ಕಿರುಮೃಗಾಲಯ ಕಮಲಾಪುರಕ್ಕೆ ಸ್ಥಳಾಂತರ ಸನ್ನಿಹಿತ
Team Udayavani, Jul 9, 2019, 9:59 AM IST
ಬಳ್ಳಾರಿ: ರೇಡಿಯೋ ಪಾರ್ಕ್ ಬಳಿಯ ಕಿರುಮೃಗಾಲಯದಲ್ಲಿರುವ ವನ್ಯಜೀವಿಗಳು.
ಬಳ್ಳಾರಿ: ಕಳೆದ ನಾಲ್ಕು ದಶಕಗಳಿಂದ ಗಣಿ ಜಿಲ್ಲೆ ಬಳ್ಳಾರಿ ಜನರಿಗೆ ವನ್ಯಪ್ರಾಣಿಗಳನ್ನು ಪರಿಚಯಿಸಿಕೊಟ್ಟಿದ್ದ ಇಲ್ಲಿನ ವನ್ಯಪ್ರಾಣಿಗಳ ಕಿರುಮೃಗಾಲಯ ಸ್ಥಳಾಂತರಗೊಳ್ಳುವ ಸಮಯ ಸನ್ನಿಹಿತವಾಗಿದ್ದು, ಇನ್ನು ಮುಂದೆ ಕಿರುಮೃಗಾಲಯ ಟ್ರೀ ಪಾರ್ಕ್ ಆಗಿ ಕಂಗೊಳಿಸುವ ಸಾಧ್ಯತೆಯಿದೆ.
ನಗರದ ರೇಡಿಯೋ ಪಾರ್ಕ್ ಬಳಿ ಇರುವ ಕಿರುಮೃಗಾಲಯ ಕಳೆದ 37 ವರ್ಷಗಳಿಂದ ವಿವಿಧ ಪ್ರಭೇದದ ಪಕ್ಷಿ, ವನ್ಯಪ್ರಾಣಿಗಳನ್ನು ಜನರಿಗೆ ಪರಿಚಯಿಸಿಕೊಟ್ಟಿದೆ. 1981ರಲ್ಲಿ ಅಂದಿನ ಸಿಎಂ ಆರ್.ಗುಂಡೂರಾವ್ ಅಧ್ಯಕ್ಷತೆಯಲ್ಲಿ ಸ್ಥಳೀಯ ಶಾಸಕ ಭಾಸ್ಕರ್ ನಾಯ್ಡು ನೇತೃತ್ವದಲ್ಲಿ ಕಿರುಮೃಗಾಲಯ ಉದ್ಘಾಟಿಸಲಾಗಿತ್ತು. ಅಂದಿನಿಂದ ಇಂದಿನಿವರೆಗೂ ಸ್ಥಳೀಯ ಶಾಲಾ ವಿದ್ಯಾರ್ಥಿಗಳಿಗೆ, ಚಿಕ್ಕ ಮಕ್ಕಳಿಗೆ ಒಂದು ದಿನದ ಮಟ್ಟಿಗೆ ಪಿಕ್ನಿಕ್ ಸ್ಪಾಟ್ನಂತಿದ್ದ ಕಿರುಮೃಗಾಲಯ ಸ್ಥಳಾಂತರಕ್ಕೆ ಕೇಂದ್ರ ಮೃಗಾಲಯ ಪ್ರಾಧಿಕಾರ ಸೂಚಿಸಿದೆ. ಈ ಹಿನ್ನೆಲೆಯಲ್ಲಿ ಕಳೆದ ಎರಡು ವರ್ಷಗಳ ಹಿಂದೆಯೇ ಮೃಗಾಲಯದಲ್ಲಿದ್ದ 150ಕ್ಕೂ ಹೆಚ್ಚು ಕೃಷ್ಣಮೃಗಗಳನ್ನು ಕಮಲಾಪುರ ಬಳಿಯ ವಾಜಪೇಯಿ ಜೂಲಾಜಿಕಲ್ ಪಾರ್ಕ್ಗೆ ಸ್ಥಳಾಂತರಿಸಲಾಗಿದ್ದು, ಶೀಘ್ರದಲ್ಲೇ ಇನ್ನುಳಿದ ಪ್ರಾಣಿಗಳನ್ನೂ ಸಾಗಿಸಲಾಗುತ್ತದೆ.
ಸ್ಥಳಾಂತರವೇಕೆ?: ಕಿರುಮೃಗಾಲಯದಲ್ಲಿ ಸದ್ಯ 5 ಗಂಡು, 3 ಹೆಣ್ಣು ಸೇರಿ 8 ಚಿರತೆ, ಒಂದು ಹೆಣ್ಣು ಕರಡಿ, ಒಂದು ನರಿ, ಒಂದು ನವಿಲು, ಬಾತುಕೋಳಿ ಸೇರಿ ವಿವಿಧ ರೀತಿಯ 13 ಪ್ರಭೇದದ ಪಕ್ಷಿಗಳು, 5 ಮೊಸಳೆ, 4 ಪ್ರಭೇದದ 15 ಹಾವುಗಳು, 98 ಜಿಂಕೆಗಳು, 4 ಕತ್ತೆಕಿರುಬಗಳು ಇವೆ. ಇವುಗಳಿಗೆ ಕಿರುಮೃಗಾಲಯದಲ್ಲಿ ಇರಲು ಸೂಕ್ತ ಮೂಲ ಸೌಲಭ್ಯಗಳು ಇಲ್ಲ. ಕರಡಿ, ಚಿರತೆಗಳಂತಹ ಪ್ರಾಣಿಗಳು ಓಡಾಡಿಕೊಂಡು ಜೀವಿಸುವುದರಿಂದ ಅವುಗಳಿಗೆ ವಾಸಿಸಲು 1ರಿಂದ 2 ಎಕರೆ ಸ್ಥಳಾವಕಾಶವಿರಬೇಕು. ಆದರೆ, ಕಿರುಮೃಗಾಲಯದಲ್ಲಿ ವನ್ಯ ಪ್ರಾಣಿಗಳನ್ನು ಒಂದು ಚಿಕ್ಕ ಕೊಠಡಿಗಳಲ್ಲಿ ಕೂಡಿಹಾಕಲಾಗಿದೆ. ಈಚೆಗೆ ಕಿರುಮೃಗಾಲಯಕ್ಕೆ ಪರಿಶೀಲಿಸಲು ಆಗಮಿಸಿದ್ದ ಕೇಂದ್ರ ಮೃಗಾಲಯ ಪ್ರಾಧಿಕಾರದ ಅಧಿಕಾರಿಗಳು, ಚಿಕ್ಕ-ಚಿಕ್ಕ ಕೊಠಡಿಗಳಲ್ಲಿ ವನ್ಯ ಪ್ರಾಣಿಗಳನ್ನು ಇರಿಸಿರುವುದನ್ನು ಕಂಡು ಬೆಚ್ಚಿಬಿದ್ದಿದ್ದಾರೆ. ಪ್ರಾಣಿಗಳನ್ನು ಕೂಡಲೇ ಕಮಲಾಪುರ ಬಳಿಯ ಜೂಲಾಜಿಕಲ್ ಉದ್ಯಾನವನಕ್ಕೆ ಸ್ಥಳಾಂತರಿಸುವಂತೆ ಸೂಚಿಸಿದ್ದಾರೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಆದಾಯವೂ ಕುಸಿತ: ವನ್ಯಜೀವಿ ಪ್ರಾಣಿಗಳಿಗೆ ಅರಣ್ಯದಲ್ಲಿ ಇದ್ದಂತೆ ಓಡಾಡಿಕೊಂಡು ಜೀವಿಸುವಂತಹ ವಾತಾವರಣ ಕಲ್ಪಿಸಿದರೆ ಅವುಗಳ ಆಯುಷ್ಯ ಹೆಚ್ಚಳವಾಗಲಿದೆ. ಆದರೆ, ಒಂದು ಕಡೆ ಕೂಡಿಹಾಕಿದರೆ, ಎಲ್ಲೂ ಸಂಚರಿಸದೆ ಒಂದೇ ಕಡೆ ನಿಂತು ಆರೋಗ್ಯ ವೃದ್ಧಿಯಾಗದೆ ಆಯುಷ್ಯ ಕಡಿಮೆಯಾಗಲಿದೆ ಎಂದು ಪರಿಸರ ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅಲ್ಲದೇ, ಕಿರುಮೃಗಾಲಯ ಪಕ್ಕದಲ್ಲೇ ರೈಲ್ವೆ ಹಳಿಗಳು ಇರುವುದರಿಂದ ಹಗಲಿರುಳು ಸಂಚರಿಸುವ ರೈಲುಗಳ ಶಬ್ದ ಪ್ರಾಣಿಗಳಿಗೆ ಕಿರಿಕಿರಿ ಉಂಟು ಮಾಡುತ್ತಿದೆ. ಜತೆಗೆ ಸಮೀಪದ ದೊಡ್ಡಬಾವಿ ನೀರನ್ನು ಮೃಗಾಲಯಕ್ಕೆ ಸರಬರಾಜು ಮಾಡುತ್ತಿದ್ದು, ಈ ನೀರು ಪ್ರಾಣಿಗಳ ಸೇವನೆಗೆ ಯೋಗ್ಯವಲ್ಲ. ನೀರಿನ ಸಮಸ್ಯೆಯೂ ಎದುರಿಸುತ್ತಿದೆ. ಇದೆಲ್ಲಕ್ಕಿಂತ ಮುಖ್ಯವಾಗಿ ಮೃಗಾಲಯ ಆದಾಯದ ಕೊರತೆ ಎದುರಿಸುತ್ತಿದೆ. ವಾರದ ಕೊನೆಯ ದಿನಗಳಾದ ಶನಿವಾರ, ಭಾನುವಾರ ಮಾತ್ರ 10ರಿಂದ 13 ಸಾವಿರ ರೂ. ಆದಾಯ ಬಂದರೆ, ಇನ್ನೂಳಿದ ದಿನಗಳು ಕೇವಲ 3 ರಿಂದ 4 ಸಾವಿರ ರೂ. ಆದಾಯ ಬರುತ್ತದೆ. ಪರಿಣಾಮ ಮೃಗಾಲಯ ನಿರ್ವಹಣೆಗೂ ಕಷ್ಟವಾಗಲಿದೆ. ವಯಸ್ಕರರಿಗೆ 20 ರೂ., ಮಕ್ಕಳಿಗೆ 10 ರೂ.ಗಳನ್ನು ಪ್ರವೇಶ ಶುಲ್ಕ ವಿಧಿಸಲಾಗುತ್ತಿದ್ದು, ಯಾವುದೇ ವಾಹನಗಳ ಪಾರ್ಕಿಂಗ್ ಶುಲ್ಕ ವಿಧಿಸುವುದಿಲ್ಲ. ಹಾಗಾಗಿ ಮೃಗಾಲಯದಿಂದ ಹೆಚ್ಚಿನ ಪ್ರಮಾಣದಲ್ಲಿ ಆದಾಯ ನಿರೀಕ್ಷಿಸುವಂತಿಲ್ಲ ಎಂದು ಬೇಸರ ವ್ಯಕ್ತಪಡಿಸುತ್ತಾರೆ ಮೃಗಾಲಯದ ಸಿಬ್ಬಂದಿ.
ಟ್ರೀ ಪಾರ್ಕ್ ನಿರ್ಮಾಣ: ಕಿರು ಮೃಗಾಲಯ ಕಮಲಾಪುರದ ಜೂಲಾಜಿಕಲ್ ಪಾರ್ಕ್ಗೆ ಸ್ಥಳಾಂತರಗೊಂಡ ಬಳಿಕ ಈ ಸ್ಥಳದಲ್ಲಿ ವಿವಿಧ ರೀತಿಯ ಜನಾಕರ್ಷಿಸುವ ಟ್ರೀ ಪಾರ್ಕ್ ನಿರ್ಮಿಸಲು ಅರಣ್ಯ ಇಲಾಖೆ ಸಿದ್ಧತೆ ನಡೆಸಿದೆ ಎನ್ನಲಾಗುತ್ತಿದೆ. ನಗರ ಹೊರವಲಯದಲ್ಲಿ ಈಗಾಗಲೇ ಟ್ರೀ ಪಾರ್ಕ್ ನಿರ್ಮಿಸುತ್ತಿದ್ದು, ಅಲ್ಲಿಗೆ ಜನರು ನಿರೀಕ್ಷಿತ ಪ್ರಮಾಣದಲ್ಲಿ ಆಗಮಿಸುವುದು ಅನುಮಾನವಿದೆ. ಆದ್ದರಿಂದ ನಗರದಲ್ಲೂ ಒಂದು ಟ್ರೀ ಪಾರ್ಕ್ ನಿರ್ಮಿಸುವ ಮೂಲಕ ಸ್ಥಳೀಯ ಜನರಿಗೆ ಅನುಕೂಲವಾಗುವ ಸಾಧ್ಯತೆಯಿದೆ ಎಂದು ಇಲಾಖೆ ಸಿಬ್ಬಂದಿ ತಿಳಿಸಿದ್ದಾರೆ.
ಬಳ್ಳಾರಿಯ ಕಿರುಮೃಗಾಲಯವನ್ನು ಶೀಘ್ರದಲ್ಲೇ ಕಮಲಾಪುರ ಬಳಿಕ ಜೂಲಾಜಿಕಲ್ ಪಾರ್ಕ್ ಗೆ ಸ್ಥಳಾಂತರಿಸಲಾಗುತ್ತದೆ. ಮೃಗಾಲಯದಲ್ಲಿನ ಪ್ರಾಣಿಗಳಿಗೆ ಸಮರ್ಪಕ ಮೂಲಸೌಲಭ್ಯಗಳು ಇಲ್ಲವೆಂದು ಕೇಂದ್ರ ಮೃಗಾಲಯ ಪ್ರಾಧಿಕಾರ ಈ ಆದೇಶವನ್ನು ಹೊರಡಿಸಿದೆ. ಈ ಕುರಿತು ನಗರದ ಜನರಿಗೆ ಅನುಕೂಲವಾಗಲಿದೆ ಎಂದು ಮನವರಿಕೆ ಮಾಡಿದರೂ, ಪ್ರಾಧಿಕಾರ ಕೇಳುತ್ತಿಲ್ಲ. ಹಾಗಾಗಿ ಶೀಘ್ರದಲ್ಲೇ ಸ್ಥಳಾಂತರವಾಗುವ ಈ ಸ್ಥಳದಲ್ಲಿ ಟ್ರೀ ಪಾರ್ಕ್ ನಿರ್ಮಿಸುವ ಉದ್ದೇಶ ಹೊಂದಲಾಗಿದೆ.•ರಮೇಶ್ ಕುಮಾರ್, ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿ, ಬಳ್ಳಾರಿ
ಕಿರುಮೃಗಾಲಯದಲ್ಲಿ ವನ್ಯಪ್ರಾಣಿಗಳಿಗೆ ಸಮರ್ಪಕ ಮೂಲಸೌಲಭ್ಯಗಳಿಲ್ಲ. ಮುಖ್ಯವಾಗಿ ನಿರೀಕ್ಷಿತ ಪ್ರಮಾಣದಲ್ಲಿ ಆದಾಯದ ಕೊರತೆಯಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಮೃಗಾಲಯ ಪ್ರಾಧಿಕಾರದವರು ಕಿರುಮೃಗಾಲಯವನ್ನು ಸ್ಥಳಾಂತರಿಸುವಂತೆ ಸೂಚಿಸಿರಬಹುದು. ಎರಡು ವರ್ಷಗಳ ಹಿಂದೆಯೇ 150 ಜಿಂಕೆಗಳನ್ನು ಸ್ಥಳಾಂತರಿಸಲಾಗಿದೆ.
•ಅಣ್ಣೇಗೌಡ, ಮೇಲ್ವಿಚಾರಕ, ಕಿರುಮೃಗಾಲಯ
•ಸ್ಥಳಾಂತರಕ್ಕೆ ಕೇಂದ್ರ ಮೃಗಾಲಯ ಪ್ರಾಧಿಕಾರ ಸೂಚನೆ
•ಪ್ರಾಣಿಗಳಿಗೆ ಮೃಗಾಲಯದಲ್ಲಿಲ್ಲ ಮೂಲ ಸೌಲಭ್ಯ
•ಮೃಗಾಲಯ ಸ್ಥಳದಲ್ಲಿ ಟ್ರೀ ಪಾರ್ಕ್ ನಿರ್ಮಾಣ
•ಆದಾಯ ಕುಂಠಿತ-ಮೃಗಾಲಯ ನಿರ್ವಹಣೆಗೂ ಕಷ್ಟ
•1981ರಲ್ಲಿ ಅಂದಿನ ಸಿಎಂ ಆರ್. ಗುಂಡೂರಾವ್ ಉದ್ಘಾಟನೆ
•ಮೃಗಾಲಯ ಪಕ್ಕದಲ್ಲೇ ರೈಲು ಸಂಚಾರ-ಪ್ರಾಣಿಗಳಿಗೆ ಕಿರಿಕಿರಿ
•ವೆಂಕೋಬಿ ಸಂಗನಕಲ್ಲು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hosapete; ಕೆಲವು ದೇಶಗಳು ಭಾರತ ಸರ್ಕಾರ ದುರ್ಬಲವಾಗಿರಲು ಬಯಸುತ್ತಿವೆ: ಮೋದಿ
Bellary; ಕಾಂಗ್ರೆಸ್ ಪಕ್ಷದ ಚಿಹ್ನೆ ಚೊಂಬಿಗೆ ಬದಲಾಗಿದೆ: ಸುರೇಶ್ ಕುಮಾರ್ ವ್ಯಂಗ್ಯ
BJP ಶ್ರೀರಾಮುಲುಗೆ ಗೆಲುವು ಅನಿವಾರ್ಯ; ಕ್ಷೇತ್ರ ವಶಕ್ಕೆ ಕೈ ತವಕ
ಭಾರತೀಯ ಚೊಂಬು ಪಕ್ಷದಿಂದ ಕರ್ನಾಟಕಕ್ಕೆ ಚೊಂಬು: ರಾಹುಲ್
Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!
MUST WATCH
ಹೊಸ ಸೇರ್ಪಡೆ
Panaji: ದೇಶದ ಅತ್ಯಂತ ಶ್ರೀಮಂತ ಅಭ್ಯರ್ಥಿ ಪಲ್ಲವಿ ಧೆಂಪೊ
Lok Sabha ಚುನಾವಣೆಗೆ ಸಮಯದಲ್ಲೇ ಕೇಜ್ರಿವಾಲ್ ಬಂಧಿಸಿದ್ಯಾಕೆ..?; ಇ.ಡಿಗೆ ಸುಪ್ರೀಂ ಪ್ರಶ್ನೆ
Gokarna; 7 ವರ್ಷಗಳಿಂದ ಆಮೆಗತಿಯಲ್ಲಿ ಸಾಗುತ್ತಿರುವ ಮಂಜಗುಣಿ-ಗಂಗಾವಳಿ ಸೇತುವೆ
Thirthahalli: ಚುನಾವಣಾ ಬಹಿಷ್ಕಾರ; ಸ್ವ-ಇಚ್ಛೆಯಿಂದ ಸಾವಿರಕ್ಕೂ ಅಧಿಕ ಮಂದಿಯಿಂದ ನಿರ್ಧಾರ !
ಬಿಜೆಪಿ ಸುಳ್ಳು ಉತ್ಪಾದನೆ ಮಾಡುವ ಫ್ಯಾಕ್ಟರಿ: ಸಿಎಂ ಸಿದ್ದರಾಮಯ್ಯ