ಕಲುಷಿತ ನೀರು ಸೇವಿಸಿ ವೃದ್ಧ ಸಾವು: ಮೃತರ ಕುಟುಂಬಕ್ಕೆ 10 ಲಕ್ಷ ರೂ. ಪರಿಹಾರ ಘೋಷಣೆ
Team Udayavani, Oct 27, 2022, 10:05 PM IST
ರಾಮದುರ್ಗ: ಕಲುಷಿತ ನೀರು ಸೇವಿಸಿ ವ್ಯಕ್ತಿಯೊಬ್ಬರು ಮೃತಪಟ್ಟು, ನೂರಕ್ಕೂ ಹೆಚ್ಚು ಮಂದಿ ವಾಂತಿಭೇದಿಯಿಂದ ಅಸ್ವಸ್ಥರಾದ ಘಟನೆ ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕಿನ ಮುದೇನೂರ ಗ್ರಾಮದಲ್ಲಿ ಬುಧವಾರ ನಡೆದಿದೆ.
ಮುದೇನೂರ ಗ್ರಾಮದ ಶಿವಪ್ಪ ಯಂಡಿಗೇರಿ (75) ಮೃತಪಟ್ಟವರು. ಇನ್ನೂ ಐವರ ಸ್ಥಿತಿ ಗಂಭೀರವಾಗಿದೆ ಎನ್ನಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಅವರು ಮೃತರ ಕುಟುಂಬಕ್ಕೆ 10 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ.
ಮುದೇನೂರ ಗ್ರಾಮದಲ್ಲಿ ಗ್ರಾ.ಪಂ. ನಿಂದ ಸರಬರಾಜು ಮಾಡಲಾಗುವ ಕೊಳವೆ ಬಾವಿಯ ಪೈಪ್ಲೈನ್ ಒಡೆದು ಚರಂಡಿ ಹಾಗೂ ತಿಪ್ಪೆಗುಂಡಿಗಳ ಕಲುಷಿತ ನೀರಿತ್ತು. ಗ್ರಾಮಸ್ಥರು ಮೂರ್ನಾಲ್ಕು ದಿನಗಳಿಂದ ಅದೇ ನೀರನ್ನು ಕುಡಿದು ನೂರಾರು ಮಂದಿ ಅಸ್ವಸ್ಥರಾಗಿದ್ದಾರೆ. ಈ ಪೈಕಿ ಅಸ್ವಸ್ಥರಾಗಿದ್ದ 35ಕ್ಕೂ ಅ ಧಿಕ ಜನರನ್ನು ರಾಮದುರ್ಗ ಪಟ್ಟಣದ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಹಲವರು ಖಾಸಗಿ ಆಸ್ಪತ್ರೆಗಳಿಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅದರಲ್ಲಿ ಹಲವರ ಸ್ಥಿತಿ ಗಂಭೀರವಾಗಿದ್ದರಿಂದ ಬೆಳಗಾವಿ-ಬಾಗಲಕೋಟೆ ಜಿಲ್ಲಾಸ್ಪತ್ರೆಗಳಿಗೆ ರವಾನಿಸಲಾಗಿದೆ.
ಒಂದು ವಾರದ ಹಿಂದೆ ಪೈಪ್ ಒಡೆದು ಕಲುಷಿತ ನೀರು ಬರುತ್ತಿರುವ ಕುರಿತು ಗ್ರಾ.ಪಂ.ಗೆ ತಿಳಿಸಲಾಗಿದ್ದರೂ ಗಮನಹರಿಸದ ಅ ಧಿಕಾರಿಗಳು, ಈ ಘಟನೆ ನಡೆದ ಬಳಿಕ ದುರಸ್ತಿ ಕಾರ್ಯ ಆರಂಭಿಸಿದ್ದಾರೆ. ಆಗಲೇ ದುರಸ್ತಿ ಮಾಡಿದ್ದರೆ ಈ ಘಟನೆ ನಡೆಯುತ್ತಿರಲಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.