ಎಬಿಎಆರ್ಕೆ ಕಾರ್ಡ್ ಸೇವಾ ಕೇಂದ್ರದಲ್ಲಿ ಲಭ್ಯ
Team Udayavani, Dec 31, 2019, 1:06 PM IST
ಚಿತ್ರದುರ್ಗ: ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಯೋಜನೆ ಕಾರ್ಡ್ಗಳನ್ನು ಈವರೆಗೆ ಸಮುದಾಯ ಆರೋಗ್ಯ ಕೇಂದ್ರ, ಸಾರ್ವಜನಿಕ ಆಸ್ಪತ್ರೆಗಳಲ್ಲಿ ಮಾತ್ರ ಪಡೆಯಬಹುದಾಗಿತ್ತು. ಈಗ ಎಬಿಎಆರ್ಕೆ ಕಾರ್ಡ್ನ್ನು ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯತಿ ವ್ಯಾಪ್ತಿಯ ಬಾಪೂಜಿ ಸೇವಾ ಕೇಂದ್ರಗಳಲ್ಲಿ ಪಡೆಯಬಹುದು ಎಂದು ಡಿಎಚ್ಒ ಡಾ| ಸಿ.ಎಲ್ ಪಾಲಾಕ್ಷ ಹೇಳಿದರು.
ಜಿಲ್ಲಾ ಆರೋಗ್ಯ ಇಲಾಖೆ ಹಾಗೂ ಚಿತ್ರದುರ್ಗ ತಾಲೂಕು ಪಂಚಾಯತಿ ಇವರ ಸಹಯೋಗದಲ್ಲಿ ಚಿತ್ರದುರ್ಗ ತಾಲೂಕು ಪಂಚಾಯತಿ ಸಭಾಂಗಣದಲ್ಲಿ ಪಿಡಿಒ ಹಾಗೂ ಗಣಕಯಂತ್ರ ನಿರ್ವಾಹಕರಿಗೆ ಆಯೋಜಿಸಿದ್ದ “ಆಯುಷ್ಮಾನ್ ಭಾರತ್, ಆರೋಗ್ಯ ಕರ್ನಾಟಕ, ಆರೋಗ್ಯ ಯೋಜನೆ (ಎಬಿಎಆರ್ಕೆ) ಕಾರ್ಡ್ ಗಣಕಯಂತ್ರದ ಮೂಲಕ ಆನ್ಲೈನ್ನಲ್ಲಿ ಸೃಜನೆ ಮಾಡುವ ಕೌಶಲ್ಯ ಕುರಿತ ತರಬೇತಿ’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಎಬಿಎಆರ್ಕೆ ಯೋಜನೆಯು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಂಯೋಜಿತ ಯೋಜನೆಯಾಗಿದೆ. ಬಿಪಿಎಲ್ ಹಾಗೂ ಎಪಿಎಲ್ ಕಾರ್ಡ್ ಹೊಂದಿರುವ ಎಲ್ಲಾ ನಾಗರಿಕರು ಈ ಕಾರ್ಡ್ ಪಡೆಯಬಹುದು. ಗ್ರಾಮ ಮಟ್ಟದಲ್ಲಿ ಎಲ್ಲ ಅರ್ಹ ನಾಗರಿಕರಿಗೆ ಎಬಿಎಆರ್ಕೆ ಕಾರ್ಡ್ ಸಮರ್ಪಕವಾಗಿ ವಿತರಣೆ ಮಾಡಲು ಪಿಡಿಒಗಳ ಸಹಕಾರ ಅಗತ್ಯ ಎಂದರು.
ಎಬಿಎಆರ್ಕೆ ಯೋಜನೆಯ ಜಿಲ್ಲಾ ಕಾರ್ಯಕ್ರಮದ ಅನುಷ್ಠಾನಾಧಿಕಾರಿ ಡಾ| ಚಂದ್ರಶೇಖರ್ ಕಂಬಾಳಿ ಈ ಕುರಿತ ಉಪನ್ಯಾಸ ನೀಡಿದರು.