ಒಂದಿಂಚು ನೀರು ಪಡೆದವನೇ ಇಲ್ಲಿ ಸಾಹುಕಾರ!
Team Udayavani, Jan 12, 2019, 9:33 AM IST
ಬೆಳಗಾವಿ: ಇಲ್ಲಿ ತೊಟ್ಟು ಅಂತರ್ಜಲ ಪಡೆಯಲು ದೊಡ್ಡ ಸಾಹಸ ಮಾಡಬೇಕು, ಲಕ್ಷಗಟ್ಟಲೇ ರೊಕ್ಕ ಸುರಿಯಬೇಕು. ಬೋರ್ವೆಲ್ ತೆಗೆಯಲು ಹೋದರೆ ಅಲ್ಲಿ ಯಂತ್ರದ ಕರ್ಕಶ ಶಬ್ದ ಬರುತ್ತದೆಯೇ ಹೊರತು ಹನಿ ನೀರೂ ಚಿಮ್ಮದು. ಒಂದೊಮ್ಮೆ ಬೋರ್ವೆಲ್ ಹೊಡೆಸಿದರೆ ಅಲ್ಲಿ ಒಂದಿಂಚು ನೀರು ಬಂದರೆ ಆಗ ಬೋರ್ ಹೊಡೆಸಿದವನೇ ಊರಿನ ಸಾಹುಕಾರ.
ಇದು ಸದಾ ಬರಗಾಲದ ನಾಡು ಎಂದೇ ಹಣೆಪಟ್ಟಿ ಹೊತ್ತಿರುವ ರಾಮದುರ್ಗ ತಾಲೂಕಿನ ದಾರುಣ ಚಿತ್ರ. ಇಲ್ಲಿಯ ಜನ ಸಮೃದ್ಧ ಮಳೆ, ಫಲವತ್ತಾದ ಬೆಳೆ, ಕೈತುಂಬ ಹಣ ಎಂಬುದನ್ನೇ ಮರೆತುಬಿಟ್ಟಿದ್ದಾರೆ. ಇತ್ತೀಚಿನ ದಿನಗಳಲ್ಲಂತೂ ಜನ ಇದಾವುದನ್ನೂ ನೋಡಿಯೇ ಇಲ್ಲ.
ಮಳೆಯನ್ನೇ ನಂಬಿರುವ ರಾಮದುರ್ಗ ತಾಲೂಕಿನಲ್ಲಿ ಅಂತರ್ಜಲ ಅಕ್ಷರಶಃ ಕಣ್ಮರೆಯಾಗಿದೆ. ಅದರಲ್ಲೂ ಉತ್ತರ ಭಾಗದಲ್ಲಿ ಸ್ಥಿತಿ ಇನ್ನೂ ಶೋಚನೀಯ. ನೀವು ಬೋರ್ವೆಲ್ ತೆಗೆಯಬೇಕೆಂದರೆ ಕನಿಷ್ಠ 700- 800 ಅಡಿಗಳಷ್ಟು ಭೂಮಿ ಕೊರೆಯಬೇಕು. ಅಷ್ಟಾದರೂ ನೀರು ಬರುತ್ತದೆ ಎಂಬುದು ಖಾತ್ರಿ ಇಲ್ಲ. ಒಂದು ಕಡೆ 20 ಬೋರ್ವೆಲ್ ಹಾಕಿಸಿದ್ದಾರೆ. ಆದರೆ ಎಲ್ಲಿಯೂ ನೀರು ಕಾಣಿಸಿಲ್ಲ. ಸುಮಾರು 900 ಅಡಿಗಳಷ್ಟು ಭೂಮಿ ಕೊರೆದು ಒಂದಿಂಚು ನೀರು ಪಡೆಯಲು ಕನಿಷ್ಟ ಐದಾರು ಲಕ್ಷ ರೂ. ವೆಚ್ಚ ಮಾಡಬೇಕು. ಹೀಗಾಗಿ ಹೊಸ ಬೋರ್ವೆಲ್ ಹಾಕಿಸಲು ಯಾರೂ ಧೈರ್ಯ ಮಾಡುತ್ತಿಲ್ಲ.
ಹಳ್ಳಿಗಳು ಖಾಲಿಯಾಗುವ ಆತಂಕ: ಬರ ಪೀಡಿತ ಪ್ರದೇಶಕ್ಕೆ ರಾತ್ರಿ ಸಮಯದಲ್ಲಿ ಪರಿಶೀಲನೆಗೆ ಬಂದಿದ್ದ ಕಂದಾಯ ಸಚಿವರ ಮುಂದೆ ತಾಲೂಕಿನ ಉತ್ತರ ಭಾಗದ ಕೆ.ಚಂದರಗಿ ಸೇರಿದಂತೆ ಹತ್ತಾರು ಹಳ್ಳಿಗಳ ರೈತರು ಸಂಕಟ ತೋಡಿಕೊಂಡರು. ಹಳ್ಳಿಗಳಲ್ಲಿ ಜನರ ಪ್ರಮಾಣ ಕಡಿಮೆಯಾಗಿದ್ದು, ಇನ್ನೆರಡು ವರ್ಷ ಇಂಥ ಸ್ಥಿತಿ ಮುಂದುವರಿದರೆ ನಿಮಗೆ ಯಾವ ಹಳ್ಳಗಳಲ್ಲೂ ಜನ ಸಿಗುವುದಿಲ್ಲ. ಸರ್ಕಾರ ನಮ್ಮ ಮೇಲೆ ಕಣ್ಣು ತೆರೆಯಬೇಕು ಎಂದು ಮನವಿ ಮಾಡಿದರು.
ನಮ್ಮದು ಮಳೆಗಾಲ ವಂಚಿತ, ನೀರಾವರಿ ವಂಚಿತ ಪ್ರದೇಶ. ಇನ್ನೆರಡು ವರ್ಷ ಇದೇ ಪರಿಸ್ಥಿತಿ ಮುಂದುವರಿದರೆ ತಾಲೂಕಿನ ಅನೇಕ ಹಳ್ಳಿಗಳು ಜನರೇ ಇಲ್ಲದ ಊರಾಗಲಿವೆ. ಈಗಲೇ ಒಂದು ರೊಟ್ಟಿಯಲ್ಲಿ ನಾಲ್ಕು ಜನ ತಿನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ. ಹೊಟ್ಟೆಪಾಡಿಗಾಗಿ ಅನಿವಾರ್ಯವಾಗಿ ಊರು ಬಿಡುವ ಪರಿಸ್ಥಿತಿ ಬಂದಿದೆ ಎಂದು ಹನುಮಂತ ಕೌಜಲಗಿ ಹೇಳುವಾಗ ಇಡೀ ತಾಲೂಕಿನ ಭೀಕರ ಬರದ ಚಿತ್ರ ಕಣ್ಣಿಗೆ ಕಟ್ಟುತ್ತದೆ.
ಗುಳೇ ಅನಿವಾರ್ಯ
ಸರಕಾರ ಗುಳೇ ಹೋಗಬೇಡಿ ಎನ್ನುತ್ತಿದೆ. ಆದರೆ ಮನೆಯಲ್ಲಿ ಬಹಳ ಜನ ಇರುವಾಗ ಜೀವನ ನಡೆಸುವುದು ಕಷ್ಟದ ಕೆಲಸ. ಕೈಗೆ ಉದ್ಯೋಗ ಇಲ್ಲಾ ಎಂದರೆ ಮನಸ್ಸು ಬೇರೆ ಕಡೆ ವಾಲುತ್ತದೆ. ಹೀಗಾಗಿ ಎಷ್ಟೋ ಜನ ಅನಿವಾರ್ಯವಾಗಿ ಕಳೆದ ನಾಲ್ಕು ತಿಂಗಳಿಂದ ನೆರೆಯ ಗೋಕಾಕ, ಬೆಳಗಾವಿ ಅಲ್ಲದೆ ಮಹಾರಾಷ್ಟ್ರದ ಕೊಲ್ಲಾಪುರ, ಮೀರಜ, ಗೋವಾಕ್ಕೆ ಕೆಲಸದ ಮೇಲೆ ಹೋಗುತ್ತಿದ್ದಾರೆ. ಈಗಲೇ ಎಲ್ಲ ಕಡೆ ಕುಡಿಯುವ ನೀರಿನ ಸಮಸ್ಯೆ ಭೀಕರವಾಗುತ್ತಿದೆ. ಬೇಸಿಗೆ ಬಂತೆಂದರೆ ನಮಗೆ ನೀರಿನ ತಾಪತ್ರಯ ತಪ್ಪಿದ್ದಲ್ಲ. ಈಗ ಸರ್ಕಾರ ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ನೀಡುತ್ತಿದೆ. ಕೆಲಸ ಮುಗಿಸಿ ಮನೆಗೆ ಹೋಗಿ ಅರಾಮ್ ಮಲಗುವಂತಿಲ್ಲ. ಸುಮ್ಮನೇ ಕೂಡುವ ಹಾಗಿಲ್ಲ. ರಾತ್ರಿಯಿಡೀ ನೀರಿಗಾಗಿ ಗುದ್ದಾಡಬೇಕು. ಅನೇಕ ಊರುಗಳಲ್ಲಿ ಮಧ್ಯರಾತ್ರಿಯಾದರೂ ನೀರು ತರುವ ಚಿತ್ರ ಕಾಣುತ್ತಲೇ ಇರುತ್ತದೆ ಎನ್ನುತ್ತಾರೆ ಕೆ. ಚಂದರಗಿ ಗ್ರಾಮದ ಮಾರುತಿ ಮಲ್ಲಪ್ಪ ದ್ಯಾಮಣ್ಣಿ.
ನೀರಾವರಿ ಬಂದರೆ ಉಸಿರು
ಮಳೆಯ ಮೇಲೆ ರಾಮದುರ್ಗ ತಾಲೂಕಿನ ಜನ ಆಸೆಯನ್ನೇ ಬಿಟ್ಟಿದ್ದಾರೆ. ಈಗ ಅವರಿಗೆ ಕಾಣುತ್ತಿರುವುದು ನೀರಾವರಿ ಸೌಲಭ್ಯ ಮಾತ್ರ. ತಾಲೂಕಿನಲ್ಲಿ ಎರಡು ದೊಡ್ಡ ನೀರಾವರಿ ಯೋಜನೆಗಳಿದ್ದರೂ ಅವುಗಳ ಲಾಭ ಉತ್ತರ ಭಾಗದ ಕೆ. ಚಂದರಗಿ, ಎಂ. ಚಂದರಗಿ, ಗುದಿಗೊಪ್ಪ., ಮುರಕಟ್ನಾಳ ಸೇರಿದಂತೆ ಸುಮಾರು 15 ಹಳ್ಳಿಗಳಿಗೆ ಸಿಕ್ಕಿಲ್ಲ.
ನಮ್ಮದು ಫಲವತ್ತಾದ ಭೂಮಿ. ಆದರೆ ಯಾವ ನೀರಾವರಿ ಯೋಜನೆಯೂ ಇಲ್ಲಿಲ್ಲ. ಸುಮಾರು ಆರು ಕಿಲೋಮೀಟರ್ ದೂರದಲ್ಲಿ ಗೋಕಾಕ ತಾಲೂಕಿನ ರಾಮಲಿಂಗೇಶ್ವರ ಏತ ನೀರಾವರಿ ಯೋಜನೆಯ ಕಾಲುವೆ ಇದೆ. ಅದನ್ನು ಎಂ. ಚಂದರಗಿವರೆಗೆ ನಿರ್ಮಾಣ ಮಾಡಿ ನೀರು ಹರಿಸಿದರೆ ಸುತ್ತಲಿನ 15 ಬರಪೀಡಿತ ಹಳ್ಳಿಗಳಿಗೆ ಅನುಕೂಲವಾಗಲಿದೆ. ಆಗ ನಮಗೆ ಸರಕಾರದಿಂದ ಯಾವುದೇ ಸಹಾಯ ಬೇಡ. ಸಾಲಮನ್ನಾ ಬೇಡ. ನೆಮ್ಮದಿಯಿಂದ ಬದುಕುತ್ತೇವೆ. ನಮಗೆ ಕಾಲುವೆಗಳ ನಿರ್ಮಾಣ ಮಾಡಿಕೊಡುವವರೆಗೆ ಸರ್ಕಾರದ ಯಾವುದೇ ಸವಲತ್ತುಗಳು ಪ್ರಯೋಜನವಾಗುವುದಿಲ್ಲ. ಆದರೆ ಬರದ ಬರೆ ಮಾತ್ರ ಶಾಶ್ವತವಾಗುತ್ತದೆ ಎಂಬುದು ಸಿದ್ದಲಿಂಗಪ್ಪ ಹೊಸಮನಿ ನೋವು.
ರಾಮದುರ್ಗ ತಾಲೂಕಿನಲ್ಲಿ ಅಂತರ್ಜಲ ಮಟ್ಟ ಇಳಿಕೆಯಾಗಿದೆ. ಕೆ. ಚಂದರಗಿ ಹಾಗೂ ಗುದಿಗೊಪ್ಪ ಗ್ರಾಮಗಳ ಕೆರೆ ತುಂಬಿಸಿದರೆ ಅಲ್ಲಿನ ಹತ್ತಾರು ಹಳ್ಳಿಗಳಿಗೆ ಅನುಕೂಲವಾಗಲಿದೆ. ಈಗ ಗೋಕಾಕ ತಾಲೂಕಿನ ರಾಮಲಿಂಗೇಶ್ವರ ಏತ ನೀರಾವರಿ ಯೋಜನೆಯಡಿ ನಮ್ಮ ಭಾಗಕ್ಕೂ ಕಾಲುವೆ ನಿರ್ಮಾಣ ಮಾಡಬೇಕು ಎಂಬುದು ಇಲ್ಲಿನ ರೈತರ ಬೇಡಿಕೆ ಇದೆ. ಈಗಾಗಲೇ ಈ ಯೋಜನೆಯಿಂದ ಹಿರೇಕೊಪ್ಪ ಬಾಗೋಜಿಕೊಪ್ಪ, ಹೊಸೂರು ಹಳ್ಳಿಗಳಿಗೆ ನೀರು ಕೊಡಲಾಗಿದೆ ಎಂಬುದು ರಾಮದುರ್ಗ ತಹಶೀಲಾರ್ ಆರ್. ವಿ. ಕಟ್ಟಿ ಹೇಳಿಕೆ.
ತಾಲೂಕಿನಲ್ಲಿ ಪ್ರತಿ ವರ್ಷ ಭೀಕರ ಬರಗಾಲ ಉಂಟಾಗುತ್ತಿರುವ ಹಿನ್ನೆಲೆಯಲ್ಲಿ ಬೃಹತ್ ನೀರಾವರಿ ಇಲಾಖೆಯಿಂದ 126 ಕೋಟಿ ರೂ. ವೆಚ್ಚದಲ್ಲಿ 19 ಕೆರೆಗಳನ್ನು ತುಂಬಿಸುವ ಯೋಜನೆ ಸಿದ್ಧಪಡಿಸಲಾಗಿದೆ. ಅದಕ್ಕೆ ಅನುಮೋದನೆ ದೊರೆತ ನಂತರ ಕಾಮಗಾರಿ ಆರಂಭವಾಗಲಿದೆ ಎಂದು ತಹಶೀಲ್ದಾರ್ ಹೇಳುತ್ತಾರೆ.