ಬನ್ನೇರುಘಟ್ಟ ಉದ್ಯಾನದಲ್ಲಿ ರಕ್ಷಣೆ ಅಗತ್ಯ
Team Udayavani, Apr 30, 2019, 3:00 AM IST
ಆನೇಕಲ್: ಕೆಲ ದಿನಗಳ ಹಿಂದೆ ಶ್ರೀಲಂಕದಲ್ಲಿ ನಡೆದ ಸರಣಿ ಬಾಂಬ್ ಸ್ಫೋಟದ ಹಿನ್ನೆಲೆಯಲ್ಲಿ ರಾಜ್ಯದ ಹಲವು ಕಡೆಗಳಲ್ಲಿ ವಿಶೇಷ ತಪಾಸಣೆ, ಬಿಗಿ ಭದ್ರತೆಯನ್ನು ನೀಡಲಾಗಿದೆ. ರಾಜಧಾನಿ ಮಟ್ಟದಲ್ಲಿ ಎಲ್ಲಾ ಕಡೆಗಳಲ್ಲೂ ಪೊಲೀಸರ ಹದ್ದುಗಣ್ಣಿದೆ.
ಆದರೆ, ಬೆಂಗಳೂರು ಹೊರವಲಯದಲ್ಲಿನ ಬನ್ನೇರುಘಟ್ಟ ಜೈವಿಕ ಉದ್ಯಾನವನಕ್ಕೆ ಭೇಟಿ ನೀಡುವ ಪ್ರವಾಸಿಗರ ರಕ್ಷಣೆ ಯಾರ ಜವಾಬ್ದಾರಿ, ಇಲ್ಲಿನ ಜನಸಾಗರದ ಮೇಲೆ ಉಗ್ರರ ಕಣ್ಣು ಬೀಳುವುದಕ್ಕೂ ಮೊದಲೇ ಬಿಗಿ ಭದ್ರತೆ ಕಲ್ಪಿಸ ಬೇಕಾದ ಅಗತ್ಯತೆ ಇದೆ ಎಂಬುದು ನಾಗರಿಕರ ಆಗ್ರಹವಾಗಿದೆ.
ಜನಸಾಗರ: ಬನ್ನೇರುಘಟ್ಟ ಜೈವಿಕ ಉದ್ಯಾನಕ್ಕೆ ಪ್ರತಿ ದಿನ ಸಾವಿರಾರು ಪ್ರವಾಸಿಗರು ಆಗಮಿಸುತ್ತಾರೆ. ಅದರಲ್ಲೂ ಭಾನುವಾರ, ಮತ್ತಿತರ ರಜಾ ದಿನಗಳಲ್ಲಿ ಪ್ರವಾಸಿಗರ ಸಂಖ್ಯೆ ಸರಿ ಸುಮಾರು 20 ಸಾವಿರಕ್ಕೂ ಹೆಚ್ಚು ಮುಟ್ಟಿದ ನಿದರ್ಶನಗಳಿವೆ. ಕಳೆದ ಒಂದು ತಿಂಗಳಿನಿಂದ ರಜೆ ಹಿನ್ನೆಲೆಯಲ್ಲಿ ಪ್ರತಿದಿನ 7 ಸಾವಿರದಿಂದ 8 ಸಾವಿರದವರೆಗೂ ಪ್ರವಾಸಿಗರು ಭೇಟಿ ನೀಡಿದ್ದಾರೆ.
ಮಕ್ಕಳು, ವೃದ್ಧರ ಆಗಮನ: ಉದ್ಯಾನಕ್ಕೆ ಒಂದು ವರ್ಷದ ಮಗುವನ್ನು ಕರೆದುಕೊಂಡು ಬರುವ ತಾಯಿ, ತುಂಬು ಗರ್ಭಿಣಿಯನ್ನು ಕರೆದು ಬರುವ ಗಂಡ, ಮಕ್ಕಳೊಂದಿಗೆ ಬರುವ ತಂದೆ, ತಾಯಿ, ಬಂಧುಗಳು, ಮೊಮ್ಮಕ್ಕಳೊಂದಿಗೆ ಬರುವ ತಾತ, ಅಜ್ಜಿಯಂದಿರು, ಪ್ರೇಮಿಗಳು ಹೀಗೆ ಎಲ್ಲಾ ವಯೋಮಾನದ ಜನರು ಉದ್ಯಾನವನಕ್ಕೆ ಭೇಟಿ ನೀಡಿ ಸಂತಸಗೊಂಡು ಹಿಂದಿರುತ್ತಾರೆ. ಇಂತಹ ಸಂತಸದ ಗಣಿಯಲ್ಲಿ ಅಹಿತಕ ಘಟನೆಗಳು ಜರುಗುವುದಕ್ಕೂ ಮೊದಲು ಜಾಗೃತರಾಗ ಬೇಕಿದೆ ಎಂಬುದು ಜನರ ವಾದ.
ಭದ್ರತೆ ಹೇಗೆ?: ಸದ್ಯ ಉದ್ಯಾನಕ್ಕೆ ನಾಲ್ಕು ದ್ವಾರಗಳಿವೆ. ಇದರಲ್ಲಿ ಒಂದು ಕಚೇರಿ ಸಿಬ್ಬಂದಿ, ಅಧಿಕಾರಿಗಳು ಬಂದು ಹೋಗುವ ದ್ವಾರ. ಇಲ್ಲಿ ಸಿಬ್ಬಂದಿ, ಅಧಿಕಾರಿಗಳು ಹೊರತುಪಡಿಸಿ ಯಾರೇ ಬಂದರೂ ತಮ್ಮ ಹೆಸರನ್ನು ನೋಂದಾಯಿಸಿ, ಯಾರನ್ನು ಭೇಟಿಯಾಗಲಿದ್ದೇವೆ, ಎಲ್ಲಿಂದ ಬಂದಿದ್ದೇವೆ ಎಂಬ ಮಾಹಿತಿಯನ್ನು ಪುಸ್ತಕದಲ್ಲಿ ದಾಖಲಿಸಿ ಹೋಗಬೇಕು. ಸಲ್ಪ ಮಟ್ಟಿಗೆ ಈ ದ್ವಾರ ಭದ್ರತೆಯನ್ನು ಹೊಂದಿದೆ.
ಹಿಂಬದಿ ದ್ವಾರ: ಇನ್ನು ಉದ್ಯಾನವನದ ಹಿಂಬದಿ ದ್ವಾರ ಒಂದಿದೆ. ಇಲ್ಲಿ ಸಾಕಾನೆಗಳನ್ನು ಕರೆತರುವ ಮತ್ತು ಬೋಟಿಂಗ್ಗೆ ಹೋಗುವ ದಾರಿ. ಇಲ್ಲಿ ಸಿಬ್ಬಂದಿ ಬಿಟ್ಟು ಉಳಿದ ಯಾರೂ ಹೊರಗಿನಿಂದ ಬರಲು ಆಗದು. ಅಷ್ಟಕ್ಕೂ ಈ ದ್ವಾರ ಸಾರ್ವಜನಿಕರಿಗೆ ಯಾವುದೇ ಸಂಪರ್ಕ ಕಲ್ಪಿಸುವುದಿಲ್ಲ. ಹಾಗಾಗಿ, ಇಲ್ಲಿಂದ ಅಪರಿಚಿತರು ಯಾರೂ ಒಳಬರಲು ಆಗುವುದಿಲ್ಲ
ನಿರ್ಗಮನ ದ್ವಾರ: ಉದ್ಯಾನವನದ ಮುಖ್ಯದ್ವಾರದ ಪಕ್ಕದಲ್ಲೇ ನಿರ್ಗಮದ ದಾರಿ ಇದೆ. ಇಲ್ಲಿಂದಲೇ ಉದ್ಯಾನವನಕ್ಕೆ ಬರುವ ಎಲ್ಲಾ ಪ್ರವಾಸಿಗರು ಹೊರ ಹೋಗಬೇಕಿದೆ. ಇಲ್ಲಿ ನಿವೃತ್ತ ಸೈನಿಕರು ದ್ವಾರದಲ್ಲಿ ಇರುವರಾದರೂ ಯಾರೊಬ್ಬರನ್ನೂ ಒಳಗೆ ಈ ದ್ವಾರದಿಂದ ಕಳುಹಿಸುವುದಿಲ್ಲ.
ಮುಖ್ಯ ದ್ವಾರ: ಇದೇ ಇಡೀ ಉದ್ಯಾನವನದ ಮುಖ್ಯದ್ವಾರ. ಇಲ್ಲಿಂದಲೇ ಪ್ರತಿದಿನ ಸಾವಿರಾರು ಪ್ರವಾಸಿಗರು ಉದ್ಯಾನವದೊಳಗೆ ಪ್ರವೇಶ ಪಡೆಯುತ್ತಾರೆ. ಇಲ್ಲಿಂದ ಒಳಬರುವ ಪ್ರವಾಸಿಗರು ಒಂದಷ್ಟು ಮಂದಿ ಸಫಾರಿ ವೀಕ್ಷಣೆಗೆಂದು ಸಾಲಿನಲ್ಲಿ ನಿಲ್ಲುತ್ತಾರೆ. ಇಲ್ಲೂ ಸಾವಿರಾರು ಜನರು ಒಂದೆಡೆ ಜಮೆಯಾಗಿರುತ್ತಾರೆ. ಇನ್ನು ಮೃಗಾಲಯ ವೀಕ್ಷಣೆಗೆ ಬರುವ ಪ್ರವಾಸಿಗರು ಎರಡು ಕಿ.ಮೀ. ಸುತ್ತಳತೆಯಲ್ಲಿನ ಪ್ರಾಣಿ, ಪಕ್ಷಿಗಳ ವೀಕ್ಷಣೆಗೆ ಮುಂದಾಗುತ್ತಾರೆ. ಎರಡು ಕಿ.ಮೀ. ಸುತ್ತಳೆಯಲ್ಲಿ ಸರಿಸುಮಾರು 20 ಸಾವಿರ ಜನ ಒಮ್ಮೊಮ್ಮೆ ಜಮೆಯಾಗುತ್ತಾರೆ. ಇಷ್ಟು ಜನರ ರಕ್ಷಣೆಯ ಹೊಣೆ ಯಾರದ್ದು ಎಂಬುದೇ ದೊಡ್ಡ ಪ್ರಶ್ನೆಯಾಗಿದೆ.
ಟಿಕೆಟ್ಗಾಗಿ ಸರತಿ ಸಾಲು: ಉದ್ಯಾವನದಲ್ಲಿ ಅತೀ ಹೆಚ್ಚು ಜನ ಒಂದೇ ಕಡೆ ಕಾಣುವುದು ಮುಖ್ಯದ್ವಾರದ ಟಿಕೆಟ್ ನೀಡುವ ಸ್ಥಳದಲ್ಲಿ. ಇಲ್ಲಿ ಸಾವಿರಾರು ಪ್ರವಾಸಿಗರು ಕಾಯುತ್ತ ನಿಲ್ಲುತ್ತಾರೆ. ಇಂತಹ ಸೂಕ್ಷ್ಮ ಜಾಗದಲ್ಲಿ ಉಗ್ರಗಾಮಿಗಳು ತಮ್ಮ ಮೃಗೀಯ ವಿದ್ವಂಸಕ ಕೃತ್ಯಗಳನ್ನು ಮಾಡಲು ಕಾದು ಕುಳಿತಿರುತ್ತಾರೆ.
ಭದ್ರತೆ ಅವಶ್ಯಕತೆ: ಈ ಹಿಂದೆ ಬೆಂಗಳೂರಿನಲ್ಲಿ ಬಾಂಬ್ ಸ್ಫೋಟವಾಗಿತ್ತು ಅಂದಾದರೂ ಉದ್ಯಾನವನದ ಭದ್ರತೆಗೆ ಹೆಚ್ಚು ನಿಗಾ ವಹಿಸಬೇಕಿತ್ತು. ಆದರೆ, ಇವತ್ತಿನ ವರೆಗೂ ಯಾರೂ ಸಹ ಇಲ್ಲಿನ ಭದ್ರತೆಗೆ ಆಸಕ್ತಿ ತೋರದಿರುವುದು ಇಚ್ಛಾಶಕ್ತಿಯ ಕೊರತೆ ಎದ್ದು ಕಾಣುತ್ತಿದೆ.
ತಪಾಸಣೆ ಇಲ್ಲ: ಉದ್ಯಾನವನಕ್ಕೆ ಬರುವ ಪ್ರವಾಸಿಗರ ಬಳಿ ಕೇಲವ ಒಳ ಹೋಗುವ ಟಿಕೆಟ್ ತಪಾಸಣೆ ಮಾಡುತ್ತಾರೆ ಹೊರತು ಪ್ರವಾಸಿಗರು ತರುವ ಯಾವುದೇ ಬ್ಯಾಗ್ಗಳನ್ನು ಪರಿಶೀಲಿಸುವುದಿಲ್ಲ. ಟಿಕೆಟ್ ಪಡೆದ ಬಳಿಕ ಎಷ್ಟು ದೊಡ್ಡ ಬ್ಯಾಗ್ ತೆಗೆದುಕೊಂಡು ಹೋದರೂ ಯಾರೂ ಕೇಳುವುದಿಲ್ಲ.
ಪೊಲೀಸರಿಂದ ನೋಟಿಸ್: ಬನ್ನೇರುಘಟ್ಟ ಜೈವಿಕ ಉದ್ಯಾನ ಬೆಂಗಳೂರು ಗ್ರಾಮಾಂತರ ಜಿಲ್ಲಾ ಪೊಲೀಸ್ ವ್ಯಾಪ್ತಿಗೆ ಬರುತ್ತದೆ. ಆನೇಕಲ್ ಉಪವಿಭಾಗದ ಬನ್ನೇರುಘಟ್ಟ ಪೊಲೀಸ್ ಠಾಣೆಗೆ ಒಳ ಪಟ್ಟಿದೆ. ಉದ್ಯಾನವನಕ್ಕೆ ಸಾವಿರಾರು ಪ್ರವಾಸಿಗರು ಬಂದು ಹೋಗುವುದರ ಬಗ್ಗೆ ಬನ್ನೇರುಘಟ್ಟ ಠಾಣೆಗೂ ಮಾಹಿತಿ ಇದೆ. ಆಗಿಂದಾಗ್ಗೆ ಅಲ್ಲಿಗೆ ಒಂದಿಬ್ಬರು ಪೊಲೀಸರು ಬಂದು ಹೋಗುತ್ತಿದ್ದರು. ಇತ್ತೀಚೆಗೆ ಅದೂ ಇಲ್ಲವಾಗಿದೆ.
ಉದ್ಯಾನದ ಅಧಿಕಾರಿಗಳಿಗೆ ನೋಟಿಸ್: ಶ್ರೀಲಂಕ ಘಟನೆ ಹಿನ್ನೆಲೆಯಲ್ಲಿ ಆನೇಕಲ್ ಉಪಭಾಗದ ಡಿವೈಎಸ್ಪಿ ನಂಜುಂಡೇಗೌಡ ಅವರನ್ನು ಉದ್ಯಾನವನದ ಭದ್ರತೆ ಬಗ್ಗೆ ಪ್ರಶ್ನಿಸಿದಕ್ಕೆ, ಅಲ್ಲಿಗೆ ಬರುವ ಪ್ರವಾಸಿಗರ ಸಂಖ್ಯೆ ಬಗ್ಗೆ ನಮಗೆ ಮಾಹಿತಿ ಇದೆ. ಉದ್ಯಾನದ ಸಮೀಪದಲ್ಲೇ ಪೊಲೀಸ್ ಠಾಣೆ ಸಹ ಇದೆ. ಆಗಿಂದಾಗ ಪೊಲೀಸರು ಅತ್ತ ಗಸ್ತು ಮಾಡುತ್ತಿರುತ್ತಾರೆ. ಇದರ ನಡುವೆಯೂ ಉದ್ಯಾನವನ ಅಧಿಕಾರಿಗಳಿಗೆ ಒಂದು ನೋಟಿಸ್ ಜಾರಿ ಮಾಡಲು ಬನ್ನೇರುಘಟ್ಟ ಸಬ್ ಇನ್ಸ್ಪೆಕ್ಟರ್ಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.
27 ಕ್ಯಾಮರಾ: ಸದ್ಯ ಉದ್ಯಾನವನದಲ್ಲಿ ಸಿಬ್ಬಂದಿ ತಪಾಸಣೆ ಮಾಡದಿದ್ದರೂ ಪ್ರತಿಯೊಂದು ಮೂಲೆಯಲ್ಲಿ ಸಿಸಿ ಕ್ಯಾಮರಾಗಳನ್ನು ಅಲವಡಿಸಲಾಗಿದೆ. ಉದ್ಯಾನವನದಲ್ಲಿ ಬಂದು ಹೋಗುವ ಎಲ್ಲರ ಮಾಹಿತಿಯೂ ಅದರಲ್ಲಿ ಸೆರೆಯಾಗಿರುತ್ತದೆ. ಅಷ್ಟಕ್ಕೂ ಉದ್ಯಾನವನದಲ್ಲಿ ಬಾಂಬ್ ಮುಚ್ಚಿಡುವಂತಹ ಜಾಗಗಳಿಲ್ಲ. ಇದ್ದರೂ ಅತ್ತ ಪ್ರವಾಸಿಗರು ಹೋಗುವುದಿಲ್ಲ. ಇನ್ನು ಜನ ಇರುವ ಕಡೆಗಳಲ್ಲಿ ನಮ್ಮ ಸಿಬ್ಬಂದಿ, ನಿವೃತ್ತ ಸೇನಾ ಸಿಬ್ಬಂದಿ ಸಹ ಗಸ್ತು ತಿರುಗುತ್ತಿರುತ್ತಾರೆ ಎಂದು ಬನ್ನೇರುಘಟ್ಟ ಜೈವಿಕ ಉದ್ಯಾನವನದ ಕಾರ್ಯನಿರ್ವಾಹಕ ನಿರ್ದೇಶಕ ಡಾ.ಸಂಜಯ್ ಬಿಜ್ಜೂರ್ ಹೇಳಿದರು.
ಉಗ್ರಗಾಮಿ ನಿರೋಧ ತಂಡ: ಕಳೆದ 15 ದಿನಗಳ ಹಿಂದೆ ಉಗ್ರಗಾಮಿ ನಿರೋಧಕ ತಂಡ ಉದ್ಯಾನವನಕ್ಕೆ ಭೇಟಿ ನೀಡಿ ಇಲ್ಲಿನ ವ್ಯವಸ್ಥೆ ಬಗ್ಗೆ ಮಾಹಿತಿ ತೆಗೆದು ಕೊಂಡು ಹೋಗಿದೆ. ಅವರ ಯಾವುದೇ ಸೂಚನೆಯಾಗಲಿ, ವರದಿಯಾಗಲಿ ಇನ್ನೂ ನೀಡಿಲ್ಲ ಎಂದು ಡಾ.ಸಂಜಯ್ ಬಿಜ್ಜೂರ್ ತಿಳಿಸಿದರು.
ಮೆಟಲ್ ಡಿಟೆಕ್ಟರ್: ಉದ್ಯಾನವದ ಪ್ರವೇಶ ದ್ವಾರಲ್ಲಿ ಮೆಟಲ್ ಡಿಟೆಕ್ಟರ್(ಲೋಹದ ಪತ್ತೆದಾರ)ಹಲವಡಿಸಲು ನಾವು ಸಿದ್ಧರಾಗಿದ್ದೇವೆ. ಇದಕ್ಕಾಗಿ ಪೊಲೀಸರ ಸಲಹೆ ಪಡೆಯಲು ಪತ್ರ ಬರೆಯಲಾಗಿದೆ ಎಂದು ಮಾಹಿತಿ ನೀಡಿದರು.
ಶ್ರೀಲಂಕದಲ್ಲಿನ ಬಾಂಬ್ ಸ್ಫೋಟ ಘಟನೆಯಿಂದ ನಾವು ಜಾಗೃತರಾಗಿದ್ದೇವೆ. ಬನ್ನೇರುಘಟ್ಟ ಜೈವಿಕ ಉದ್ಯಾನವನಕ್ಕೆ ಈಗಾಗಲೇ ಬರುವ ಪ್ರವಾಸಿಗರ ರಕ್ಷಣೆಯ ಸಿದ್ಧತೆಗಳ ಕುರಿತು ಹಾಗೂ ಸಿಬ್ಬಂದಿಗೆ ತಪಾಸಣೆಯ ತರಬೇತಿಗಾಗಿ ಬೆಂಗಳೂರು ಗ್ರಾಮಾಂತರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಪತ್ರ ಬರೆಯಲಾಗಿದೆ.
-ಡಾ.ಸಂಜಯ್ ಬಿಜ್ಜೂರ್, ಕಾರ್ಯನಿರ್ವಾಹಕ ನಿರ್ದೇಶಕರು, ಬನ್ನೇರುಘಟ್ಟ ಜೈವಿಕ ಉದ್ಯಾನವನ
* ಮಂಜುನಾಥ ಎನ್.ಬನ್ನೇರುಘಟ್ಟ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Electricity problem: ಬೇಸಿಗೆ ಬೆನ್ನಲ್ಲೇ ಕಾಡುತ್ತಿದೆ ವಿದ್ಯುತ್ ಸಮಸ್ಯೆ
Kanakapura ಚುನಾವಣೆ ಉಸ್ತುವಾರಿ ಹೊಣೆ ನಾನೇ ಹೊತ್ತುಕೊಳ್ಳುವೆ: ಸಿಪಿವೈ
Lok sabha polls: ಬೆಂ. ಗ್ರಾಮಾಂತರ; ಡಾ.ಮಂಜುನಾಥ್ ಸ್ಪರ್ಧೆ
Bannerghatta Biological Park: ಚಿರತೆ ಮರಿಗಳಿಗೆ ಉದ್ಯಾನವನದ ಸಿಬ್ಬಂದಿ ಆಸರೆ
Road Dispute: ರಸ್ತೆ ವಿವಾದ; ಪೊಲೀಸ್ ಠಾಣೆ ಮೆಟ್ಟಿಲೇರಿದ ಪ್ರಕರಣ
MUST WATCH
ಹೊಸ ಸೇರ್ಪಡೆ
AAP ‘ಮಹಾರ್ಯಾಲಿ’ಯಲ್ಲಿ ಭಾಗಿಯಾಗಲಿರುವ ರಾಹುಲ್,ಖರ್ಗೆ,ಪವಾರ್, ಅಖಿಲೇಶ್
Lok Sabha Election: ಮಹಿಳೆ ಅಡುಗೆ ಮನೆಗಷ್ಟೇ ಸೀಮಿತವಲ್ಲ: ಗಾಯತ್ರಿ ಸಿದ್ದೇಶ್ವರ
Kannada Cinema; ಚಿತ್ರೀಕರಣ ಮುಗಿಸಿದ ‘ವಿದ್ಯಾರ್ಥಿ ವಿದ್ಯಾರ್ಥಿನಿಯರೇ’
ಲೋಕಸಭಾ ಚುನಾವಣೆ: ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರ ಸೂರಜ್ ನಾಯ್ಕ ಸೋನಿ ?
JDS; ಮೂವರು ಅಭ್ಯರ್ಥಿಗಳ ಪಟ್ಟಿ ಪ್ರಕಟ: ಕೋಲಾರಕ್ಕೆ ಮಲ್ಲೇಶ್ ಬಾಬು