ಶತಾಯುಷಿ ಅಣ್ಣಾ ಗೌಡಗೆ ಸತ್ಕಾರ
Team Udayavani, Dec 23, 2019, 4:29 PM IST
ಚಿಕ್ಕೋಡಿ: ಶತಾಯುಷಿಗಳು ಇಂದಿನ ಯುವಕರಿಗೆ ಆದರ್ಶಪ್ರಾಯರಾಗಿದ್ದು, ಅವರು ಸೇವನೆ ಮಾಡುವ ಆಹಾರ ಪದ್ಧತಿ ಮತ್ತು ಜೀವನ ಶೈಲಿಯನ್ನು ಯುವಕರು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಆರೋಗ್ಯವಂತ ಸಮಾಜ ಕಟ್ಟುವಲ್ಲಿ ಪಾತ್ರ ವಹಿಸಬೇಕು ಎಂದು ವಿಧಾನ ಪರಿಷತ್ ಮುಖ್ಯ ಸಚೇತಕರಾದ ಮಹಾಂತೇಶ ಕವಟಗಿಮಠ ಹೇಳಿದರು.
ರವಿವಾರ ತಾಲೂಕಿನ ಚಿಂಚಣಿ ಗ್ರಾಮದ ಸಿದ್ಧಪ್ರಭು ಸಂಸ್ಥಾನ ಮಠದ ಕನ್ನಡಭವನದಲ್ಲಿ ಶತಾಯುಷಿ ಅಣ್ಣಾಗೌಡ ಲಕ್ಷ್ಮಣಗೌಡ ಪಾಟೀಲರಿಗೆ ಹಮ್ಮಿಕೊಂಡ ನಾಗರಿಕ ಸನ್ಮಾನ ಹಾಗೂ ಅಭಿನಂದನ ಗ್ರಂಥಗಳ ಲೋಕಾರ್ಪಣೆ ಸಮಾರಂಭವನ್ನುದ್ದೇಶಿಸಿ ಅವರು ಮಾತನಾಡಿ, ಗಾಂಧಿಧೀವಾದಿ,ಶರಣಜೀವಿ ಹಾಗೂ ಸದಾ ಕಾಯಕಯೋಗಿಯಾಗಿ ಸಮಾಜದ ಉನ್ನತಿಗಾಗಿ ಶ್ರಮಿಸಿದ ಚಿಂಚಣಿಯ ಶತಾಯುಷಿ ಅಣ್ಣಾಗೌಡ ಲಕ್ಷ್ಮಣಗೌಡ ಪಾಟೀಲರು ನೇರ ನಡೆನುಡಿಯಿಂದ ಸಮಾಜದಲ್ಲಿ ನೊಂದ ಜನರಿಗೆ ನ್ಯಾಯ ಒದಗಿಸುವಲ್ಲಿ ಮಾಡಿದ ಗೌಡಕಿ ಮನೆತನ ಅವರ ಬದುಕು ಆದರ್ಶಮಯವಾಗಿದೆ ಎಂದರು. ಸಾನ್ನಿಧ್ಯ ವಹಿಸಿದ್ದ ನಿಡಸೋಸಿಯ ಜಗದ್ಗುರು ಪಂಚಮ ಶಿವಲಿಂಗೇಶ್ವರ ಸ್ವಾಮೀಜಿ ಮಾತನಾಡಿದರು.
ಶಿಕ್ಷಕ ಕುಮಾರ ಹೊನ್ನಾಯ್ಕ ಬರೆದಿರುವ “ನಮ್ಮೂರ ಹಿರಿಯ ಚೇತನ ಶತಾಯುಷಿ ಅಣ್ಣಾಗೌಡ ಲಕ್ಷ್ಮಣಗೌಡ ಪಾಟೀಲ’ ಅಭಿನಂದನ ಗ್ರಂಥವನ್ನು ಗದಗದ ಜಗದ್ಗುರು ಡಾ. ತೋಂಟದ ಸಿದ್ದರಾಮ ಸ್ವಾಮೀಜಿ ಲೋಕಾರ್ಪಣೆಗೊಳಿಸಿ ಮಾತನಾಡಿದರು. ಚಿಕ್ಕೋಡಿಯ ಸಂಪಾದನಾ ಸ್ವಾಮೀಜಿ, ಆಡಿಯ ಸಿದ್ದೇಶ್ವರ ಸ್ವಾಮೀಜಿ, ಮಜಲಟ್ಟಿಯ ಬಸವಪ್ರಭು ಮಹಾರಾಜರು, ಗಿರಗಾಂವದ ನರಸಿಂಗೇಶ್ವರ ಮಹಾರಾಜರು, ಮಾಜಿ ಸಚಿವ ಎ.ಬಿ. ಪಾಟೀಲ,ವೀರಕುಮಾರ ಪಾಟೀಲ, ಶಾಸಕ ಕಾಕಾಸಾಹೇಬ ಪಾಟೀಲ, ಸಹಕಾರಿ ಧುರೀಣ ಡಿ.ಟಿ. ಪಾಟೀಲ,ಬಿ.ಆರ್. ಸಂಗಪ್ಪಗೋಳ, ಎಸ್.ವೈ.ಹಂಜಿ, ವೀರೇಶ ಪಾಟೀಲ, ಬಸವರಾಜ ಪಾಟೀಲ, ಸಿದ್ದೇಶ್ವರ ಪಾಟೀಲ, ಸಂದೀಪ ಪಾಟೀಲ ಸೇರಿದಂತೆ ಇತರರು ಇದ್ದರು.