Drought: ವಿಜಯಪುರ ಜಿಲ್ಲೆಯ ಬರ ಅಧ್ಯಯನ ಆರಂಭಿಸಿದ ಸಚಿವ ಎಂ.ಬಿ.ಪಾಟೀಲ್
Team Udayavani, Nov 15, 2023, 1:03 PM IST
ವಿಜಯಪುರ: ಜಿಲ್ಲೆಯ ಬರ ಪರಿಸ್ಥಿತಿ ಕುರಿತು ಕೈಗಾರಿಕೆ ಖಾತೆ ಹೊಂದಿರುವ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಬಿ.ಪಾಟೀಲ ಬುಧವಾರ ಅಧ್ಯಯನ ಪ್ರವಾಸ ಆರಂಭಿಸಿದ್ದಾರೆ.
ಇಂಡಿ ಶಾಸಕ ಯಶವಂತ್ರಾಯಗೌಡ ಪಾಟೀಲ, ನಾಗಠಾಣ ಶಾಸಕ ವಿಠ್ಠಲ ಕಟಕಧೋಂಡ ಜೊತೆಗೂಡಿ ಜಿಲ್ಲೆಯ ಬರ ಪರಿಸ್ಥಿತಿ ಪರಿಶೀಲನೆ ನಡೆಸಿದರು.
ವಿಜಯಪುರ ತಾಲೂಕಿನ ತಿಡಗುಂದಿ ಗ್ರಾಮದ ಬಳಿ ಮುಳವಾಡ ಏತ ನೀರಾವರಿ ಯೋಜನೆ 2 ರ ಕಾಲುವೆ ವೀಕ್ಷಣೆ ನಡೆಸಿದರು.
ವಿವಿಧ ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದ ಸಚುವರು, ಭೀಕರ ಬರಗಾಲ ಇರುವ ಹಿನ್ನೆಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗದಂತೆ ಕೆರೆಗೆ ನೀರು ತುಂಬಿಸಲು ಆದ್ಯತೆ ನೀಡುವಂತೆ ಸೂಚಿಸಿದರು.
ಬಳಿಕ ಇಂಡಿ ತಾಲೂಕಿನ ಅಗಸನಾಳ ಗ್ರಾಮದ ಬಳಿ 16 ಕೆರೆಗಳಿಗೆ ನೀರು ತುಂಬಿಸುವ ಯೋಜನಾ ಸ್ಥಳಕ್ಕೆ ಭೇಟಿ ನೀಡಿ, ಕಾಮಗಾರಿ ವೀಕ್ಷಿಸಿದರು.
ಇಂಡಿ ಭಾಗದ 16 ಕೆರೆಗಳಿಗೆ ನೀರು ತುಂಬಿಸುವ ಯೋಜನೆಯ ಜಾಕ್ ವೆಲ್ ನಿರ್ಮಾಣ ಕಾಮಗಾರಿ ಪರಿಶೀಲಿಸಿ, ಅಧಿಕಾರಿಗಳಿಂದ ಮಾಹಿತಿ ಪಡೆದರು.
ಚಡಚಣ ತಾಲೂಕಿನ ಸಾವಳಂಗ, ಇಂಚಗೇರಿ ಭಾಗದಲ್ಲಿ ಬರ ಪರಿಶೀಲನೆ ನಡೆಸಿದರು.
ಹೊರ್ತಿ ಗ್ರಾಮದ ಭೀಮಾಶಂಕರ ಬಾಹುರಾಯ ಪೂಜಾರಿ ಅವರ ಜಮೀನಿಗೆ ಭೇಟಿ ನೀಡಿ, ನೀರಿನ ಕೊರತೆಯಿಂದ ಕಟಾವು ಹಂತದಲ್ಲಿ ಕಬ್ಬು ಬೆಳೆ ಒಣಗ, ಆರ್ಥಿಕ ಹಾನಿ ಆಗಿರುವುದನ್ನು ಪರಿಶೀಲನೆ ನಡೆಸಿದರು.
ಜಿಲ್ಲಾಧಿಕಾರಿ ಭೂಬಾಲನ್, ಜಿ.ಪಂ. ಸಿಇಒ ರಾಹುಲ್ ಶಿಂಧೆ, ಎಸ್ಪಿ ಋಷಿಕೇಶ ಭಗವಾನ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದು, ಜಿಲ್ಲೆಯ ಬರ, ಜನ-ಜಾನುವಾರು ಕುಡಿಯುವ ನೀರು ಪರಿಸ್ಥಿತಿ, ಮನರೇಗಾ ಯೋಜನೆಯ ಕಾಮಗಾರಿ, ಗ್ರಾಮೀಣ ಭಾಗದ ಜನರಿಗೆ ಉದ್ಯೋಗ ಸೃಷ್ಟಿ ಸೇರಿದಂತೆ ಜಿಲ್ಲೆಯ ಬರ ಪರಿಸ್ಥಿತಿ ಕುರಿತು ಸಚಿವ ಎಂ.ಬಿ.ಪಾಟೀಲ ಅವರಿಗೆ ವಿವರಿಸಿದರು.
ಇದನ್ನೂ ಓದಿ: Tragedy: ಪಟಾಕಿ ಸಿಡಿದು ಯುವಕ ಮೃತ್ಯು… ದೀಪಾವಳಿ ಸಂಭ್ರಮದಲ್ಲಿದ್ದ ಮನೆಯಲ್ಲಿ ನೀರವ ಮೌನ