Chitradurga ಹೂವುಗಳ ಬೆಲೆ ಕುಸಿತ; ತಿಪ್ಪೆಗೆ ಸುರಿದು ಆಕ್ರೋಶಗೊಂಡ ರೈತ
Team Udayavani, Oct 13, 2023, 5:31 PM IST
ಭರಮಸಾಗರ(ಚಿತ್ರದುರ್ಗ) : ಒಂದೆಡೆ ಮಳೆಯಿಲ್ಲದೆ ಕರೆಂಟ್ ಕಣ್ಣಾಮುಚ್ಚಾಲೆ ನಡುವೆ ಕಷ್ಟಪಟ್ಟು ಇಲ್ಲೊಬ್ಬ ಯುವ ರೈತ ಚೆಂಡು ಹೂ ಬೆಳೆದು ಮಾರುಕಟ್ಟೆಗೆ ಹೂ ಮಾರಾಟ ಮಾಡಲು ಹೋದರೆ ಹೂ ಕೊಳ್ಳುವವರೆ ಇಲ್ಲದೆ ಹೂವನ್ನು ವಾಪಾಸ್ ಮನೆಗೆ ತಂದು ತನ್ನ ತಿಪ್ಪೆಗೆ ಸುರಿದಿರುವ ಘಟನೆ ನಡೆದಿದೆ.
ಚಿತ್ರದುರ್ಗ ತಾಲೂಕಿನ ಸಿದ್ದವ್ವನದುರ್ಗ ಗ್ರಾಮದ ಚನ್ನಬಸಪ್ಪ ಎಂಬ ಯುವ ರೈತ ಎರಡು ಎಕರೆ ಜಮೀನಿನಲ್ಲಿ ಹಳದಿ ಚೆಂಡು ಹೂ ಬೆಳೆದಿದ್ದಾರೆ. ಬೆಳೆಗಾಗಿ ಎಂಬತ್ತು ಸಾವಿರ ಹಣ ಖರ್ಚು ಮಾಡಲಾಗಿದೆ. ಗುರುವಾರ ಸುಮಾರು ಒಂದುವರೆ ಕ್ವೀಂಟಾಲ್ ಹೂವನ್ನು ಹತ್ತು ರೂಗಳಿಗೆ ಮಾರಾಟ ಮಾಡಿದ್ದರು. ಶುಕ್ರವಾರ ಮತ್ತೆ ಸುಮಾರು ನಾಲ್ಕು ಕ್ವೀಂಟಾಲ್ ಹೂ ಕಟಾವು ಮಾಡಿ ಚಿತ್ರದುರ್ಗ ಮಾರುಕಟ್ಟೆಗೆ ಮಾರಾಟ ಮಾಡಲು ಹೋದ ವೇಳೆ ಚೆಂಡು ಹೂ ಕೇಳುವವರೆ ಮಾರುಕಟ್ಟೆ ಯಲ್ಲಿ ಇರಲಿಲ್ಲ. ಇದರಿಂದ ಬೇಸರಗೊಂಡು ಹೂ ಮೂಟೆಗಳನ್ನು ಪುನಃ ತನ್ನೂರಿಗೆ ತಂದು ತಮ್ಮದೇ ತಿಪ್ಪೆಯಲ್ಲಿ ಗೊಬ್ಬರವಾಗಲಿ ಎಂದು ಸುರಿಯುವ ಮೂಲಕ ತಮ್ಮ ಅಸಮಾಧಾನ ವನ್ನು ತಮ್ಮಷ್ಟಕ್ಕೆ ಶಮನ ಮಾಡಿಕೊಂಡಿದ್ದಾರೆ.
ಸರ್ಕಾರ ರೈತರಿಗೆ ಕನಿಷ್ಟ ಬೆಂಬಲ ಬೆಲೆ ನಿಗದಿ ಮಾಡುವುದಿಲ್ಲ. ಅತ್ತ ಬೆಳೆಗಳಿಗೆ ನೀರು ಪೂರೈಕೆ ಮಾಡಲು ಸಮಪರ್ಕ ವಿದ್ಯುತ್ ಇಲ್ಲ. ಈ ನಡುವೆ ಹಾಕಿದ ಬಂಡವಾಳ ಕ್ಕೂ ಕೃಷಿಯಲ್ಲಿ ವಾಪಾಸ್ಸು ಬರುವ ಖಾತ್ರಿಯಿಲ್ಲದೆ ಇರುವುದು ತೀವ್ರ ನಿರಾಸೆಯನ್ನುಂಟು ಮಾಡಿದೆ ಎಂದು ರೈತ ಚನ್ನಬಸಪ್ಪ ತಮ್ಮ ಅಸಮಾಧಾನ ವ್ಯಕ್ತಪಡಿಸಿದರು