ಡಬಲ್ ಎಂಜಿನ್ ಸರ್ಕಾರ ಪರಿಹಾರ ಕೊಡಿಸಲಿ: ಬಂಡೆಪ್ಪ ಕಾಶಂಪೂರ್
Team Udayavani, Dec 15, 2021, 10:45 PM IST
ಸುವರ್ಣ ವಿಧಾನಸೌಧ: ಅಕಾಲಿಕ ಮಳೆಯಿಂದ ಉಂಟಾದ ಬೆಳೆ ಹಾಗೂ ಮನೆ ಹಾನಿಗೆ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ತಕ್ಷಣ ಪರಿಹಾರ ಕೊಡಿಸುವ ಕೆಲಸ ಮಾಡಲಿ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ಉಪ ನಾಯಕ ಬಂಡೆಪ್ಪ ಕಾಶಂಪೂರ್ ಆಗ್ರಹಿಸಿದ್ದಾರೆ.
ವಿಧಾನಸಭೆಯಲ್ಲಿ ಪ್ರವಾಹದ ಮೇಲೆ ನಡೆದ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಸತತ ಮೂರು ವರ್ಷ ಅತಿವೃಷ್ಠಿಯಿಂದ ಸಮಸ್ಯೆ ಆಗುತ್ತಿದೆ. ರೈತರ ಬೆಳೆ ನಾಶವಾಗಿದೆ, ಬಡವರ ಮನೆ ಹಾನಿಯಾಗಿದೆ
ಡಬಲ್ ಇಂಜಿನ್ ಸರ್ಕಾರ ಎಂದು ಪ್ರಧಾನಿ ಹೇಳುತ್ತಾರೆ. ಅದು ರೈತರ ಪರವಾಗಿ ಏಕೆ ಕಣ್ಣು ತೆರೆಯುತ್ತಿಲ್ಲ. ಅತಿವೃಷ್ಠಿಯಿಂದ ಸಂಕಷ್ಟದಲ್ಲಿರುವ ಬಡ ರೈತರಿಗೆ ಯಾವುದೇ ಪರಿಹಾರ ಕೊಟ್ಟಿಲ್ಲ. ಡಬಲ್ ಇಂಜಿನ್ ಸರ್ಕಾರ
ಡಿಸೇಲ್ ಅಥವಾ ಪೆಟ್ರೋಲ್ ಹಾಕಿ ಓಡಿಸಿ. ರೈತರ ಪರವಾಗಿ ನೀವೇನು ಮಾಡಿದ್ದಿರಿ ನಾವೇನು ಮಾಡಿದ್ದೇವೆ ಎಂದು ಹೋಲಿಕೆ ಮಾಡುವುದು ಸರಿಯಲ್ಲ. ಯಾವುದೇ ನಿಯಮಾವಳಿಗಳನ್ನು ಲೆಕ್ಕ ಹಾಕದೇ ಪರಿಹಾರ ನೀಡಿ ಬಡವರು ಮತ್ತು ರೈತರ ಪರ ಸರ್ಕಾರ ನಿಲ್ಲಬೇಕು ಎಂದು ಆಗ್ರಹಿಸಿದರು.
ಮದ್ಯ ಮಾರಾಟಕ್ಕೆ ಗುರಿ ನಿಗದಿ ಸರಿಯಲ್ಲ: ಎಚ್.ಕೆ. ಕುಮಾರಸ್ವಾಮಿ
ರಾಜ್ಯ ಸರ್ಕಾರ ಆದಾಯ ಗಳಿಸಲು ಮದ್ಯ ಮಾರಾಟಕ್ಕೆ ಅಧಿಕಾರಿಗಳಿಗೆ ಗುರಿ ನೀಡುವುದು ಸರಿಯಲ್ಲ ಎಂದು ಜೆಡಿಎಸ್ ಶಾಸಕ ಎಚ್.ಕೆ. ಕುಮಾರಸ್ವಾಮಿ ಹೇಳಿದ್ದಾರೆ.
ವಿಧಾನಸಭೆಯಲ್ಲಿ ಪ್ರವಾಹದ ಕುರಿತು ಮಾತನಾಡಿದ ಅವರು, ಕುಡಿಯೋನು ಕುಡಿಯಲಿ, ಹಾಗಂತ ಮದ್ಯ ಮಾರಾಟಕ್ಕೆ ಸರ್ಕಾರ ವಾಮಾ ಮಾರ್ಗಕ್ಕೆ ಹೋಗಬಾರದು. ಆದಾಯಕ್ಕಾಗಿ ಸರ್ಕಾರ ಅಧಿಕಾರಿಗಳಿಗೆ ಒತ್ತಡ ಹಾಕಬಾರದು. ಕೆಲವು ಕ್ಷೇತ್ರಗಳಲ್ಲಿ ಇಷ್ಟೇ ಮದ್ಯ ಮಾರಾಟ ಮಾಡಬೇಕು ಎಂದು ಅಬಕಾರಿ ಇಲಾಖೆಯವರು ಒತ್ತಡ ಹಾಕುತ್ತಿದ್ದಾರೆ. ಇದರಿಂದ ಆ ಅಧಿಕಾರಿ ಅಕ್ರಮವಾಗಿ ಮದ್ಯ ಮಾರಾಟ ಮಾಡುವ ಪ್ರಯತ್ನ ಮಾಡುತ್ತಾರೆ. ಸರ್ಕಾರ ಬೇರೆ ಬೇರೆ ರೀತಿಯ ಆದಾಯ ಗಳಿಸುವುದನ್ನು ಬಿಟ್ಟು, ಈ ರೀತಿ ಅಕ್ರಮವಾಗಿ ಮದ್ಯ ಮಾರಾಟ ಮಾಡುವುದನ್ನು ಬಿಡುವಂತೆ ಆಗ್ರಹಿಸಿದರು.
ಇದನ್ನೂ ಓದಿ:ನಿಮ್ಮಲ್ಲಿ ಐಫೋನ್,ಮ್ಯಾಕ್ಬುಕ್,ಆ್ಯಪಲ್ ವಾಚ್ಗಳಿದ್ದರೆ ಬೇಗನೆ ಅಪ್ಡೇಟ್ ಮಾಡಿಕೊಳ್ಳಿ
ಪರಿಹಾರ ಕೊಡದಿದ್ದರೆ, ಬೆಂಗಳೂರಿಗೆ ಪಾದಯಾತ್ರೆ: ಅಂಜಲಿ ನಿಂಬಾಳ್ಕರ್
ಖಾನಾಪುರ ಕ್ಷೇತ್ರದ ಅಭಿವೃದ್ಧಿಗೆ ರಾಜ್ಯ ಸರ್ಕಾರ ಯಾವುದೇ ಅನುದಾನ ನೀಡದೇ ತಾರತಮ್ಯ ಮಾಡುತ್ತಿದೆ. ನನ್ನ ಮನವಿಗೆ ಸ್ಪಂದಿಸಿದ್ದರೆ, ಬೆಂಗಳೂರಿನವರೆಗೂ ಪಾದಯಾತ್ರೆ ಮಾಡುತ್ತೇನೆ ಎಂದು ಖಾನಾಪುರ ಶಾಸಕಿ ಅಂಜಲಿ ನಿಂಬಾಳ್ಕರ್ ಹೇಳಿದ್ದಾರೆ.
ವಿಧಾನಸಭೆಯಲ್ಲಿ ಪ್ರವಾಹದ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ನನ್ನ ಕ್ಷೇತ್ರಕ್ಕೆ ಆಗಿರುವ ಅನ್ಯಾಯ ಖಂಡಿಸಿ, ಖಾನಾಪುರದಿಂದ ಸುವರ್ಣ ಸೌಧದವರೆಗೂ ಪಾದಯಾತ್ರೆಯಲ್ಲಿ ಬಂದಿದ್ದೇವೆ. ನಮ್ಮ ಕ್ಷೇತ್ರಕ್ಕೆ ಪರಿಹಾರ ಕೊಡುವಲ್ಲಿ ನಿರಂತರ ತಾರತಮ್ಯ ಆಗಿದೆ. ಕ್ಷೇತ್ರದಲ್ಲಿ 873 ಕಿ.ಮೀ, ರಸ್ತೆ ಹದಗೆಟ್ಟಿದೆ. ರಸ್ತೆ ದುರಸ್ಥಿಗೆ ಸರ್ಕಾರ ಹಣ ಬಿಡುಗಡೆ ಮಾಡುತ್ತಿಲ್ಲ. ನಮ್ಮ ಕಷ್ಟ ಯಾರಿಗೆ ಹೇಳ್ಳೋಣ. ನೆರೆ ಬಂದರೆ ನನ್ನ ಮನೆಗೆ ನೀರು ನುಗ್ಗುತ್ತದೆ. ಅಂಜಲಿ ಮನೆಗೆ ನುಗ್ಗಿದ ನೀರು ಅಂತ ಬ್ರೇಕಿಂಗ್ ನ್ಯೂಸ್ ಬರುತ್ತೆ. ಇದನ್ನ ನೋಡಿ ನಮ್ಮ ಪಕ್ಷದ ಶಾಸಕರು ನನಗೆ ಕರೆ ಮಾಡಿ ಕೇಳುತ್ತಾರೆ. ನನಗೆ ಬಹಳ ಬೇಸರವಾಗುತ್ತೆ. ಮೂರು ವರ್ಷಗಳಿಂದ ನಮಗೆ ದುಡ್ಡು ಕೊಟ್ಟಿಲ್ಲ. ನಮ್ಮ ರೈತರು ಬಹಳ ಸಂಕಷ್ಟದಲ್ಲಿದ್ದಾರೆ. ಶಾಲೆಯ ಕೊಠಡಿಗಳು ಬಿದ್ದು ಮೂರು ವರ್ಷಗಳಾಗಿವೆ. ನಮಗೆ ಪರಿಹಾರ ಕೊಡಿ, ನಮ್ಮ ಸಮಸ್ಯೆ ಬಗೆಹರಿಸದಿದ್ದರೆ ಖಾನಾಪುರದಿಂದ ಬೆಂಗಳೂರಿನವರೆಗೂ ಪಾದಯಾತ್ರೆ ಮಾಡುತ್ತೇನೆ ಎಂದು ಹೇಳಿದರು.