರಾಹಕರ ಬೇಡಿಕೆಯಂತೆ ಹೆಚ್ಚಿನ ಪೇಂಟ್ ಬಾಕ್ಸ್ಗಳನ್ನು ಡೆಲಿವರಿಗೆ ಪಂಕಜ್ ಹೋಗುತ್ತಿದ್ದರು. ಆಗ ಆರೋಪಿಯೇ ಹಾರ್ಡ್ವೇರ್ ಶಾಪ್ ನೋಡಿಕೊಳ್ಳುತ್ತಿದ್ದ. ಈ ವೇಳೆ ಶಾಪ್ನಲ್ಲಿ ನಡೆಯುವ ಲಕ್ಷಾಂತರ ರೂ. ವ್ಯವಹಾರದ ಬಗ್ಗೆ ತಿಳಿದುಕೊಂಡು, ಮನೆಯಲ್ಲೂ ಭಾರೀ ಪ್ರಮಾಣದಲ್ಲಿ ನಗದು, ಚಿನ್ನಾಭರಣ ಇಟ್ಟಿರುತ್ತಾರೆ ಎಂದು ಭಾವಿಸಿ, ಕೊಲೆಗೆ ಸಂಚು ರೂಪಿಸಿದ್ದಾನೆ ಎಂದು ಪೊಲೀಸರು ಹೇಳಿದರು.
ಟವೆಲ್ನಲ್ಲಿ ಕುತ್ತಿಗೆ ಬಿಗಿದು ಕೊಲೆ: ಆರೋಪಿ ಕೊಲೆಗೂ ಮೊದಲ ನಾಲ್ಕೈದು ದಿನಗಳ ಕಾಲ ಪ್ರದ್ಯುನ್ಮನ ಮನೆ ಬಳಿ ಬಂದು ಯಾವ ಭಾಗದಲ್ಲಿ ಸಿಸಿ ಕ್ಯಾಮೆರಾಗಳಿವೆ, ಯಾವ ಮಾರ್ಗದಲ್ಲಿ ಬರಬೇಕು, ಮಾಲೀಕ ಯಾವ ವೇಳೆಯಲ್ಲಿ ಮನೆಯಲ್ಲಿ ಇರುತ್ತಾರೆ ಎಂಬೆಲ್ಲ ಮಾಹಿತಿ ತಿಳಿದುಕೊಂಡಿದ್ದ. ಆ ಬಳಿಕ ಜ.4ರಂದು ಅಪರಾಹ್ನ 12 ಗಂಟೆ ಸುಮಾರಿಗೆ ಮನೆಗೆ ಬಂದ ಆರೋಪಿಯನ್ನು ನೀಲಂ, ಅವರೇ ಒಳಗೆ ಕರೆದಿದ್ದಾರೆ. ಬಳಿಕ ಊಟ ಮಾಡಿದ್ದಿಯಾ? ಎಂದ ನೀಲಂ ಪ್ರಶ್ನೆಗೆ, ಆರೋಪಿ ಇಲ್ಲ ಎಂದಿದ್ದಾನೆ. ಆದರಿಂದ ಆಕೆ ಊಟ ತರಲು ಅಡುಗೆ ಮನೆಗೆ ಹೋದಾಗ, ಹಿಂದಿನಿಂದ ಬಂದು ಟವೆಲ್ನಿಂದ ಆಕೆಯ ಕುತ್ತಿಗೆ ಬಿಗಿದು ಕೊಲೆಗೈದಿದ್ದಾನೆ. ಬಳಿಕ ಕಬೋರ್ಡ್ನಲ್ಲಿದ್ದ 8 ಸಾವಿರ ರೂ. ದೋಚಿದ್ದಾನೆ. ಆದರೆ, ನಿರೀಕ್ಷಿಸಿದಷ್ಟು ಹಣ ಸಿಗದಿದ್ದಾಗ ಮೃತದೇಹದ ಮೈಮೇಲಿದ್ದ ಕಿವಿಯೊಳೆ ದೋಚಿ ಪರಾರಿಯಾಗಿದ್ದ ಎಂದು ಪೊಲೀಸರು ಹೇಳಿದರು.
ಪೊಲೀಸರ ದಿಕ್ಕು ತಪ್ಪಿಸಲು, ಟೀಶರ್ಟ್ ಮೇಲೆ ಶರ್ಟ್!:
ಜ.4ರಂದು ನೀಲಂ ಮನೆಗೆ ಬರುವಾಗ ಆರೋಪಿ ಟೀ ಶರ್ಟ್ ಮೇಲೆ ಶರ್ಟ್ ಧರಿಸಿ, ಮುಖ ಮತ್ತು ತಲೆ ಕಾಣದಂತೆ ಟವೆಲ್ನಿಂದ ಮುಚ್ಚಿಕೊಂಡಿದ್ದ. ನೀಲಂ ಕಬ್ಬಿಣದ ಡೋರ್ ತೆರೆಯುವಾಗ ಆರೋಪಿ ಟವೆಲ್ ತೆಗೆದು ಹೆಗಲ ಮೇಲೆ ಹಾಕಿಕೊಂಡಿದ್ದ. ಕೃತ್ಯ ಎಸಗಿ, ಟವೆಲ್ನಿಂದ ಮತ್ತೆ ಮುಖ ಮತ್ತು ತಲೆ ಮುಚ್ಚಿಕೊಂಡು ಸುಮಾರು ಎರಡು ಕಿ.ಮೀ. ನಡೆದುಕೊಂಡೆ ಹೋಗಿದ್ದಾನೆ. ಮಾರ್ಗ ಮಧ್ಯೆ ಶರ್ಟ್ ಮತ್ತು ಟವೆಲ್ ಎಸೆದು, ಆಟೋ ಏರಿ ಎಲೆಕ್ಟ್ರಾನಿಕ್ ಸಿಟಿಗೆ ಹೋಗಿ, ಅಲ್ಲಿಂದ ನಾಲ್ಕೈದು ಕಿ.ಮೀ.ಸುತ್ತಾಡಿ, ತಡರಾತ್ರಿಯೇ ಉತ್ತರ ಪ್ರದೇಶಕ್ಕೆ ಪರಾರಿಯಾಗಿದ್ದ ಎಂದು ಪೊಲೀಸರು ಹೇಳಿದರು.
ಹಂತಕನ ಸೆರೆಗೆ 850 ಸಿಸಿ ಕ್ಯಾಮೆರಾ ಪರಿಶೀಲನೆ :
ಕೊಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದ ಎಲೆಕ್ಟ್ರಾನಿಕ್ ಸಿಟಿ ಠಾಣೆಯ ಇನ್ಸ್ಪೆಕ್ಟರ್ ಜಿ.ಎಂ. ನವೀನ್ ನೇತೃತ್ವದ ಮೂರು ವಿಶೇಷ ತಂಡಗಳು ಬರೋಬ್ಬರಿ 850 ಸಿಸಿ ಕ್ಯಾಮೆರಾಗಳ ದೃಶ್ಯಗಳನ್ನು ಪರಿಶೀಲಿಸಿತ್ತು. ಆಗ ಅಪರಿಚಿತ ವ್ಯಕ್ತಿಯೊಬ್ಬ ಬಟ್ಟೆ ಬದಲಾಯಿಸಿ ಅನುಮಾನಾಸ್ಪದವಾಗಿ ಹೋಗಿರುವುದು ಪತ್ತೆಯಾಗಿತ್ತು. ಬಳಿಕ ಆರೋಪಿಯ ಮುಖ ಚಹರೆ ಪತ್ತೆ ಹಚ್ಚಿದಾಗ, ರಜನೀಶ್ ಎಂಬುದು ಗೊತ್ತಾಗಿ ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.
ದೂರುದಾರ ಪ್ರದ್ಯುನ್ಮ ಬಳಿ ಆರೋಪಿ ಕೆಲಸ ಮಾಡುತ್ತಿದ್ದ. ಉದ್ಯಮದಲ್ಲಿ ಪ್ರದ್ಯುನ್ಮನಷ್ಟು ಎತ್ತರಕ್ಕೆ ಬೆಳೆಯಲಿಲ್ಲ ಎಂಬ ಅಸೂಯೆ ಕೂಡ ಇತ್ತು ಎಂದು ಹೇಳಲಾಗಿದೆ. ಜತೆಗೆ ಮನೆಯಲ್ಲಿ ಹೆಚ್ಚಿನ ಹಣ ಇರುತ್ತದೆಂದು ಮನೆಗೆ ಹೋಗಿ ಮಹಿಳೆಯ ಕೊಲೆಗೈದಿದ್ದಾನೆ ಎಂಬುದು ಪ್ರಾಥಮಿಕ ತನಿಖೆಯಲ್ಲಿ ಪತ್ತೆಯಾಗಿದೆ. -ಸಿ.ಕೆ.ಬಾಬಾ, ಆಗ್ನೇಯ ವಿಭಾಗದ ಡಿಸಿಪಿ