ಪಂಚೇಂದ್ರಿಯ ಪ್ರಜ್ಞೆ ಶ್ರೇಷ್ಠ
ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಜಾತ್ರೆಗೆ ಸಂಭ್ರಮದ ತೆರೆ ಕಂಡಿತು.
Team Udayavani, Nov 19, 2021, 3:41 PM IST
ಹುಕ್ಕೇರಿ: ಮಾನವಜೀವಿ ಮೊದಲು ಇಂದ್ರಿಯಗಳ ಶಕ್ತಿಯನ್ನು ಅರ್ಥ ಮಾಡಿಕೊಳ್ಳಬೇಕು. ಈ ಶಕ್ತಿಯನ್ನು ಒಗ್ಗೂಡಿಸಿಕೊಂಡು ಸಾಧನೆ ಮಾಡಲು ಬಳಸಿದರೆ ಸತ್ಕಾರ್ಯ ಸಮಗ್ರವಾಗಿ ನಡೆಯುತ್ತದೆ. ಪಂಚಾಂಗ ಪ್ರಜ್ಞೆಗಿಂತ ಪಂಚೇಂದ್ರಿಯಗಳ ಪ್ರಜ್ಞೆ ಶ್ರೇಷ್ಠ ಎಂದು ನಿಡಸೋಸಿ ಸಿದ್ಧಸಂಸ್ಥಾನ ಮಠದ ಪಂಚಮ ಶಿವಲಿಂಗೇಶ್ವರ ಸ್ವಾಮೀಜಿ ಅಭಿಮತ ವ್ಯಕ್ತಪಡಿಸಿದರು.
ತಾಲೂಕಿನ ಯರನಾಳ ಗ್ರಾಮದ ಕಾಳಿಕಾದೇವಿ ಜಾತ್ರಾ ಮಹೋತ್ಸವದಲ್ಲಿ ಏರ್ಪಡಿಸಿದ್ದ ಶಿವಾನುಭವ ಗೋಷ್ಠಿಯ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಸರ್ವಜೀವಿಗಳ ಸಂಕಷ್ಟ ನಿವಾರಣೆಯಾಗಿ ಎಲ್ಲರ ಬದುಕಿನಲ್ಲಿ ಸುಖ-ಶಾಂತಿ ನೆಲೆಸಬೇಕು. ಸಾಧು-ಸಂತರ ತತ್ವಗಳನ್ನು ಅನುಸರಿಸಿದರೆ ಭಾರತ ವಿಶ್ವಗುರುವಾಗುತ್ತದೆ ಎಂದರು. ಚಿಕ್ಕೋಡಿ ಸಂಪಾದನಾ ಸ್ವಾಮೀಜಿ ಮಾತನಾಡಿ, ಯಾರು ಸಮಯಕ್ಕೆ ಹೆಚ್ಚು ಬೆಲೆ ಕೊಡುತ್ತಾರೋ ಸಮಾಜ ಅಂಥವರಿಗೆ
ಬೆಲೆ ಕೊಡುತ್ತದೆ. ಈ ಸಮಯವನ್ನು ಹೊಸ ವಿಚಾರ, ಅನುಭವ, ಸಾಧನೆ ಮಾಡಲು ಬಳಸಿಕೊಳ್ಳಬೇಕು ಎಂದರು.
ಪೀಠಾಧಿಪತಿ ಬ್ರಹ್ಮಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ವಿರಕ್ತಮಠದ ಶಿವಬಸವ ಸ್ವಾಮೀಜಿ, ಚಿಂಚಲಿ ಅಲ್ಲಮಪ್ರಭು ಸ್ವಾಮೀಜಿ, ಅವಜೀಕರ ಆಶ್ರಮದ ಅಭಿನವ ಮಂಜುನಾಥ ಸ್ವಾಮೀಜಿ, ಬೆಳವಿ ಸಿದ್ಧಾರೂಢ ಮಠದ ಮೃತ್ಯುಂಜಯ ಸ್ವಾಮೀಜಿ, ಜಿಪಂ ಮಾಜಿ ಸದಸ್ಯ ಪೃಥ್ವಿ ಕತ್ತಿ, ಎಸ್ಸಿಎಸ್ಟಿ ದೌರ್ಜನ್ಯ ನಿಯಂತ್ರಣ ಜಿಲ್ಲಾ ಸಮಿತಿ ಸದಸ್ಯ ಸುರೇಶ ತಳವಾರ, ಉಪವಿಭಾಗ ಸಮಿತಿ ಸದಸ್ಯ
ರಮೇಶ ಹುಂಜಿ, ಬಿಜೆಪಿ ರೈತ ಮೋರ್ಚಾ ರಾಜ್ಯ ಉಪಾಧ್ಯಕ್ಷ ದುಂಡಪ್ಪಾ ಬೆಂಡವಾಡೆ ಮತ್ತಿತರರು ಉಪಸ್ಥಿತರಿದ್ದರು.
ಮುಖ್ಯ ಶಿಕ್ಷಕ ಎಸ್.ಎಸ್.ಮಠದ ನಿರೂಪಿಸಿದರು. ಕೆಂಪಣ್ಣಾ ದೇಸಾಯಿ ಸ್ವಾಗತಿಸಿದರು. ಮುಕುಂದ ಮಠದ ಪ್ರಾಸ್ತಾವಿಕವಾಗಿ ಮಾತನಾಡಿದರು. ಅನಿಲ ಚೌಗಲೆ ವಂದಿಸಿದರು. ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿದ ರಥೋತ್ಸವ ನೋಡುಗರ ಮನ ಸೆಳೆಯಿತು. ಕಾಳಿಕಾದೇವಿಗೆ ಪಂಚಾಭಿಷೇಕ, ದೇವಿಗೆ ಉಡಿ ತುಂಬಲಾಯಿತು. ವಿವಿಧ ಧಾರ್ಮಿಕ, ಆಧ್ಯಾತ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಜಾತ್ರೆಗೆ ಸಂಭ್ರಮದ ತೆರೆ ಕಂಡಿತು.