ಕೆಪಿಎಸ್ಸಿ-ಕೆಇಎಯಿಂದ ಯುವಕರು ಹತಾಶೆಗೆ: ಮಾಜಿ ಸಚಿವ ಸುರೇಶ್ಕುಮಾರ್ ಅಸಮಾಧಾನ
Team Udayavani, Dec 20, 2022, 8:48 PM IST
ಸುವರ್ಣವಿಧಾನಸೌಧ: ಕೆಪಿಎಸ್ಸಿ ಮತ್ತು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಯುವಕರನ್ನು ಹತಾಶೆಗೆ ತಳ್ಳುತ್ತಿವೆ. ಸರ್ಕಾರಿ ಹುದ್ದೆಗಳಿಗೆ ನೇಮಕಗೊಂಡು ಆಡಳಿತ ವ್ಯವಸ್ಥೆಗೆ ಸೇರ್ಪಡೆಯಾಗಬೇಕಾದವರಲ್ಲಿ ಪ್ರಾರಂಭದಲ್ಲೇ ವ್ಯವಸ್ಥೆ ಬಗ್ಗೆ ಸಿನಿಕತನ ಉಂಟಾಗುವಂತೆ ಮಾಡುತ್ತಿದೆ ಎಂದು ಆಡಳಿತಾರೂಢ ಬಿಜೆಪಿಯ ಮಾಜಿ ಸಚಿವ ಸುರೇಶ್ಕುಮಾರ್ ಅಸಮಾಧಾನ ವ್ಯಕ್ತಪಡಿಸಿದರು.
ಶೂನ್ಯ ವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ಅವರು, ಕೆಪಿಟಿಸಿಎಲ್ ವತಿಯಿಂದ 1,500 ಹುದ್ದೆಗಳ ನೇಮಕಾತಿಗೆ ಪರೀಕ್ಷೆ ನಡೆಸಿ ಐದು ತಿಂಗಳಾದರೂ ಕೀ ಉತ್ತರ ಬಿಡುಗಡೆ ಮಾಡಿಲ್ಲ, ತಾತ್ಕಾಲಿಕ ಆಯ್ಕೆ ಪಟ್ಟಿ ಸಹ ಪ್ರಕಟಿಸಿಲ್ಲ. ಇದರಿಂದ ನೇಮಕಾತಿ ನಿರೀಕ್ಷೆಯಲ್ಲಿರುವವರು ಸಂಕಷ್ಟಕ್ಕೆ ಸಿಲುಕಿದ್ದಾರೆಂದು ಬೇಸರ ವ್ಯಕ್ತಪಡಿಸಿದರು.
ಇಂಧನ ಸಚಿವ ಸುನಿಲ್ಕುಮಾರ್ ಮಾತನಾಡಿ, ಕೀ ಉತ್ತರಗಳ ಬಿಡುಗಡೆಯಲ್ಲಿ ವಿಳಂಬವಾಗಿದೆ. ಮುಂದಿನ ವಾರದಲ್ಲಿ ಕೀ ಉತ್ತರ ಬಿಡುಗಡೆಗೆ ಕ್ರಮ ಕೈಗೊಳ್ಳಲಾಗುವುದು. ಜನವರಿ ಮೊದಲ ವಾರದಲ್ಲಿ ತಾತ್ಕಾಲಿಕ ಪಟ್ಟಿ ಬಿಡುಗಡೆ ಮಾಡಿ ಶೀಘ್ರ ನೇಮಕಾತಿ ಪ್ರಕ್ರಿಯೆ ಪೂರ್ಣಗೊಳಿಸಲಾಗುವುದು ಎಂದರು.
1,500 ಹುದ್ದೆಗಳ ನೇಮಕ ಸಂಬಂಧ ಪರೀಕ್ಷಾ ಪ್ರಾಧಿಕಾರ ಪರೀಕ್ಷೆ ನಡೆಸಿದೆ. ಕೆಲ ಕಾರಣಗಳಿಂದ ಕೀ ಉತ್ತರ ಬಿಡುಗಡೆ ವಿಳಂಬವಾಗಿದೆ. ತಕ್ಷಣವೇ ಆ ಬಗ್ಗೆ ಗಮನಹರಿಸಿ ಅಧಿವೇಶನ ಮುಗಿಯುವುದರೊಳಗೆ ಸಮಸ್ಯೆ ಬಗೆಹರಿಸಲಾಗುವುದು ಎಂದು ಭರವಸೆ ನೀಡಿದರು.