ಚಾ.ನಗರ ಜಿಲ್ಲೆ: ಕೋವಿಡ್ನಿಂದ ವೃದ್ಧ ಸಾವು ; ಇಂದು 49 ಹೊಸ ಕೋವಿಡ್ ಪ್ರಕರಣಗಳು
Team Udayavani, Jul 20, 2020, 8:37 PM IST
ಇಂದು ಕೋವಿಡ್ 19 ಸೋಂಕಿನಿಂದ ಮೃತಪಟ್ಟ ಕೊಳ್ಳೇಗಾಲ ಸತ್ತೇಗಾಲದ ವೃದ್ಧರ ಅಂತ್ಯಕ್ರಿಯೆ ಸಂದರ್ಭದಲ್ಲಿ ಅವರ ಪುತ್ರಿ ಪೂಜೆ ಸಲ್ಲಿಸಿ ಅಂತಿಮ ನಮನ ಸಲ್ಲಿಸುತ್ತಿರುವುದು.
ಚಾಮರಾಜನಗರ: ಕೋವಿಡ್ 19 ಸೋಂಕಿನಿಂದ ಜಿಲ್ಲೆಯಲ್ಲಿ ಇಂದು ಓರ್ವ ವೃದ್ಧ ಮೃತಪಟ್ಟಿದ್ದಾರೆ.
ಇಬ್ಬರು ಪೊಲೀಸರು, ಅರಣ್ಯ ಇಲಾಖೆ ವಾಚರ್ ಸೇರಿದಂತೆ ಜಿಲ್ಲೆಯಲ್ಲಿ ಇಂದು 49 ಕೋವಿಡ್ 19 ಪ್ರಕರಣಗಳು ಪತ್ತೆಯಾಗಿವೆ.
ಇದರಿಂದ ಜಿಲ್ಲೆಯಲ್ಲಿ ಪ್ರಕರಣಗಳ ಸಂಖ್ಯೆ 346ಕ್ಕೇರಿದ್ದು, 143 ಸಕ್ರಿಯ ಪ್ರಕರಣಗಳಿವೆ.
ಕೊಳ್ಳೇಗಾಲ ತಾಲೂಕಿನ ಸತ್ತೇಗಾಲದ 78 ವರ್ಷದ ವೃದ್ಧ ಮೃತಪಟ್ಟವರು. ಇದರಿಂದಾಗಿ ಜಿಲ್ಲೆಯಲ್ಲಿ ಕೋವಿಡ್ನಿಂದ ಮೃತರಾದವರ ಸಂಖ್ಯೆ 4ಕ್ಕೇರಿದೆ. ಇವರು ಅಸ್ತಮಾ ಸಮಸ್ಯೆಯಿಂದ ಬಳಲುತ್ತಿದ್ದರು ಹಾಗಾಗಿ ಇವರಿಗೆ ಉಸಿರಾಟದ ತೊಂದರೆ ಇತ್ತು.
ಈ ಬಾರಿಯೂ ಇವರಿಗೆ ಉಸಿರಾಟದ ತೊಂದರೆ ಕಾಣಿಸಿಕೊಂಡಿತ್ತು. ಚಿಕಿತ್ಸೆಗೆಂದು ಮೈಸೂರಿಗೆ ಹೋಗಿ ಬಳಿಕ ತಮ್ಮ ಮನೆಗೆ ಮರಳಿದ್ದರು. ಈ ಸಂದರ್ಭದಲ್ಲಿ ಇವರಿಗೆ ಸೋಂಕು ತಗುಲಿರಬಹುದೆಂದು ಅಂದಾಜಿಸಲಾಗಿದೆ.
ಗಂಭೀರ ಸ್ಥಿತಿಯಲ್ಲಿದ್ದ ಇವರನ್ನು ಜು.19ರಂದು ನಗರದ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಪರೀಕ್ಷೆ ನಡೆಸಿದಾಗ ಕೋವಿಡ್ 19 ಪಾಸಿಟಿವ್ ಬಂದಿತ್ತು. ವೈದ್ಯರು ತೀವ್ರ ನಿಗಾ ಘಟಕದಲ್ಲಿರಿಸಿ ಚಿಕಿತ್ಸೆ ನೀಡುತ್ತಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಭಾನುವಾರ ತಡ ರಾತ್ರಿ ಮೃತಪಟ್ಟಿದ್ದಾರೆ.
ಪುತ್ರಿಯಿಂದ ಪೂಜೆ: ಮೃತರ ಅಂತ್ಯಕ್ರಿಯೆಯನ್ನು ಜಿಲ್ಲಾ ಕೇಂದ್ರದ ಎಡಬೆಟ್ಟದ ತಪ್ಪಲಿನಲ್ಲಿ, ಜಿಲ್ಲಾಡಳಿತದ ಮಾರ್ಗಸೂಚಿಯನ್ವಯ ಪಿಎಫ್ಐ ಕಾರ್ಯಕರ್ತರು ನಡೆಸಿದರು. ಅಂತ್ಯಕ್ರಿಯೆಗೂ ಮೊದಲು ಮೃತರ ಮಗಳು ಸ್ಥಳದಲ್ಲಿ ಸರಳವಾದ ಪೂಜೆ ಸಲ್ಲಿಸಿ ಅಂತಿಮ ನಮನ ಸಲ್ಲಿಸಿದ್ದು ಮನ ಕಲಕುವಂತಿತ್ತು. ಈ ಭಾವುಕ ಸನ್ನಿವೇಶದ ಮಾಹಿತಿಯನ್ನು ಪಿಎಫ್ಐ ಕಾರ್ಯಕರ್ತರೊಬ್ಬರು ನೀಡಿದ್ದಾರೆ.
ಗುಂಡ್ಲುಪೇಟೆ ತಾಲೂಕಿನಲ್ಲಿ ಇಂದು ಹೆಚ್ಚಿನ ಪ್ರಕರಣಗಳು ಕಂಡು ಬಂದಿವೆ. ಒಟ್ಟು 19 ಪ್ರಕರಣಗಳು ಅದೊಂದೇ ತಾಲೂಕಿನಿಂದ ವರದಿಯಾಗಿವೆ. ಕೊಳ್ಳೇಗಾಲ ತಾಲೂಕಿನಿಂದ 18, ಚಾಮರಾಜನಗರ ತಾಲೂಕಿನ 5, ಯಳಂದೂರು ತಾಲೂಕಿನ 4 ಹಾಗೂ ಹನೂರು ತಾಲೂಕಿನ 3 ಪ್ರಕರಣಗಳು ವರದಿಯಾಗಿವೆ.
ಹನೂರು ಪೊಲೀಸ್ ಠಾಣೆಯ ಇಬ್ಬರು ಪೊಲೀಸರಿಗೆ, ಚಾಮರಾಜನಗರ ಪಟ್ಟಣದ ಹೌಸಿಂಗ್ ಬೋರ್ಡ್ ಕಾಲೋನಿಯ ಅರಣ್ಯ ನರ್ಸರಿಯ ವಾಚರ್ ಓರ್ವರಿಗೆ ಸೋಂಕು ತಗುಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chamarajanagar: ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದವನಿಗೆ 20 ವರ್ಷ ಜೈಲು
Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !
Chamarajanagar: ಕೊಳ್ಳೇಗಾಲ ಶಾಸಕ ಎ ಆರ್ ಕೃಷ್ಣಮೂರ್ತಿ ಕಾರು ಅಪಘಾತ, ಅಪಾಯದಿಂದ ಪಾರು
Election; ಸೂಲಿಬೆಲೆ ಕಾರ್ಯಕ್ರಮದಲ್ಲಿ ಫ್ಲೈಯಿಂಗ್ ಸ್ಕ್ವಾಡ್ ಅಧಿಕಾರಿಯ ತಳ್ಳಾಡಿದ ಯುವಕರು
Bandipur: ನಡು ರಸ್ತೆಯಲ್ಲೇ ಹುಲಿ ದಾಳಿಗೆ ಆನೆ ಮರಿ ಸಾವು!