ತಂಬಾಕು ಉತ್ಪನ್ನ ಬಳಕೆ ನಿಲ್ಲಿಸಿ: ಅರ್ಜುನ್
ಆರೋಗ್ಯಯುಕ್ತ ಜೀವನ ನಡೆಸಿ•ಬೀಡಿ ಸುತ್ತುವ ಮಹಿಳೆಯರಲ್ಲಿ ಜಾಗೃತಿ ಮೂಡಿಸಲು ಸಲಹೆ
Team Udayavani, Jun 2, 2019, 4:44 PM IST
ಬಳ್ಳಾರಿ: ತಂಬಾಕು ದುಷ್ಪರಿಣಾಮಗಳ ಕುರಿತು ಹಮ್ಮಿಕೊಂಡ ಜಾಗೃತಿ ಜಾಥಾಕ್ಕೆ ಅಪರ ಜಿಲ್ಲಾಧಿಕಾರಿ ಎಂ.ಸತೀಶ್ಕುಮಾರ್ ಚಾಲನೆ ನೀಡಿದರು.
ಬಳ್ಳಾರಿ: ಧೂಮಪಾನ ಮಾಡುವುದರಿಂದ ಆರೋಗ್ಯದ ಮೇಲೆ ನಾನಾ ದುಷ್ಪರಿಣಾಮಗಳು ಉಂಟಾಗುತ್ತಿವೆ. ತಂಬಾಕು ಬಿಟ್ಟು ಆರೋಗ್ಯಯುತವಾಗಿ ಜೀವನ ನಡೆಸಿ ಎಂದು ನ್ಯಾ.ಅರ್ಜುನ್ ಮಲ್ಲೂರ್ ಹೇಳಿದರು.
ವಿಶ್ವ ತಂಬಾಕು ವಿರೋಧಿ ದಿನಾಚರಣೆ ಅಂಗವಾಗಿ ತಂಬಾಕು ದುಷ್ಪರಿಣಾಮಗಳ ಕುರಿತು ಜಾಗೃತಿ ಮೂಡಿಸುವ ಜಾಥಾಗೆ ಚಾಲನೆ ನೀಡಿ ಮಾತನಾಡಿದ ಅವರು, ತಂಬಾಕು ವಸ್ತುಗಳಲ್ಲಿ (ಸಿಗರೇಟ್, ಬೀಡಿ, ಸಿಗಾರ್ ಇತ್ಯಾದಿ) 7000 ರಾಸಾಯನಿಕ ವಸ್ತುಗಳಿದ್ದು, ಅದರಲ್ಲಿ 69ರಷ್ಟು ಕ್ಯಾನ್ಸ್ರ್ಕಾರಕ ವಸ್ತುಗಳಾಗಿವೆ. ಧೂಮರಹಿತ (ಜಿಗಿಯುವ ತಂಬಾಕುಗಳು) ತಂಬಾಕು ಉತ್ಪನ್ನಗಳಲ್ಲಿ 3095 ರಾಸಾಯನಿಕಗಳಿದ್ದು. ಅದರಲ್ಲಿ 28ರಷ್ಟು ಕ್ಯಾನ್ಸರ್ಕಾರಕ ವಸ್ತುಗಳಿವೆ ಎಂದು ವಿವರಿಸಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿ ಮುಂಭಾಗದಲ್ಲಿ ಅಳವಡಿಸಿರುವ ನಾಮಫಲಕವನ್ನು ಅಪರ ಜಿಲ್ಲಾಧಿಕಾರಿ ಸತೀಶಕುಮಾರ್ ಅನಾವರಣಗೊಳಿಸಿ ಮಾತನಾಡಿದರು.
ಜಾಥಾವು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಾರ್ಯಾಲಯದ ಆವರಣದಿಂದ ಆರಂಭಗೊಂಡು ನಗರದ ಕೆ.ಸಿ ರೋಡ್, ಮೀನಾಕ್ಷಿ ಸರ್ಕಲ್, ಡಿಸಿ ಆಫೀಸ್, ರಾಯಲ್ ಸರ್ಕಲ್, ಅನಂತಪುರ ರಸ್ತೆ, ಸಂಗಮ್ ಸರ್ಕಲ್ ಮೂಲಕ ಪುನಃ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಾರ್ಯಾಲಯಕ್ಕೆ ತಲುಪಿತು.
ನಂತರದಲ್ಲಿ ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ಬ್ರೂಸ್ಪೇಟೆ(ಕೌಲ್ ಬಜಾರ್) ಬಳ್ಳಾರಿಯಲ್ಲಿ ಬಾಯಿ ಮತ್ತು ಶ್ವಾಸಕೋಶದ ಕ್ಯಾನ್ಸರ್ ತಪಾಸಣಾ ಶಿಬಿರ ಹಮ್ಮಿಕೊಂಡು ಸುಮಾರು 45ಕ್ಕೂ ಹೆಚ್ಚು ಬೀಡಿ ಸುತ್ತುವ ಮಹಿಳೆಯರಿಗೆ ಹಾಗೂ ಸಾರ್ವಜನಿಕರಿಗೆ ಬಾಯಿ ಕ್ಯಾನ್ಸರ್ ಮಧುಮೇಹ ಸಕ್ಕರೆ ಇತ್ಯಾದಿ ಆರೋಗ್ಯ ತಪಾಸಣೆಯನ್ನು ಸ್ಥಳದಲ್ಲಿಯೆ ಕೈಗೊಂಡು ಆರೋಗ್ಯ ಜಾಗೃತಿ ಸಹ ನೀಡಲಾಯಿತು.
ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಜಿಲ್ಲಾ ಸಲಹೆಗಾರ ದುರುಗೇಶ ಮಾಚನೂರು, ಜಿಲ್ಲಾ ಸರ್ವೆಲೆನ್ಸ್ ಅಧಿಕಾರಿ ಡಾ.ಆರ್.ಅನಿಲಕುಮಾರ್, ಎಸ್ಕೆಡಿಆರ್ಡಿಪಿ ಜಿಲ್ಲಾ ನಿರ್ದೇಶಕ ಚಂದ್ರಶೇಖರಶೆಟ್ಟಿ, ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ.ನಿಜಾಮುದ್ದೀನ್, ಜಿಲ್ಲಾ ಆರ್ಸಿಎಚ್ ಅಧಿಕಾರಿ ಡಾ.ರವೀಂದ್ರನಾಥ, ತಾಲೂಕು ಆರೋಗ್ಯ ಅಧಿಕಾರಿ ಡಾ.ವೀರೇಂದ್ರಕುಮಾರ್, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ ದಾಸಪ್ಪನವರ ಸೇರಿದಂತೆ ತಜ್ಞ ವೈದ್ಯರು ಹಾಗೂ ವೈದ್ಯರು ಹಾಗೂ ಸಿಬ್ಬಂದಿ ಇದ್ದರು. ತಂಬಾಕು ಉತ್ಪನ್ನ ಮಾರಾಟ ಮಾಡುವವರಿಗೆ ಹಾಗೂ ಸಾರ್ವಜನಿಕರಿಗೆ ಗುಲಾಬಿ ಹೂ ನೀಡಲಾಯಿತು.