18.88 ಲಕ್ಷ ಮಂದಿ ನಿವೇಶನ ರಹಿತರು: ಸಚಿವ ಸೋಮಣ್ಣ
Team Udayavani, Dec 29, 2022, 12:22 AM IST
ಬೆಳಗಾವಿ: ರಾಜ್ಯದಲ್ಲಿ ಸುಮಾರು 18.88 ಲಕ್ಷ ನಿವೇಶನ ರಹಿತರು ಇದ್ದು, ನಾಲ್ಕು ವರ್ಷಗಳಲ್ಲಿ 10,684 ನಿವೇಶನ ರಹಿತರಿಗೆ ಹಕ್ಕು ಪತ್ರ ವಿತರಿಸಲಾಗಿದೆ. ಅದರಲ್ಲಿ 4,498 ಪರಿಶಿಷ್ಟ ಜಾತಿ, ಪಂಗಡದವರು ಇದ್ದಾರೆ. ರಾಜ್ಯಾದ್ಯಂತ ಸುಮಾರು 5,800 ಎಕ್ರೆ ಜಮೀನು ಪಡೆಯುವಿಕೆ ನಿಟ್ಟಿನಲ್ಲಿ ಪತ್ರ ಬರೆದಿದ್ದೇನೆಂದು ವಸತಿ ಸಚಿವ ವಿ.ಸೋಮಣ್ಣ ಹೇಳಿದರು.
ಪರಿಷತ್ನಲ್ಲಿ ಬುಧವಾರ ಕಾಂಗ್ರೆಸ್ ಸದಸ್ಯ ಡಾ| ಡಿ.ತಿಮ್ಮಯ್ಯ ಪ್ರಶ್ನೆಗೆ ಉತ್ತರಿಸಿ, 2018ರ ಸಮೀಕ್ಷೆ ಪ್ರಕಾರ 18.88 ಲಕ್ಷ ನಿವೇಶನ ರಹಿತರಿದ್ದು, ಬೇಡಿಕೆಗೆ ಹೋಲಿಸಿದರೆ ಕಡಿಮೆ ನಿವೇಶನ ನೀಡಲಾಗಿದೆ ಎಂಬ ಕಳಕಳಿ ನಮಗೂ ಇದೆ.
ಆದರೆ, ನಿವೇಶನ ನೀಡಿಕೆಗೆ ಅಗತ್ಯ ಜಮೀನು ಬೇಕಾಗಿದೆ. ಇದಕ್ಕೆ ಗ್ರಾಮೀಣಾಭಿವೃದ್ಧಿ ಪಂಚಾಯತ್ರಾಜ್ ಇಲಾಖೆಯ ವರು, ನಗರ ಸ್ಥಳೀಯ ಸಂಸ್ಥೆಗಳ ಸಹಕಾರವೂ ಅವಶ್ಯವಾಗಿದೆ ಎಂದರು. ಸರಕಾರಿ ಜಮೀನು ಲಭ್ಯವಿಲ್ಲದ ಕಡೆಗಳಲ್ಲಿ ಮಾತ್ರ ವಸತಿಗೆ ಸೂಕ್ತ ಖಾಸಗಿ ಜಮೀನನ್ನು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಜಮೀನು ಖರೀದಿ ಸಮಿತಿ ಖರೀದಿಗೆ ಕ್ರಮ ಕೈಗೊಳ್ಳಲಾಗುತ್ತಿದೆ. ಮುಖ್ಯಮಂತ್ರಿಗಳ ಗ್ರಾಮೀಣ ಹಾಗೂ ನಗರ ನಿವೇಶನ ಯೋಜನೆಗಳಡಿ ಪ.ಜಾತಿ ಫಲಾನುಭವಿಗಳಿಗೆ ಶೇ.17.15, ಪ.ಪಂಗಡ ಫಲಾನಭವಿಗಳಿಗೆ ಶೇ.6.95 ಒಟ್ಟು 24.10 ಮೀಸಲಾತಿ ಅನುಸರಿಸಲಾಗುತ್ತದೆ ಎಂದರು.