ಸುಪ್ರಿಂ ಕೋರ್ಟ್ ನ್ಯಾಯಾಧೀಶ ಎಂ.ಆರ್. ಶಾ ಚಾಮರಾಜ ನಗರಕ್ಕೆ ಭೇಟಿ
Team Udayavani, Dec 21, 2022, 9:30 PM IST
ಚಾಮರಾಜನಗರ: ಸುಪ್ರಿಂ ಕೋರ್ಟ್ ನ್ಯಾಯಾಧೀಶ ಎಂ.ಆರ್. ಶಾ ಅವರು ತಮ್ಮ ಪತ್ನಿ ಡಿಂಪಿ ಶಾ ಅವರೊಂದಿಗೆ ನಗರದ ರಾಮಸಮುದ್ರದಲ್ಲಿರುವ ಹರಳುಕೋಟೆ ಆಂಜನೇಯಸ್ವಾಮಿ ದೇವಾಲಯಕ್ಕೆ ಬುಧವಾರ ಖಾಸಗಿ ಭೇಟಿ ನೀಡಿ ಪೂಜೆ ಸಲ್ಲಿಸಿದರು.
ಮಂಗಳವಾರ ಸಂಜೆ ಯಳಂದೂರು ತಾಲೂಕಿನ ಬಿಳಿಗಿರಿರಂಗನಾಥಸ್ವಾಮಿ ದೇವಾಲಯದಲ್ಲಿ ಪೂಜೆ ಸಲ್ಲಿಸಿ, ಕೆ. ಗುಡಿಯಲ್ಲಿ ವಾಸ್ತವ್ಯ ಹೂಡಿದ್ದ ಎಂ.ಆರ್. ಶಾ ಅವರು ಬುಧವಾರ ಬೆಳಿಗ್ಗೆ ನಗರಕ್ಕೆ ಆಗಮಿಸಿ ಹರಳುಕೋಟೆ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಸ್ವಾಮಿಯ ದರ್ಶನ ಪಡೆದರು.
ಹರಳುಕೋಟೆ ಆಂಜನೇಯ ದೇವಾಲಯದ ಪ್ರಧಾನ ಅರ್ಚಕ ಶ್ರೀನಿಧಿ ಅಯ್ಯಂಗಾರ ಈ ಸಂದರ್ಭದಲ್ಲಿ ವಿಶೇಷ ಪೂಜೆ ನೆರವೇರಿಸಿದರು. ಬಳಿಕ ನಗರದ ಫಾರೆಸ್ಟ್ ನರ್ಸರಿ ರಸ್ತೆಯಲ್ಲಿರುವ ಪಂಡಿತ್ ವಿಜಯಕುಮಾರ್ ಅವರ ಮನೆಯಲ್ಲಿ ನಡೆದ ವಿಶೇಷ ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಬಳಿಕ ಗುಂಡ್ಲುಪೇಟೆ ತಾಲೂಕಿನ ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ತೆರಳಿ ಪೂಜೆ ಸಲ್ಲಿಸಿ, ಸಂಜೆ ಮೈಸೂರಿಗೆ ತೆರಳಿದರು. ಜಿಲ್ಲಾಧಿಕಾರಿ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶ ಲೋಕಪ್ಪ, ರಮೇಶ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಕುಮಾರ್, ಎಎಸ್ಪಿ ಸುಂದರರಾಜ್, ಡಿವೈಎಸ್ಪಿ ಪ್ರಿಯದರ್ಶಿನಿ ಸಾಣೆಕೊಪ್ಪ ಉಪಸ್ಥಿತರಿದ್ದರು.