ಮಠಗಳು ಜಾತಿಗೆ ಸೀಮಿತವಾಗದಿರಲಿ; ಆತ್ಮಾರಾಮ ಶ್ರೀ
ಎಲ್ಲ ಜನಾಂಗದ ಜನರಿಗೆ ಮಾರ್ಗದರ್ಶನ ಮಾಡಬೇಕಿದ್ದ ಕೆಲ ಮಠಗಳು ತಮ್ಮ ಕರ್ತವ್ಯವನ್ನು ಮರೆತಿವೆ.
Team Udayavani, Sep 3, 2022, 4:04 PM IST
ತೆಲಸಂಗ: ಸಮಾಜಕ್ಕೆ ದಾರಿದೀಪವಾಗಬೇಕಿದ್ದ ಮಠಗಳು ಒಂದೊಂದು ಜಾತಿಗೆ ಸೀಮಿತವಾಗುತ್ತಿರುವುದು ನೋವಿನ ಸಂಗತಿ ಎಂದು ಕಕಮರಿಯ ಗುರುದೇವ ಆಶ್ರಮದ ಆತ್ಮಾರಾಮ ಶ್ರೀಗಳು ವಿಷಾದ ವ್ಯಕ್ತಪಡಿಸಿದರು.
ಶುಕ್ರವಾರ ಸಮೀಪದ ಕಕಮರಿಯ ಗುರುದೇವ ಆಶ್ರಮದಲ್ಲಿ ಅಥಣಿಯ ಸಂತೃಪ್ತಿ ಸೇವಾ ಸಮಿತಿ ವತಿಯಿಂದ ಉಚಿತ ಅನ್ನಪ್ರಸಾದ ಸೇವೆಗೆ ಚಾಲನೆ ನೀಡಿ ಅವರು ಮಾತನಾಡಿ, ಸಮಾಜದ ನಾಡಿ ಮಿಡಿತವನ್ನರಿತು ಎಲ್ಲ ಜನಾಂಗದ ಜನರಿಗೆ ಮಾರ್ಗದರ್ಶನ ಮಾಡಬೇಕಿದ್ದ ಕೆಲ ಮಠಗಳು ತಮ್ಮ ಕರ್ತವ್ಯವನ್ನು ಮರೆತಿವೆ.
ಇದು ಸಂತ ಪರಂಪರೆಗೆ ಅಪಮಾನ ಮಾಡಿದಂತೆ. ಹಿಂದು ಸಮಾಜವನ್ನು ಒಟ್ಟುಗೂಡಿಸುವ ಏಕೈಕ ಹಬ್ಬ ಗಣೇಶನ ಹಬ್ಬ. ಭಾರತಿಯ ಹಬ್ಬಗಳು ಬದುಕಿಗೆ ಶಕ್ತಿ ತುಂಬುತ್ತವೆ. ಬೇಡುವಾತ ಗುರುವಲ್ಲ ಕೊಡುವಾತ ಭಕ್ತನಲ್ಲ. ಇಂತಹ ಪರಂಪರೆ ಉಳಿಸಿಕೊಂಡು ಬರುತ್ತಿರುವ ಜ್ಞಾನ ಯೋಗಾಶ್ರಮಗಳು ಸಮಾಜದ ಕಣ್ಣುಗಳಾಗಿ ಕೆಲಸ ಮಾಡುತ್ತಿವೆ ಎಂದರು.
ಹಿರಿಯರಾದ ಎ.ಜಿ.ವಾಲಿ, ನೇಮಿನಾಥ ಉಪಾದ್ಯಯ, ಮಲ್ಲಿಕಾರ್ಜುನ ಕರಡಿ, ಬಸವರಾಜ ಐಗಳಿ, ಚಿದಾನಂದ ಹಳ್ಳದಮಳ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.