ಮಾರಕಾಸ್ತ್ರಗಳಿಂದ ಬಡಿದಾಟ; ಮೂವರು ಸಾವು
Team Udayavani, May 28, 2020, 5:02 AM IST
ಗುಂಡ್ಲುಪೇಟೆ: ಹಳೇ ವೈಷಮ್ಯ ಹಾಗೂ ಹಣಕಾಸಿನ ವಿಚಾರಕ್ಕೆ ಪಟ್ಟಣದ ಜಾಕೀರ್ ಹುಸೇನ್ ಬಡಾವಣೆಯಲ್ಲಿ ಮೂವರನ್ನು ಮಾರಕಾಸ್ತ್ರಗಳಿಂದ ಹತ್ಯೆ ಮಾಡಿರುವ ಮಂಗಳವಾರ ರಾತ್ರಿ ನಡೆದಿದೆ. ಪಟ್ಟಣದ ಜಕಾಹುಲ್ಲಾ (30), ಕೈಸರ್ (29), ಇಕ್ರೀತ್ (30) ಹತ್ಯೆಗೊಳಗಾದವರು. ನಸುರುಲ್ಲಾ(30) ತೀವ್ರ ಗಾಯಗಳಿಂದ ಮೈಸೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಘಟನಾ ಸ್ಥಳಕ್ಕೆ ಬುಧವಾರ ಭೇಟಿ ನೀಡಿದ ದಕ್ಷಿಣ ವಲಯ ಐಜಿಪಿ ವಿಪುಲ್ ಕುಮಾರ್ ಪರಿಸ್ಥಿತಿಯನ್ನು ಅವಲೋಕಿಸಿದರು. ಈ ಹಿಂದೆ ಹಣಕಾಸಿನ ವ್ಯವಹಾರದಲ್ಲಿ ಎರಡು ಗುಂಪುಗಳ ನಡುವೆ ವೈಮನಸ್ಯವಿತ್ತು. ಈ ಘಟನೆಯಿಂದ ಮಾಜಿ ಪುರಸಭೆ ಸದಸ್ಯ ನೂರುಲ್ಲಾ ಅವರ ಮೂವರು ಸಹೋದರರನ್ನು ಕೊಲೆ ಮಾಡಲಾಗಿದೆ. ಇಬ್ಬರ ಸ್ಥಿತಿ ಗಂಭೀರವಾಗಿದ್ದು, ಮೂವರು ಅಪಾಯದಿಂದ ಪಾರಾಗಿದ್ದಾರೆ ಎಂದು ಎಸ್ಪಿ ಆನಂದ ಕುಮಾರ್ ತಿಳಿಸಿದರು.
ಈಗಾಗಲೇ ಒಬ್ಬ ಆರೋಪಿಯನ್ನು ವಶಕ್ಕೆ ಪಡೆದಿದ್ದು ಉಳಿದ ಆರೋಪಿಗಳ ಪತ್ತೆಗಾಗಿ 4 ತಂಡ ರಚಿಸಲಾಗಿದೆ. ಪಟ್ಟಣದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡ ಲಾಗಿದೆ. ಸ್ಥಳಕ್ಕೆ ಜಿಪಂ ಪ್ರಭಾರ ಅಧ್ಯಕ್ಷ ಮಹೇಶ್, ಕಾಂಗ್ರೆಸ್ ಮುಖಂಡ ಗಣೇಶ್ ಪ್ರಸಾದ್ ಭೇಟಿ ನೀಡಿ ಮೃತರ ಕುಂಟುಂಬಕ್ಕೆ ಸಾಂತ್ವನ ಹೇಳಿದರು.