ಇನ್ನು ಬೆಂಕಿಬಿದ್ದರೆ ನೀರೂ ಇಲ್ಲ, ಜನವೂ ಇಲ್ಲ
Team Udayavani, Mar 12, 2019, 12:30 AM IST
ಬಂಡೀಪುರ: ಇಲ್ಲಿನ ರಾಷ್ಟ್ರೀಯ ಉದ್ಯಾನವನದ 874 ಚ.ಕಿಮೀ.ಕಾಯುವುದಕ್ಕೆ ಇರುವುದು 298 ಜನ ಸಿಬ್ಬಂದಿ! ಅದರಲ್ಲೂ ಫಿಲ್ಡ್ಗೆ ಇಳಿದು ಕೆಲಸ ಮಾಡುವ ಗಾರ್ಡ್ಗಳ ಸಂಖ್ಯೆ 72, ಅಂದರೆ, ಪ್ರತಿ. 13 ಚ.ಕಿಮೀಗೆ ಒಬ್ಬ ಗಾರ್ಡ್. ಹೀಗಿದ್ದರೆ ಕಾಡಿಗೆ ಬೆಂಕಿ ಬಿದ್ದಾಗ ಸಂರಕ್ಷಣೆ ಮಾಡುವುದಾದರು ಹೇಗೆ? ಬಂಡೀಪುರದ ವಲಯದಲ್ಲಿ ಶೇ.40ರಷ್ಟು ಹುದ್ದೆಗಳು ಖಾಲಿ ಇವೆ. 99 ಗಾರ್ಡುಗಳು ಬೇಕಾಗಿದ್ದಾರೆ. 51 ಕ್ಯಾಂಪ್ಗ್ಳಲ್ಲಿ 200 ಜನ ಗುತ್ತಿಗೆಯಲ್ಲಿ ಕೆಲಸ ಮಾಡುತ್ತಿದ್ದಾರೆ.
ಜನವರಿಯಿಂದ ಏಪ್ರಿಲ್ ತನಕದ ಕಾಡಿಗೆ ಬೆಂಕಿ ಬೀಳದಂತೆ ತಡೆಯಲು ಫೈರ್ ವಾಚರ್ಸ್ಗಳನ್ನು ನೇಮಿಸಿಕೊಳ್ಳುತ್ತಾರೆ. ಈ ಸಲ ಬೆಂಕಿ ಬಿದ್ದ ಮೇಲೆ 390 ಜನರ ನೇಮಕವಾಗಿದ್ದಾರಂತೆ ಅನ್ನೋದು ಸುದ್ದಿ.
ಅಂದರೆ, ಪ್ರತಿ ಎರಡೂವರೆ ಚ.ಕಿಮೀಗೆ ಒಬ್ಬ ಫೈರ್ ವಾಚರ್! ಗಡ್ಡಕ್ಕೆ ಬೆಂಕಿ ಬಿದ್ದಾಗ ಬಾವಿ ತೋಡುವ ಕೆಲಸ ಅಂದರೆ ಇದೇ ಇರಬೇಕು. ಒಂದು ಮೂಲದ ಪ್ರಕಾರ ಈ ಸಾಲಿನ ಫೈರ್ಲೈನ್ನ ತಯಾರಿ ಕೂಡ ಯೋಜಿತವಾಗಿ ಆಗಿರಲಿಲ್ಲ.
ಮೊದಲು ಬೆಂಕಿ ಕಾಣಿಸಿಕೊಂಡದ್ದು ಕುಂದಕೆರೆ ರೇಂಜ್ನ ಚೌಡಹಳ್ಳಿಯಲ್ಲಿ. ಅಲ್ಲಿನ ವಲಯ ಅರಣ್ಯಾಧಿಕಾರಿ ಕಚೇರಿಯಿಂದ ಆ ಸ್ಥಳಕ್ಕೆ ತಲುಪಲು ಕನಿಷ್ಠ ಅರ್ಧಗಂಟೆ ಬೇಕು. ಇನ್ನು ಮುಖ್ಯ ಕಚೇರಿಯಿಂದ ಸಿಬ್ಬಂದಿಯನ್ನು ಸಾಗಿಸಲು ಮೂಕ್ಕಾಲು ಅಥವಾ 1 ಗಂಟೆಯೇ ಆಗುತ್ತದೆ. ಸಿಬ್ಬಂದಿ ಇಲ್ಲದೆ ಬರಿಗೈ ದಾಸನಂತೆ ನಿಂತ ಇಲಾಖೆ ಯಾವ ರೀತಿ ಬೆಂಕಿ ನಂದಿಸಿರಬಹುದು?”ಸಾರ್, ಕುಂದಕೆರೆಯಲ್ಲಿ ಬೆಂಕಿ ನಂದಿತು ಅನ್ನೋ ಹೊತ್ತಿಗೆ, (ಮಾರನೆ ದಿನ) ಹಿಮವದ್ ಗೋಪಾಲಸ್ವಾಮಿ ಬೆಟ್ಟದಲ್ಲಿ ಕಾಣಿಸಿಕೊಂಡಿತು.
ಮತ್ತೆ ಅಲ್ಲಿಗೆ ಓಡಿದೆವು. ಅದು ಮುಗಿಯುವ ಹೊತ್ತಿಗೆ ಕುಳ್ಳನ ಬೆಟ್ಟ ಹೀಗೆ 4 ದಿನ ಕಣ್ಣಿಗೆ ನಿದ್ದೆಯೇ ಇಲ್ಲ’ ಅಂತ ಹೇಳುತ್ತಾರೆ ಹೆಸರು ಹೇಳಲು ಇಚ್ಚಿಸದ ಗಾರ್ಡ್.”ನಾವು ಫೈರ್ಲೈನ್ ಮಾಡಿರ್ತೀವಿ. ಅದು ಹಾದಿ ಅಂಚಿಗೆ ಇರುತ್ತದೆ. ಆದರೆ ಕಿಡಿಗೇಡಿಗಳು ಅರಣ್ಯ ಮಧ್ಯದಲ್ಲಿ ಬೆಂಕಿ ಕೊಟ್ಟರೆ ಏನು ಮಾಡೋದು? ಅದಕ್ಕಾಗಿ ಈ ಸಲ ಬೇಸಿಗೆ ಎದುರಿಸಲು ನೀರಿನ ಟ್ಯಾಂಕರ್ ಗಳನ್ನು ಸಿದಟಛಿ ಮಾಡುತ್ತಿದ್ದೇವೆ’ ಎನ್ನುತ್ತಾರೆ ಬಂಡೀಪುರ ಅರಣ್ಯ ಸಂರಕ್ಷಣಾಧಿಕಾರಿ ಮತ್ತು ಹುಲಿಯೋಜನೆಯ ಕ್ಷೇತ್ರ ನಿರ್ದೇಶಕರಾದ ಬಾಲಚಂದರ್.
ಟಿ. ಹೊಂದಾಣಿಕೆ ಇಲ್ಲವೇ?: ಮೇಲುನೋಟಕ್ಕೆ ಕಾಡಿಗೆ ಬೆಂಕಿ ಇಟ್ಟವರು ಕಿಡಿಗೇಡಿಗಳೇ. ಆದರೆ, ಒಳಗೆ ಹರಿಯುತ್ತಿರುವ ಸತ್ಯ ಬೇರೆಯೇ. ಈತನಕ ಬೆಂಕಿ ಪ್ರಕರಣಗಳಲ್ಲಿ ಎಷ್ಟು ಮಂದಿಗೆ ಶಿಕ್ಷೆಯಾಗಿದೆ? ಅಂದರೆ ಉತ್ತರ ಶೂನ್ಯ. ಇಂಥ ಘಟನೆಗಳಿಂದ ಇಲಾಖೆ ಕಲಿತದ್ದಾದರೂ ಏನು? ಯಾವ ಪಾಠವೂ ಕಲಿತಿಲ್ಲ ಅನ್ನೋದಕ್ಕೆ ಕರಕಲಾಗಿರುವ ಹಿಮವದ್ ಗೋಪಾಲಸ್ವಾಮಿಬೆಟ್ಟ ಸಾಕ್ಷಿಯಾಗಿ ನಿಂತಿದೆ.
13 ವಲಯದಲ್ಲಿನ ಆರ್ಎಫ್ಓಗಳನಡುವೆ ಹೇಳಿಕೊಳ್ಳುವಂಥ ಹೊಂದಾಣಿಕೆ ಕಾಣುತ್ತಿಲ್ಲ ಅನ್ನೋದು ಗುಪ್ತವಾಗಿಲ್ಲ. “ಸದ್ಯ
ನಮ್ಮ ರೇಂಜಿಗೆ ಬೆಂಕಿ ಬಿದ್ದಿಲ್ವಲ್ಲ ಅಷ್ಟೇ ಸಾಕು’ ಅಂತ ನಿಟ್ಟುಸಿರು ಬಿಡುವ ಮಂದಿ ಹೆಚ್ಚಿದ್ದಾರೆ.
ಅದೂ ನಮ್ಮ ಕಾಡು, ಅದಕ್ಕೆ ಬೆಂಕಿ ಬೀಳದಂತೆ ಮಾಡಲು ಏನು ಮಾಡಬೇಕು ಅನ್ನೋದರ ಬಗ್ಗೆ ಯೋಚನೆ ಮಾಡೇ ಇಲ್ಲ ಅನ್ನೋ ಆರೋಪ ಕೇಳಿಬರುತ್ತಿದೆ. ಹೀಗಾಗಿ, ಕಾಡಿಗೆ ಬೆಂಕಿ ಬೀಳುವುದು ಕೂಡ ಇಲಾಖೆಗೆ ಯುಗಾದಿ, ಶ್ರೀರಾಮನವಮಿಯಂಥಸಂಭ್ರಮವೇ ಆಗಿದೆ.
ಕಾಡಲ್ಲಿ ನೀರಿಲ್ಲ ಏಕೆ?
ಕಾಡಿಗೆ ಬೆಂಕಿ ಬಿದ್ದಾಕ್ಷಣ ನೀರು ಬೇಕು ಅಂದರೆ ತಕ್ಷಣ ಕೈಗೆ ಸಿಗುವುದು ಹಿರಿಕೆರೆ, ಅರಳೀಕಟ್ಟೆ ಕೆರೆ ಮಾತ್ರ. ಬಂಡೀಪುರದ 13 ರೇಂಜ್ನಲ್ಲಿ 45 ಬೋರ್ವೆಲ್ಗಳಿವೆ. 312 ಕೆರೆಗಳಿವೆ.
ಬೇಸಿಗೆ ಬಂದರೆ ಇದರಲ್ಲಿ ಶೇ. 50ರಷ್ಟು ಕೆರಗಳಲ್ಲಿ ನೀರು ಇರುವುದಿಲ್ಲ. ಸೋಲಾರ್ ಬಳಸಿ ಕೆರೆಗಳಿಗೆ ನೀರು ಹರಿಸುವ ಸ್ಥಿತಿ ಇದೆ. 750 ಅಡಿ ಕೊರೆದರೂ ನೀರು ದೊರಕದು. ಇದಕ್ಕೆ ಕಾರಣ ಹುಡುಕಲು ಹೊರಟಾಗ ಕಂಡದ್ದು, ಕೇರಳಿಗರು ಕಾಡಂಚಿನಲ್ಲಿ ಬೆಳೆಯುತ್ತಿರುವ ಶುಂಠಿಯಿಂದ ಭೂಮಿಯ ಮೇಲ್ಪದರ ಹಿಂಗಿರುವುದು. ಅದೇ ರೀತಿ, ನೀಲಗಿರಿ ಮರಗಳು ಕೂಡ ಅಂತರ್ಜಲವನ್ನು ಕುಡಿಯುತ್ತಿದೆ. ಕೆರೆ ಸುತ್ತಲಿನ ಲಂಟಾನದಿಂದ ನೀರು ಇಂಗುತ್ತಿಲ್ಲ. ಈ ಸಲದ ಬೇಸಿಗೆ ಬಂಡೀಪುರ ಕಾವಲಿಯಾಗಬಹುದು. ಏಕೆಂದರೆ, ಮಳೆಗಾಲದಲ್ಲಿ ನೀರು ಹಿಡಿದು, ಬೇಸಿಗೆಯಲ್ಲಿ ಒದಗಿಸುತ್ತಿದ್ದ ಹಿಮವದ್ಗೋಪಾಲಸ್ವಾಮಿ ಬೆಟ್ಟದಲ್ಲಿದ್ದ ಶೇ.30ರಷ್ಟು ಶೋಲಾ ಕಾಡು ಬೆಂಕಿಗೆ ಆಹುತಿಯಾಗಿದೆ.
ಇಷ್ಟಾದರೂ ಕಾಡಲ್ಲಿ ನೀರೇಕೆ ಇಲ್ಲ ಅನ್ನೋದಕ್ಕೆ ಪರಿಸರ ತಜ್ಞ ಶಿವಾನಂದ ಕಳವೆ ಹೇಳುವುದು ಹೀಗೆ “ಅರಣ್ಯ ಇಲಾಖೆಗೆ
ಬೋರ್ವೆಲ್ ಕೊರೆಸುವ ಸಂಭ್ರಮ ಕೆರೆ ಹೂಳೆತ್ತವುದರಲ್ಲಿ ಇಲ್ಲ. ಜೋಡಿಕೆರೆ ಪದ್ಧತಿ ಜಾರಿ ಮಾಡಿದರೆ ನೀರು ಹಿಡಿಯಬಹುದು. ಬೋರ್ವೆಲ್ ಕೊರೆಯಲು ಅನುಮತಿ ಸಿಗಬಹುದಾದರೆ, ಕೆರೆ ಅಭಿವೃದ್ಧಿಗೆ ಏಕೆ ಇಲ್ಲ? ಪ್ರಾಣಿಗಳಿಗೆ ನೀರುಣಿಸುವುದು ಲಾಭದ ಗುತ್ತಿಗೆಯಾಗಿದೆ’ ಎನ್ನುತ್ತಾರೆ.