ಕ್ಷೇತ್ರದಲ್ಲಿ ಮಿತಿ ಮೀರಿದ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣ
Team Udayavani, Apr 19, 2023, 5:05 PM IST
ನೆಲಮಂಗಲ: ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣೆ ಪಾರದರ್ಶಕವಾಗಿ ನಡೆಯಲು ಆಯೋಗ ಕಟ್ಟುನಿಟ್ಟಿನ ಆದೇಶ ನೀಡಿದ್ದರೂ, ಕ್ಷೇತ್ರದಲ್ಲಿ ದಿನೇ ದಿನೆ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಗಳು ಹೆಚ್ಚಾಗುತ್ತಿವೆ. ತಾಲೂಕಿನಲ್ಲಿ ನಾಲ್ಕು ಚೆಕ್ಪೋಸ್ಟ್ ತೆರೆಯಲಾಗಿದೆ.
ಜಿಲ್ಲೆಯ ಚುನಾವಣಾಧಿಕಾರಿಗಳು ಕ್ಷೇತ್ರಕ್ಕೆ ಬಂದಾಗ ಮಾತ್ರ ಸಂಪೂರ್ಣ ಅಲರ್ಟ್ ಆಗಿರುತ್ತವೆ, ಇಲ್ಲದಿದ್ದರೆ ಚೆಕ್ಪೋಸ್ಟ್ ಗೆ ನಿಯೋಜನೆಗೊಂಡಿರುವ ಅಧಿಕಾರಿಗಳು ಮೊಬೈಲ್ ನೋಡುವುದರಲ್ಲಿ ಕಾರ್ಯನಿರತರಾಗುತ್ತಿದ್ದಾರೆ ಎಂಬ ಆರೋಪಗಳನ್ನು ದಿನನಿತ್ಯ ಓಡಾಡುವ ವಾಹನ ಸವಾರರೇ ಮಾಡುತ್ತಿ ದ್ದಾರೆ. ತಾಲೂಕು ಕಚೇರಿಯ ಹೊರಗಿನ ಗೇಟ್ನಿಂದ ಒಳಗೆ ನಾಮಪತ್ರ ಸಲ್ಲಿಕೆ ಮಾಡಲು ಕೇವಲ 5 ಜನರು ಮಾತ್ರ ಬರ ಬೇಕು ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನು ಸ್ವಾಗತ ಮಾಡುತ್ತೇವೆ. ಆದರೆ, ಪಕ್ಷೇತರ ಹಾಗೂ ಪ್ರಾದೇಶಿಕ ಪಕ್ಷಗಳ ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆ ಮಾಡುವಾಗ ಮಾತ್ರ ಈ ನಿಯಮ ಪಾಲನೆ ಮಾಡುತ್ತಾರೆ. ಆದರೆ, ರಾಷ್ಟ್ರೀಯ ಪಕ್ಷ ಬಿಜೆ ಪಿಯವರು ಮಾಡುವಾಗ 20ಕ್ಕೂ ಹೆಚ್ಚು ಜನರನ್ನು ತಾಲೂಕು ಕಚೇರಿ ಒಳಗೆ ಕರೆದುಕೊಂಡಿದ್ದಾರೆ. ಇದು ಸರಿಯೇ, ಇದು ನಿಯಮ ಮೀರಿದಂತೆ ಅಲ್ಲವೇ? ಚುನಾವಣಾಧಿಕಾರಿಗಳು ಭೇದಭಾವ ಮಾಡಿದ್ದಾರೆ ಎಂದು ಪ್ರಜಾಕೀಯ ಪಕ್ಷದ ಮುಖಂಡರು ಮಂಗಳವಾರ ಆರ್ಒ ಕಚೇರಿ ಎದುರೆ ಗಲಾಟೆ ಮಾಡಿದರು.
ಅಕ್ರಮಗಳನ್ನು ತಡೆಯಿರಿ: 2 ದಿನಗಳಿಂದ ನಾಮಪತ್ರ ಸಲ್ಲಿಕೆ ಮಾಡುತ್ತಿರುವ ಅಭ್ಯರ್ಥಿಗಳು ನಡೆಸುತ್ತಿರುವ ಮೆರವಣಿಗೆ ಯಲ್ಲಿ ಶಾಲಾ ಮಕ್ಕಳು ಭಾಗವಹಿಸಿ ಪ್ರಚಾರ ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಮತ್ತೂಂದು ಕಡೆ ಅನುಮತಿ ಪಡೆಯದ ರಾಜಕೀಯ ಪಕ್ಷಗಳ ಪ್ರಚಾರದ ವಾಹನಗಳು ಕ್ಷೇತ್ರದಲ್ಲಿ ಓಡಾಡುತ್ತಿವೆ ಮುಖಂಡರು ಆರೋಪಿಸಿದ್ದಾರೆ.
ಚುನಾವಣೆ ಅಧಿಕಾರಿ ಯಾರೆಂದು ತಿಳಿದಿಲ್ಲ: ಹಣ ಹಂಚುವ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಬಹಿರಂಗವಾಗಿಯೇ ವಿವಿಧ ಪಕ್ಷಗಳ ಮುಖಂಡರು, ಕಾರ್ಯಕರ್ತರು ಚರ್ಚೆ ಮಾಡು ತ್ತಿದ್ದಾರೆ. ನೆಪ ಮಾತ್ರಕ್ಕೆ ಚೆಕ್ಪೊಸ್ಟ್ಗಳು ಎಂಬಂತಾಗಿದ್ದು, ಚುನಾವಣಾ ಕರ್ತವ್ಯದಲ್ಲಿ ಅಕ್ರಮ ತಡೆಯಲು ನೇಮಿಸಿದ ಅಧಿಕಾರಿಗಳು ಯಾರು ಎಂಬುದೇ ಜನರಿಗೆ ತಿಳಿಯದಂತಾಗಿ ದೆಂದು ದೂರಿದ್ದಾರೆ. ಗ್ರಾಮ ಗ್ರಾಮಗಳಿಗೆ, ಪ್ರಚಾರಕ್ಕೆ ಬಂದ ಜನರಿಗೆ ನೇರವಾಗಿ ಮದ್ಯ ಸಿಗುತ್ತಿದ್ದು, ಇದರ ಬಗ್ಗೆ ಅಬಕಾರಿ ಅಧಿಕಾರಿಗಳು ಮಾತ್ರ ಮೌನವಹಿಸಿದ್ದಾರೆ. ಕ್ಷೇತ್ರದ ಅನೇಕ ಕಡೆಗಳಲ್ಲಿ ರಾಜಕೀಯ ಪಕ್ಷಗಳು ಸಭೆ ಆಯೋಜಿಸಿ ಬಿರಿಯಾನಿ, ಮಾಂಸದೂಟ ಹಾಕುತ್ತಿರುವ ಬಗ್ಗೆ ಚರ್ಚೆಯಾಗುತ್ತಿದ್ರೂ, ಅಧಿಕಾರಿಗಳು ಮಾತ್ರ ಕ್ಷೇತ್ರದಲ್ಲಿ ಏನು ನಡೆದಿಲ್ಲ ಎಂಬಂತೆ ಕಚೇರಿಗೆ ಸೀಮಿತವಾಗಿ ದ್ದಾರೆ. ಕ್ಷೇತ್ರ ಸುತ್ತಿ ಅಕ್ರಮ ತಡೆಯಿರಿ ಎಂಬ ಒತ್ತಾಯ ಹೆಚ್ಚಾಗಿದೆ.
ಕರೆ ಸ್ವೀಕರಿಸುವುದಿಲ್ಲ: ಕ್ಷೇತ್ರದಲ್ಲಿ ನೀತಿ ಸಂಹಿತೆ ಉಲ್ಲಂಘನೆ ಹಾಗೂ ಅಕ್ರಮಗಳ ಬಗ್ಗೆ ಮಾಹಿತಿ ನೀಡಲು ಆರ್ಒ ಅವರಿಗೆ ಕರೆ ಮಾಡಿದರೇ ಸ್ವೀಕರಿಸುವುದಿಲ್ಲ ಎಂಬ ಆರೋಪಗಳು ಕೇಳಿಬಂದಿದೆ.