ಸ್ವಾರ್ಥಕ್ಕಾಗಿ ಕಾರ್ಖಾನೆ ಮುಚ್ಚಿಸುವ ಪ್ರಯತ್ನ
Team Udayavani, Jun 12, 2018, 2:06 PM IST
ದೇವನಹಳ್ಳಿ: ತಾಲೂಕಿನ ಬೈರಾಪುರ ಗ್ರಾಮದ ಆಗ್ರೋ ಸಿಂಥ್ ಕೆಮಿಕಲ್ ಕಾರ್ಖಾನೆಯನ್ನು ಕೆಲವರು ಸ್ವಾರ್ಥಕ್ಕಾಗಿ ಮುಚ್ಚಿಸುವ ಪಯತ್ನ ಮಾಡುತ್ತಿದ್ದಾರೆ ಎಂದು ರೈತ ಮುನಿಯಪ್ಪ ಆರೋಪಿಸಿದರು. ನಗರದ ಪಾರಿವಾಳ ಗುಡ್ಡದ ಆಂಜನೇಯ ಸ್ವಾಮಿ ದೇವಾಲಯದ ಬಳಿ ಹಮ್ಮಿಕೊಂಡಿದ್ದ ಸಭೆಯಲ್ಲಿ ಮಾತನಾಡಿದರು.
ಕಾರ್ಖಾನೆ ಪಕ್ಕದ ಎರಡೂವರೆ ಎಕರೆ ಜಾಗದಲ್ಲಿ ದ್ರಾಕ್ಷಿ ಬೆಳೆಯುತ್ತಿದ್ದೇವೆ. ಈವರೆಗೂ ಕಾರ್ಖಾನೆಯಿಂದ ತೊಂದರೆಯಾಗಿಲ್ಲ. ಕಾರ್ಖಾನೆ ಮಾಲಿಕರು ಸ್ಥಳೀಯ ಗ್ರಾಮಕ್ಕೆ ಮೂಲಭೂತ ಸೌಕರ್ಯ ಕಲ್ಪಿಸುವ ನಿಟ್ಟಿನಲ್ಲಿದ್ದಾರೆ. ಕೆಲವರು ವಾರ್ಷಿಕ ಇಂತಿಷ್ಟು ಲಕ್ಷ ಕೊಡಿ ಎಂದು ಬೇಡಿಕೆ ಇಟ್ಟಿದ್ದಾರೆ. ಗ್ರಾಮದ ಅಭಿವೃದ್ಧಿ ಮುಖ್ಯವಾಗಿದ್ದರೆ ಇಂತಹ ದುಸ್ಸಾಹಸಕ್ಕೆ ಕೈಹಾಕುತ್ತಿರಲಿಲ್ಲ ಎಂದು ದೂರಿದರು.
ಕಾರ್ಖಾನೆ ಆಡಳಿತ ಮಂಡಳಿ ಉಪಾಧ್ಯಕ್ಷ ಮಧುಸೂದನ್, ರೈತರಿಂದ 1979ರಲ್ಲಿ ಭೂಮಿ ಖರೀದಿಸಲಾಗಿದೆ. ಅಲ್ಯೂಮಿನಿಯಂ ಫಾಸೆ#àಟ್ ತಯಾರು ಮಾಡಲಾಗುತ್ತಿದ್ದು ಕೇಂದ್ರ-ರಾಜ್ಯ ಸರ್ಕಾರದ ಧಾನ್ಯ ಶೇಖರಣಾ ಗೋದಾಮುಗಳಿಗೆ ಪೂರೈಕೆ ಮಾಡಲಾಗುತ್ತಿದೆ. ನಿಗದಿಪಡಿಸಿದ ಮಾನದಂಡದ ಅನ್ವಯವೇ ಉತ್ಪಾದನೆ ಮಾಡಲಾಗುತ್ತಿದೆ ಎಂದರು.
ಉಲ್ಲಂಘನೆ ಮಾಡಿಲ್ಲ: ಕಾರ್ಖಾನೆ ಉತ್ಪಾದನಾ ಘಟಕ ವ್ಯವಸ್ಥಾಪಕ ಕೇಶವಮೂರ್ತಿ, 3 ತಿಂಗಳಿಗೊಮ್ಮೆ ಪರಿಸರ ಮತ್ತು ಮಾಲಿನ್ಯ ತಪಾಸಣೆ ನಡೆಸಲಾಗುತ್ತಿದೆ. ಫೆ.16, 2017 ರಿಂದ ಜ.30 2021ರವರೆಗೆ ಕಾರ್ಖಾನೆ ನವೀಕರಣಗೊಂಡಿದೆ. ಯಾವುದೇ ನಿಯಮ ಉಲ್ಲಂಘನೆ ಮಾಡಿಲ್ಲ. ಶೇ.90 ಸ್ಥಳೀಯರ ಬೇಡಿಕೆಯಂತೆ ಉದ್ಯೋಗಾವಕಾಶಕ್ಕೆ ಆದ್ಯತೆ ನೀಡಿದ್ದೇವೆಂದರು.
ವಿಷಗಾಳಿ ಇದ್ದರೆ ಇಷ್ಟು ವರ್ಷ ನಾವು ಬದುಕಲು ಸಾಧ್ಯವಿತ್ತೆ. ಕಾರ್ಖಾನೆ ಖರೀದಿಸಿರುವ 11ಗಂಟೆ ಜಾಗವನ್ನು ಅದರ ಮಾಲಿಕರು ಬಿಟ್ಟು ಕೊಡುತ್ತಿಲ್ಲ ಎಂಬ ದುರಾಸೆಯಿಂದ ಇಲ್ಲಸಲ್ಲದ ಆರೋಪ ಮಾಡುವುದರಲ್ಲಿ ಅರ್ಥವಿಲ್ಲ ಎಂದು ಹೇಳಿದರು. ರೈತ ನಂದಕುಮಾರ, ರೈತ ಮುನಿನಾರಾಯಣ ಮಾತನಾಡಿದರು. ರೈತರಾದ ಮುನೇಗೌಡ, ವೆಂಕಟೇಶ್, ಚನ್ನಕೃಷ್ಣಪ್ಪ, ರಾಮಾಂಜಿನಪ್ಪ, ಮುನಿನಾರಾಯಣ, ಸಂತೋಷ್ ಇದ್ದರು.