ಕನಿಷ್ಠ 10 ಮಂದಿಗೆ ಕನ್ನಡ ಕಲಿಸಲು ಮುಂದಾದ ಬೀದರ್ ಯುವಕ
ಬ್ರಿಟಿಷ್ ನೆಲದಲ್ಲಿ "ಆದೀಶ್' ಕನ್ನಡದ ಕಂಪು
Team Udayavani, Oct 10, 2022, 7:35 AM IST
ಬೀದರ್: ಬ್ರಿಟನ್ನ ಪಾರ್ಲೆಮೆಂಟರ್ ಲೀಡರ್ ಶಿಪ್ಗೆ ಆಯ್ಕೆಯಾಗಿದ್ದ ಗಡಿನಾಡು ಬೀದರ್ನ ಆದೀಶ ರಜನೀಶ ವಾಲಿ ಲಂಡನ್ನಲ್ಲಿ ಕನ್ನಡ ಕಿಚ್ಚು ಹಚ್ಚುವ ಕೆಲಸ ಮಾಡುತ್ತಿದ್ದು, ನವೆಂಬರ್ ತಿಂಗಳಲ್ಲಿ ಬ್ರಿಟಿಷ್ ಹುಡುಗರಿಗೆ ಕನ್ನಡ ಕಲಿಸುವ ಯೋಜನೆ ಹಾಕಿಕೊಂಡಿದ್ದಾರೆ.
ತನ್ನ ಕನಿಷ್ಠ 10 ಜನ ಸಹಪಾಠಿಗಳಿಗೆ ಕನ್ನಡ ಕಲಿಸುವ ಗುರಿ ಹೊಂದಿರುವ ಇವರಿಗೆ ಅಜ್ಜ, ಹಿರಿಯ ಪತ್ರಕರ್ತ ಶಿವಶರಣಪ್ಪ ವಾಲಿ, ಉದ್ಯಮಿಯಾಗಿರುವ ತಂದೆ ಡಾ| ರಜನೀಶ ವಾಲಿ ಹಾಗೂ ತಾಯಿ ಅಂಜನಾ ಪ್ರೇರಣೆ.
ಲಂಡನ್ನ ಯುಎನ್ ಪ್ರಶಸ್ತಿ ಪುರಸ್ಕೃತ ಪಾರ್ಲಿ ಮೆಂಟರ್ ಲೀಡರ್ಶಿಪ್ ಕಾರ್ಯಕ್ರಮದ ಮೂಲಕ ಪದವೀಧರರಾದ ಆದೀಶ, ಪಾರ್ಲಿಮೆಂಟರ್ಸ್ ಲೀಡರ್ಶಿಪ್ ಕಾರ್ಯಕ್ರಮದ ಪದವಿ ಪುರಸ್ಕಾರ ಸಮಾರಂಭದಲ್ಲಿ ಯುಕೆ ಸಂಸತ್ತಿನ ಈಸ್ಟ್ ಹ್ಯಾಮ್ನ ಸಂಸತ್ ಸದಸ್ಯ ಸರ್ ಸ್ಟೀಫನ್ ಟಿಮ್ಸ್ ಅವರಿಂದ ಸಮ್ಮಾನಿತರಾಗಿದ್ದರು.
ಅಪ್ಪಟ ಇಂಗ್ಲಿಷ್ ನಾಡಲ್ಲಿ ನಡೆದ ಎಂಜಿನಿಯರಿಂಗ್ ಪದವಿ ಪುರಸ್ಕಾರದ ಘಟಿಕೋತ್ಸವದಲ್ಲಿ ಆದೀಶ್ ಕನ್ನಡದ ಶಾಲು ಹಾಕಿ ವೇದಿಕೆಗೆ ಹೋಗಿದ್ದು ವಿಶೇಷ. ಸ್ವೀಡನ್ನ ಕನ್ನಡ ಕೌನ್ಸಿಲರ್ಗಳು ಆದೀಶ ಸಾಧನೆ ಹಾಗೂ ಕೋವಿಡ್ ಸಂಕಷ್ಟದ ಸಂದರ್ಭದಲ್ಲಿ ಕೈಗೊಂಡ ಸಾಮಾಜಿಕ ಕಾರ್ಯಗಳನ್ನು ಮೆಚ್ಚಿ ಸಮ್ಮಾನಿಸಿದ್ದಾರೆ.