Basavaraj Horatti; ವಿಧಾನ ಪರಿಷತ್ನ ಎಲ್ಲ ಸಮಿತಿಗಳ ಸಭೆ ಸುವರ್ಣ ಸೌಧದಲ್ಲಿ ನಡೆಸಲು ಸೂಚನೆ
ಪ್ರತಿ ಎರಡು ತಿಂಗಳ ಅವಧಿಯಲ್ಲಿ ಒಂದು ಬಾರಿ ಬೆಳಗಾವಿಯಲ್ಲಿ ಸಭೆ: ಹೊರಟ್ಟಿ
Team Udayavani, Jan 15, 2024, 9:19 PM IST
ಬೆಳಗಾವಿ: ಸುವರ್ಣ ವಿಧಾನಸೌಧದ ಸದ್ಬಳಕೆ ಹಾಗೂ ಉತ್ತರ ಕರ್ನಾಟಕದ ಜನರ ಬಹುದಿನಗಳ ನಿರೀಕ್ಷೆ ಹಿನ್ನೆಲೆಯಲ್ಲಿ ವಿಧಾನ ಪರಿಷತ್ನ ಅಡಿಯಲ್ಲಿ ಬರುವ ಎಲ್ಲ ಸಮಿತಿಗಳ ಸಭೆಯನ್ನು ಎರಡು ತಿಂಗಳಿಗೊಮ್ಮೆ ಕಡ್ಡಾಯವಾಗಿ ಸುವರ್ಣ ವಿಧಾನಸೌಧದಲ್ಲಿ ನಡೆಸಲು ಸಂಬಂಧಪಟ್ಟ ಅಧ್ಯಕ್ಷರು ಹಾಗೂ ಕಾರ್ಯದರ್ಶಿಗಳು ಕ್ರಮ ತೆಗೆದುಕೊಳ್ಳಬೇಕು ಎಂದು ಸಭಾಪತಿ ಬಸವರಾಜ ಹೊರಟ್ಟಿ ಸೂಚಿಸಿದ್ದಾರೆ.
ಈ ಸಂಬಂಧ ಕರ್ನಾಟಕ ವಿಧಾನ ಪರಿಷತ್ ಕಾರ್ಯದರ್ಶಿಗಳಿಗೆ ಪತ್ರ ಬರೆದಿರುವ ಅವರು, ಇನ್ನು ಮುಂದೆ ವಿಧಾನ ಪರಿಷತ್ನ ಎಲ್ಲ ಸಮಿತಿಗಳು ಪ್ರತಿ ಎರಡು ತಿಂಗಳ ಅವಧಿಯಲ್ಲಿ ಒಂದು ಬಾರಿ ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಸಮಿತಿ ಸಭೆ ನಡೆಸಬೇಕು. ಅದಕ್ಕೂ ಪೂರ್ವದಲ್ಲಿ ಕನಿಷ್ಟ ಒಂದು ತಿಂಗಳ ಮೊದಲು ಸಂಬಂಧಿಸಿದ ಅಧ್ಯಕ್ಷರು, ಕಾರ್ಯದರ್ಶಿಗಳಿಗೆ, ಜಿಲ್ಲಾದಿಕಾರಿಗಳಿಗೆ ಹಾಗೂ ಇಲಾಖೆ ಪ್ರಧಾನ ಕಾರ್ಯದರ್ಶಿಗಳ ಗಮನಕ್ಕೆ ದಿನಾಂಕ ಮತ್ತು ಸಮಯ ತಿಳಿಸಬೇಕು. ಈ ನಿಟ್ಟಿನಲ್ಲಿ ತಕ್ಷಣ ಅಗತ್ಯ ಕ್ರಮ ಕೈಗೊಳ್ಳುವಂತೆ ನಿರ್ದೇಶನ ನೀಡಿದ್ದಾರೆ.
ಬೆಂಗಳೂರಿನಲ್ಲಿ ಕೇಂದ್ರೀಕೃತವಾಗಿರುವ ಹಲವಾರು ಸರ್ಕಾರಿ ಕಚೇರಿಗಳು ಸುವರ್ಣ ವಿಧಾನಸೌಧದಿಂದಲೂ ಕಾರ್ಯ ನಿರ್ವಹಿಸಬೇಕು ಎಂಬುದು ಉತ್ತರ ಕರ್ನಾಟಕ ಜನರ ಭಾವನೆ ಹಾಗೂ ಬೇಡಿಕೆಯಾಗಿದೆ. ಈ ಹಿನ್ನೆಲೆಯಲ್ಲಿ ಕೆಲವು ಸರ್ಕಾರಿ ಕಚೇರಿಗಳನ್ನು ಸುವರ್ಣ ವಿಧಾನಸೌಧಕ್ಕೆ ಸ್ಥಳಾಂತರಗೊಳಿಸುವುದಕ್ಕೆ ಚಾಲನೆ ಕೊಡುವ ಉದ್ದೇಶದಿಂದ ವಿಧಾನ ಪರಿಷತ್ನ ಭರವಸೆಗಳ ಸಮಿತಿ ವರದಿಯನ್ನು ಈ ಹಿಂದೆ ಸರ್ಕಾರಕ್ಕೆ ಕೊಡಲಾಗಿತ್ತು. ಅದರ ಅಧ್ಯಕ್ಷ ನಾನೇ ಇದ್ದೆ. ಆದರೆ ಅದರ ಪ್ರಗತಿ ಶೂನ್ಯವಾಗಿದೆ. ಈ ಹಿನ್ನೆಲೆಯಲ್ಲಿ ಇನ್ನು ಮುಂದೆ ಪ್ರಗತಿಯ ದೃಷ್ಟಿಯಿಂದ ಪ್ರತಿ ಎರಡು ತಿಂಗಳಿಗೆ ಒಂದು ಬಾರಿ ಬೆಳಗಾವಿಯಲ್ಲಿ ಕಡ್ಡಾಯವಾಗಿ ಸಭೆ ನಡೆಸುವ ಮೂಲಕ ಉತ್ತರ ಕರ್ನಾಟಕ ಜನರ ನಿರೀಕ್ಷೆಯನ್ನು ಸಾಕಾರಗೊಳಿಸುವುದು ಸೂಕ್ತವಾಗಿರುತ್ತದೆ ಎಂದು ಹೊರಟ್ಟಿ ಅಭಿಪ್ರಾಯಪಟ್ಟಿದ್ಧಾರೆ.