ಜನರಲ್ಲಿನ ಕೋವಿಡ್ ಭಯ ನಿವಾರಣೆಗೆ ಯತ್ನ: ಕುಮಾರಸ್ವಾಮಿ
Team Udayavani, Jun 1, 2020, 4:18 PM IST
ಸಾಂದರ್ಭಿಕ ಚಿತ್ರ
ಚಳ್ಳಕೆರೆ: ಕೋವಿಡ್ ವೈರಾಣು ನಿಯಂತ್ರಣದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ಯಶಸ್ವಿಯಾಗಿದ್ದಾರೆ. ಪಾಸಿಟಿವ್ ಪ್ರಕರಣದ ರೋಗಿಗಳು ಸಹ ಗುಣಮುಖರಾಗಿದ್ದು, ಈ ಬಗ್ಗೆ ಯಾರೂ ಆತಂಕ ಪಡುವ ಅವಶ್ಯಕತೆ ಇಲ್ಲ ಎಂದು ಜಿಲ್ಲಾ ಕೋವಿಡ್ ವೈರಾಣು ನಿಯಂತ್ರಣ ನೋಡಲ್ ಅಧಿಕಾರಿ ಕುಮಾರಸ್ವಾಮಿ ಹೇಳಿದರು.
ಭಾನುವಾರ ನಗರದ ಹೊರವಲಯದಲ್ಲಿರುವ ಬಿಸಿಎಂ ಹಾಸ್ಟೆಲ್ಗೆ ಭೇಟಿ ನೀಡಿದ್ದ ಅವರು ಕೋವಿಡ್ ಪಾಸಿಟಿವ್ ದೃಢಪಟ್ಟಿರುವ ರೋಗಿಗಳ ಆರೋಗ್ಯ ವಿಚಾರಿಸಿ ಸೌಲಭ್ಯಗಳ ಪರಿಶೀಲನೆ ನಡೆಸಿ ಅವರು ಮಾತನಾಡಿದರು. ಜಿಲ್ಲಾ ಕೇಂದ್ರಗಳಲ್ಲೇ ಪಾಸಿಟಿವ್ ಪ್ರಕರಣಗಳಿಗೆ ಚಿಕಿತ್ಸೆ ನೀಡಬೇಕೆಂಬ ನಿಯಮವಿದೆ. ಆದರೆ ಸಾರ್ವಜನಿಕರಲ್ಲಿ ಈ ರೋಗದ ಬಗ್ಗೆ ಇರುವ ಆತಂಕ ಹಾಗೂ ಭಯವನ್ನು ದೂರ ಮಾಡಲು ತಾಲೂಕು ಮಟ್ಟದಲ್ಲೇ ಚಿಕಿತ್ಸೆ ಮುಂದುವರೆಸಲಾಗಿದೆ. ಪ್ರಸ್ತುತ ಸ್ಥಿತಿಯಲ್ಲಿ ಈ ರೋಗದ ಬಗ್ಗೆ ಜನರಲ್ಲಿ ಇರುವ ಭಯದ ವಾತಾವರಣ ದೂರವಾಗುತ್ತಿದೆ ಎಂದರು.
ಸರ್ಕಾರಿ ಆಸ್ಪತ್ರೆ ಆಡಳಿತಾಧಿಕಾರಿ ಡಾ| ಬಸವರಾಜು, ತಾಲೂಕು ಆರೋಗ್ಯಾಧಿಕಾರಿ ಡಾ| ಎನ್. ಪ್ರೇಮಸುಧಾ, ಆರ್ಆರ್ಟಿ ತಂಡದ ಮುಖ್ಯಸ್ಥರಾದ ಆರ್. ನಾಗರಾಜು, ಪ್ರಸನ್ನಕುಮಾರ್, ಗಂಗಾಧರ, ಚಂದ್ರಪ್ಪ, ಎಸ್.ಬಿ. ತಿಪ್ಪೇಸ್ವಾಮಿ, ಎನ್. ಪ್ರೇಮಕುಮಾರ್, ಪ್ರಯೋಗಾಲಯ ಸಿಬ್ಬಂದಿ ಶಿವಕುಮಾರ್, ರಮೇಶ್, ದಯಾನಂದ, ವಿಕ್ರಮ್, ಎಚ್.ತಿಪ್ಪೇಸ್ವಾಮಿ ಇದ್ದರು.