ಚಂದ್ರಶೇಖರ ಭವಿಷ್ಯ ಹಾಳು ಮಾಡಿದ ಬಿಜೆಪಿ: ದಿನೇಶ
Team Udayavani, Nov 4, 2018, 6:25 AM IST
ಬೀದರ: ಬಿಜೆಪಿಯವರು ರಾಮನಗರ ಅಭ್ಯರ್ಥಿ ಚಂದ್ರಶೇಖರ ಅವರ ಭವಿಷ್ಯವನ್ನೇ ಹಾಳು ಮಾಡಿದ್ದಾರೆ. ಕಾಂಗ್ರೆಸ್ನ ಎಂಎಲ್ಸಿ ಮಗನನ್ನು ಬಿಜೆಪಿಗೆ ಕರೆದುಕೊಂಡು ಹೋಗಿ ಬ್ರೈನ್ವಾಶ್ ಮಾಡಿ ಬಲಿಪಶು ಮಾಡಿದ್ದಾರೆಂದು ಕೆಪಿಸಿಸಿ ಅಧ್ಯಕ್ಷ ದಿನೇಶ ಗುಂಡುರಾವ್ ಆರೋಪಿಸಿದ್ದಾರೆ.
ಭಾಲ್ಕಿ ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯವರು ಏನೇ ಹೇಳಿಕೆ ನೀಡಿದರೂ ಅವರಿಗೆ ಯಾವುದೇ ನೈತಿಕತೆ ಉಳಿದುಕೊಂಡಿಲ್ಲ. ಹಣ, ದಬ್ಟಾಳಿಕೆಯ ರಾಜಕಾರಣ ಬಿಜೆಪಿಯವರಿಗೆ ಬಿಟ್ಟಿದ್ದು. ಇದಕ್ಕೆ ಇನ್ನೊಂದು ಹೆಸರೇ ಜನಾರ್ದನ ರೆಡ್ಡಿ. ಶ್ರೀರಾಮಲು ಏನೇ ಹೇಳಿಕೆ ಕೊಟ್ಟರೂ ನಾನು ಪ್ರತಿಕ್ರಿಯಿಸುವುದಿಲ್ಲ.
ಸುಪ್ರೀಂಕೋರ್ಟ್, ಆರ್ಬಿಐ, ಸಿಬಿಐ ಎಲ್ಲ ಸಂಸ್ಥೆಗಳನ್ನು ಬಿಜೆಪಿ ಬುಡಮೇಲು ಮಾಡಲು ಹೊರಟಿದೆ. 40 ಸಾವಿರ ಕೋಟಿ ರಫೇಲ್ ಡೀಲ್ ಪ್ರಕರಣ ಮುಚ್ಚಿ ಹಾಕಲು ಯತ್ನಿಸುತ್ತಿದ್ದಾರೆ. ಲೂಟಿ ಮಾಡಲು ತಮ್ಮ ಸ್ನೇಹಿತರಿಗೆ ಕುಮ್ಮಕ್ಕು ಕೊಡುತ್ತಿದ್ದಾರೆ ಎಂದು ಟೀಕಿಸಿದರು.