ಕೋವಿಡ್ ನಿಯಂತ್ರಣಕ್ಕೆ ಜನತೆ ಸಹಕಾರ ಅಗತ್ಯ: ರಘುಮೂರ್ತಿ
Team Udayavani, Jun 1, 2020, 1:17 PM IST
ಸಾಂದರ್ಭಿಕ ಚಿತ್ರ
ಚಳ್ಳಕೆರೆ: ಲಾಕ್ಡೌನ್ ಸಂದರ್ಭದಲ್ಲಿ ಸಾರ್ವಜನಿಕವಾಗಿ ಬಂದ ಆಹಾರ ಕಿಟ್ ಗಳನ್ನು ಬಡವರು ಹಾಗೂ ಅಂಗವಿಕಲರಿಗೆ ನೀಡಲಾಗುತ್ತಿದೆ ಎಂದು ಶಾಸಕ ಟಿ. ರಘುಮೂರ್ತಿ ಹೇಳಿದರು.
ತಾಲೂಕಿನ ನಗರಂಗೆರೆ ಗ್ರಾಮ ಪಂಚಾಯತ್ ಆವರಣದಲ್ಲಿ ಅಂಗವಿಕಲರಿಗೆ ಆಹಾರ ಕಿಟ್ ವಿತರಿಸಿ ಅವರು ಮಾತನಾಡಿದರು. ಕಳೆದ ಎರಡು ತಿಂಗಳುಗಳಿಂದ ನಗರ ಹಾಗೂ ಗ್ರಾಮೀಣ ಪ್ರದೇಶದ ಜನರು ಲಾಕ್ಡೌನ್ ಹಿನ್ನೆಲೆಯಲ್ಲಿ ಅನೇಕ ರೀತಿಯ ಸಂಕಷ್ಟಗಳಿಗೆ ಒಳಗಾಗಿದ್ಧಾರೆ. ಸರ್ಕಾರದ ಪರಿಹಾರ ಜನರಿಗೆ ತಲುಪುವುದು ವಿಳಂಬವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರು ಹಾಗೂ ಸಂಘ ಸಂಸ್ಥೆಗಳು ಸ್ವಯಂ ಪ್ರೇರಣೆಯಿಂದ ಮುಂದೆ ಬಂದು ಆಹಾರದ ಕಿಟ್ಗಳನ್ನು ನೀಡಿ ಬಡವರಿಗೆ ವಿತರಿಸಲು ನೆರವಾಗಿದ್ದಾರೆ. ಯಾವುದೇ ಸಂದರ್ಭದಲ್ಲೂ ಸಾರ್ವಜನಿಕರು ಭಯಪಡದೆ ಕೋವಿಡ್ ವೈರಾಣು ನಿಯಂತ್ರಣದಲ್ಲಿ ಸರ್ಕಾರದೊಂದಿಗೆ ಕೈ ಜೋಡಿಸಬೇಕೆಂದರು.
ದೇವರಮರಿಕುಂಟೆ, ಗೋಪನಹಳ್ಳಿ ಗ್ರಾಪಂ ವ್ಯಾಪ್ತಿಯ ಗ್ರಾಮಗಳಲ್ಲಿನ ಅಂಗವಿಕಲರಿಗೆ ಆಹಾರ ಕಿಟ್ಗಳನ್ನು ವಿತರಿಸಲಾಯಿತು. ಜಿಪಂ ಮಾಜಿ ಸದಸ್ಯ ಟಿ. ರವಿಕುಮಾರ್, ತಾಪಂ ಸದಸ್ಯರಾದ ಟಿ. ಗಿರಿಯಪ್ಪ, ಜಿ. ವೀರೇಶ್, ರಂಜಿತಾ, ಗ್ರಾಪಂ ಅಧ್ಯಕ್ಷ ಬಿ.ಸಿ. ಸತೀಶ್ಕುಮಾರ್, ಸದಸ್ಯರಾದ ಶೈಲಜಾ ಮಂಜುನಾಥ, ಕುಮಾರಸ್ವಾಮಿ, ರಮೇಶ್ಕುಮಾರ್, ಕೋಣಪ್ಪ, ಅಂಜಿನಪ್ಪ, ಶೇಖರಪ್ಪ, ಮಹಂತೇಶ್, ತಿಪ್ಪೇಸ್ವಾಮಿ, ಪಿಡಿಒಗಳಾದ ರಾಮಚಂದ್ರಪ್ಪ, ಶಶಿಕಲಾ, ಇರ್ಫಾನ್ ಮತ್ತಿತರರು ಇದ್ದರು.