Chikkaballapur: ಜಿಲ್ಲೆಯಲ್ಲಿಲ್ಲ ವನ್ಯಜೀವಿಗಳಿಗೆ ಸೂಕ್ತ ರಕ್ಷಣೆ
Team Udayavani, Oct 5, 2023, 11:39 AM IST
ಚಿಕ್ಕಬಳ್ಳಾಪುರ: ರಾಜ್ಯದಲ್ಲಿ ಅ.2 ರಿಂದ 8ರ ವರೆಗೂ ವನ್ಯಜೀವಿಗಳ ಸಂರಕ್ಷಣಾ ಸಪ್ತಾಹವನ್ನು ಇಲಾಖೆ ನಡೆಸುತ್ತಿದೆ. ಆದರೆ ಜಿಲ್ಲೆಯಲ್ಲಿ ಮಾನವ ಹಾಗೂ ವನ್ಯಜೀವಿಗಳ ನಡುವಿನ ಸಂಘರ್ಷ ಕಡಿಮೆ ಇದ್ದರೂ ಕಳೆದ 10 ವರ್ಷದಲ್ಲಿ ಬರೋಬ್ಬರಿ 7 ಚಿರತೆಗಳು ಮೃತಪಟ್ಟಿವೆ.
ಹೌದು, ಹೇಳಿ ಕೇಳಿ ದಶಕಗಳ ಕಾಲ ಬರದ ಬವಣೆಗೆ ಒಳಗಾಗಿದ್ದ ಜಿಲ್ಲೆಯು ಸಂಪೂರ್ಣ ಬಯಲು ಪ್ರದೇಶವಾ ದರೂ ಹಿಂದಿನ ಎರಡು, ಮೂರು ವರ್ಷದಲ್ಲಿ ಜಿಲ್ಲಾದ್ಯಂತ ಸುರಿದ ಭಾರೀ ವರ್ಷಾಧಾರೆಯ ಪರಿಣಾಮ ಜಿಲ್ಲೆಯಲ್ಲಿ ಹಸಿರು ಹೊದಿಕೆ ಹೆಚ್ಚಾಗುತ್ತಿದ್ದಂತೆ ವನ್ಯಜೀವಿಗಳ ಸಂತತಿ ಹೆಚ್ಚಾಗಿದೆ.
ಜಿಲ್ಲೆಯಲ್ಲಿ ಅರಣ್ಯ ಭಾಗದಲ್ಲಿ ಎಂದೂ ಕಾಣದ ಕಡೆಗಳಲ್ಲಿ ಚಿರತೆಗಳು, ಕಾಡು ಹಂದಿ, ಕರಡಿ, ಮೊಲ, ಜಿಂಕೆಗಳು ಸೇರಿದಂತೆ ಅಪಾರ ಪ್ರಮಾಣದಲ್ಲಿ ವನ್ಯ ಜೀವಿಗಳು ಕಂಡು ಬರುತ್ತಿವೆ. ಆದರೆ ಜಿಲ್ಲೆಯಲ್ಲಿ ವನ್ಯ ಜೀವಿಗಳಿಗೆ ಮಾತ್ರ ಸೂಕ್ತ ರಕ್ಷಣೆ ಇಲ್ಲದಂತಾಗಿರುವುದು ಮಾತ್ರ ಜಿಲ್ಲೆಯಲ್ಲಿ ವನ್ಯ ಜೀವಿಗಳ ಸಂರಕ್ಷಣಾ ಸಪ್ತಾಹ ಲೆಕ್ಕಕ್ಕುಂಟು ಆಟಕ್ಕಿಲ್ಲ ಎಂಬಂತಾಗಿದೆ.
ವನ್ಯಜೀವಿ ಸಂರಕ್ಷಣೆ ಕುರಿತು ಅರಿವು ಮೂಡಿಸಿ: ಒಂದು ಕಾಲಕ್ಕೆ ಬಟಾ ಬಯಲು ಪ್ರದೇಶವನ್ನು ಹೊಂದಿದ್ದ ಜಿಲ್ಲೆಯು ಅರಣ್ಯೀಕರಣ ಹೆಚ್ಚಳದಿಂದ ವನ್ಯ ಜೀವಿಗಳ ಸಂತತಿ ಹೇರಳ ಪ್ರಮಾಣದಲ್ಲಿ ಹೆಚ್ಚಾಗಿರುವುದು ಸಂತಸ ತಂದರೂ, ಅರಣ್ಯ ಸಂರಕ್ಷಣೆಯಲ್ಲಿ ಪ್ರಮುಖ ಪಾತ್ರ ವಹಿಸುವ ವನ್ಯ ಜೀವಿಗಳಿಗೆ ಜಿಲ್ಲೆಯಲ್ಲಿ ರಕ್ಷಣೆ ಇಲ್ಲದೇ ಇರುವುದು ಎದ್ದು ಕಾಣುತ್ತಿದೆ. ಈ ನಿಟ್ಟಿನಲ್ಲಿ ಜಿಲ್ಲಾಡಳಿತ, ಅರಣ್ಯ ಇಲಾಖೆ ಅಧಿಕಾರಿಗಳು ಎಚ್ಚೆತ್ತುಕೊಂಡು ಜಿಲ್ಲೆಯ ಅಮೂಲ್ಯವಾದ ಅರಣ್ಯ ಸಂಪನ್ಮೂಲ ರಕ್ಷಣೆಗಾಗಿ ವನ್ಯ ಜೀವಿಗಳ ಸಂರಕ್ಷಣೆಗೆ ವಿಶೇಷ ಕಾಳಜಿ ವಹಿಸಿದಾಗ ಮಾತ್ರ ವನ್ಯ ಜೀವಿಗಳ ಸಂರಕ್ಷಣಾ ಸಪ್ತಾಹಕ್ಕೆ ಅರ್ಥ ಬರುತ್ತದೆ. ಈ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ವನ್ಯ ಜೀವಿಗಳ ಸಂರಕ್ಷಣೆ ಕುರಿತು ಜನ ಜಾಗೃತಿ ಮೂಡಿಸುವ ದಿಕ್ಕಿನಲ್ಲಿ ಅರಣ್ಯ ಇಲಾಖೆ ಇನ್ನಷ್ಟು ಸಕ್ರಿಯಗೊಳ್ಳಬೇಕಿದೆ.
ಗಣಿಗಾರಿಕೆಯಿಂದ ವನ್ಯಜೀವಿಗಳಿಗೆ ಇಲ್ಲ ರಕ್ಷಣೆ!:
ಜಿಲ್ಲೆಯಲ್ಲಿಯೆ ಅತಿ ಹೆಚ್ಚು ಅಕ್ರಮ ಗಣಿಗಾರಿಕೆಗೆ ಕುಖ್ಯಾತಿ ಆಗಿರುವ ಚಿಕ್ಕಬಳ್ಳಾಪುರ ತಾಲೂಕಿನ ಅಸುಪಾಸಿನಲ್ಲಿ ಗಣಿಗಾರಿಕೆ ಅರ್ಭಟ ಹೆಚ್ಚಾಗಿರು ವುದರಿಂದ ವನ್ಯ ಜೀವಿಗಳಿಗೆ ರಕ್ಷಣೆ ಇಲ್ಲದಂತಾಗಿದೆ. ಇದಕ್ಕೆ ತಾಜಾ ಉದಾಹರಣೆ ಇತ್ತೀಚಿಗೆ ಚಿಕ್ಕಬಳ್ಳಾಪುರ ತಾಲೂಕಿನಲ್ಲಿ ಸಾರ್ವಜನಿಕವಾಗಿ ಕಾಣಿಸಿಕೊಂಡ ಚಿರತೆಗಳೇ ಸಾಕ್ಷಿ, ಚಿಕ್ಕಬಳ್ಳಾಪುರ ತಾಲೂಕಿನಲ್ಲಿ ನೂರಾರು ಕಡೆ ಗಣಿಗಾರಿಕೆ ಸದ್ದು ಇರುವುದರಿಂದ ವನ್ಯ ಜೀವಿಗಳಿಗೆ ಸೂಕ್ತ ವಾಸ ಸ್ಥಾನ ಸಿಗದೇ ಗ್ರಾಮಗಳಿಗೆ ಲಗ್ಗೆ ಹಾಕುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದಕ್ಕೆ ಮುಖ್ಯ ಕಾರಣ ಅರಣ್ಯ ಪ್ರದೇಶದ ಬೆಟ್ಟ, ಗುಡ್ಡಗಳಲ್ಲಿ ಮೀತಿ ಮಿರಿ ನಡೆಯುತ್ತಿರುವ ಗಣಿಗಾರಿಕೆ ಎನ್ನುವುದನ್ನು ಪ್ರತ್ಯೇಕವಾಗಿ ಹೇಳಿಬೇಕಿಲ್ಲ. ಮಂಡಿಕಲ್ಲು, ಪೆರೇಸಂದ್ರ ಸುತ್ತಮುತ್ತ ಸಾಕಷ್ಟು ಗಣಿಗಾರಿಕೆ ನಡೆಯುತ್ತಿದ್ದು, ರಾತ್ರಿ ವೇಳೆ ಗಣಿಗಾರಿಕೆಗೆ ಬಳಸುವ ಸಿಡಿಮುದ್ದುಗಳ ಸ್ಫೋಟಕ್ಕೆ ಬೆದರಿ ಚಿರತೆ, ಕರಡಿಗಳು ಕಾಡಿನಿಂದ ಜನವಸತಿ ಪ್ರದೇಶಗಳಿಗೆ ನುಗ್ಗಿ ಬರುತ್ತಿವೆ. ಕೆಲವೊಮ್ಮೆ ರಸ್ತೆ ದಾಟುವಾಗ ವಾಹನಗಳ ಡಿಕ್ಕಿಯಾಗಿ ಚಿರತಗೆಳು ಸಾವುಗೀಡಾಗುತ್ತಿರುವುದು ಜಿಲ್ಲೆಯಲ್ಲಿ ಎದ್ದು ಕಾಣುತ್ತಿದೆ.
ಜಿಲ್ಲೆಯಲ್ಲಿ ಕಳೆದ 10 ವರ್ಷದಲ್ಲಿ 7 ಚಿರತೆಗಳು ಮೃತಪಟ್ಟಿವೆ. ಕೆಲವೊಂದು ಚಿರತೆಗಳು ಅಪಘಾತದಲ್ಲಿ ಸತ್ತಿವೆ. ಚಿರತೆ ದಾಳಿಯಿಂದ ಯಾವುದೇ ಸಾವುನೋವು ಜಿಲ್ಲೆಯಲ್ಲಿ ಸಂಭವಿಸಿಲ್ಲ. ಚಿರತೆಗಳು ಕಾಣಿಸಿಕೊಂಡ ಕಡೆ ಅರಣ್ಯ ಇಲಾಖೆ ನಿಗಾವಹಿಸಿ ಸಾರ್ವಜನಿಕರನ್ನು ಎಚ್ಚರದಿಂದ ಇರುವಂತೆ ಅರಿವು ಮೂಡಿಸಲಾಗಿದೆ.-ಬಿ.ಆರ್.ರಮೇಶ್, ಉಪ ಅರಣ್ಯ ಸಂರಕ್ಷಣಾಧಿಕಾರಿ, ಚಿಕ್ಕಬಳ್ಳಾಪುರ
-ಕಾಗತಿ ನಾಗರಾಜಪ್ಪ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chikkaballapur: ಕೃಷಿ ಹೊಂಡದಲ್ಲಿ ಈಜಲು ಹೋಗಿ ಇಬ್ಬರು ವಿದ್ಯಾರ್ಥಿಗಳು ಸಾವು
Bribe: ಲಂಚ ಸ್ವೀಕರಿಸುವ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ಶಿಡ್ಲಘಟ್ಟ ತಾ.ಪಂ ಇಒ ಮುನಿರಾಜು
Lok Sabha Elections: ಸೋಲು,ಗೆಲುವಿನ ಲೆಕ್ಕಾಚಾರ
Chikkaballapur: 13.63 ಕೋಟಿ ರೂ. ಚುನಾವಣಾ ಅಕ್ರಮ ಮದ್ಯ ಜಪ್ತಿ!
Lok Sabha elections: ಲೋಕ ಸಮರ; ಮತದಾನದಲ್ಲಿ ಪುರುಷರೇ ಮೇಲುಗೈ