ಕ್ರೀಡಾಕೂಟದ ಯಶಸ್ಸಿಗೆ ಸಹಕಾರ ಕೊಡಿ: ವೆಂಕಟೇಶ್
ಕ್ರೀಡಾ ಮೈದಾನವನ್ನು ಸಿದ್ಧಗೊಳಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು.
Team Udayavani, Aug 25, 2022, 6:21 PM IST
ಮೊಳಕಾಲ್ಮೂರು: ತಾಲೂಕಿನಲ್ಲಿ ಹಿರಿಯ ಪ್ರಾಥಮಿಕ ಶಾಲೆಗಳ ತಾಲೂಕು ಮಟ್ಟದ ಕ್ರೀಡಾಕೂಟ ಆಯೋಜಿಸಲು ಎಲ್ಲಾ ಶಿಕ್ಷಕರು ಹಾಗೂ ಗ್ರಾಮಸ್ಥರು ಸಹಕಾರ ನೀಡಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಎಸ್. ವೆಂಕಟೇಶ್ ಮನವಿ ಮಾಡಿದರು.
ತಾಲೂಕಿನ ತುಮಕೂರಹಳ್ಳಿ ಗ್ರಾಮದ ಶ್ರೀ ಕಂಪಳರಂಗ ಗ್ರಾಮಾಂತರ ಪ್ರೌಢಶಾಲೆಯಲ್ಲಿ ಹಮ್ಮಿಕೊಂಡಿದ್ದ ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ತಾಲೂಕು ಮಟ್ಟದ ಕ್ರೀಡಾಕೂಟದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು. ತಾಲೂಕು ಮಟ್ಟದ ಕ್ರೀಡಾಕೂಟವನ್ನು ತುಮಕೂರ್ಲಹಳ್ಳಿ ಗ್ರಾಮದ ಶ್ರೀ ಕಂಪಳರಂಗ ಗ್ರಾಮಾಂತರ ಪ್ರೌಢಶಾಲೆಯ ಮೈದಾನದಲ್ಲಿ ನಡೆಸಲು ನಿರ್ಧರಿಸಲಾಗಿದೆ.
ಈ ಕ್ರೀಡಾಕೂಟಕ್ಕೆ ದೈಹಿಕ ಶಿಕ್ಷಕರು ಹಾಗೂ ಉಳಿದ ಶಿಕ್ಷಕರು ಅಗತ್ಯ ಕೆಲಸ ಕಾರ್ಯಗಳನ್ನು ಹಂಚಿಕೆ ಮಾಡಿಕೊಂಡು ಮಕ್ಕಳೊಂದಿಗೆ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳಬೇಕು. ಹಬ್ಬದೋಪಾದಿಯಲ್ಲಿ ಸಡಗರ-ಸಂಭ್ರಮದೊಂದಿಗೆ ಆಚರಿಸಬೇಕು. ತಾಲೂಕಿನ ನಾನಾ ಗ್ರಾಮಗಳ ಶಾಲೆಗಳ ಕ್ರೀಡಾಪಟು ವಿದ್ಯಾರ್ಥಿಗಳಿಗೆ ಸಾರಿಗೆ ಸೌಲಭ್ಯ ಕಲ್ಪಿಸಬೇಕಿದೆ. ಕ್ರೀಡಾಕೂಟದಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪಾರಿತೋಷಕ ಮತ್ತು ಪ್ರಶಸ್ತಿ ಪತ್ರಗಳನ್ನು ವಿತರಿಸಲಾಗುವುದು. ಕ್ರೀಡಾಕೂಟಕ್ಕೆ ಬರುವ ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಇತರರಿಗೆ ಊಟದ ಸೌಲಭ್ಯ ಕಲ್ಪಿಸಬೇಕಾಗಿದೆ.
ಕ್ರೀಡಾ ಮೈದಾನವನ್ನು ಸಿದ್ಧಗೊಳಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು. ಈ ಕ್ರೀಡಾಕೂಟದ ಉದ್ಘಾಟನೆಗೆ ಸಚಿವ ಬಿ. ಶ್ರೀರಾಮುಲು ಅವರನ್ನು ಆಹ್ವಾನಿಸಲಾಗುತ್ತದೆ ಎಂದರು.
ಪೂರ್ವಭಾವಿ ಸಭೆಯಲ್ಲಿ ದೈಹಿಕ ಶಿಕ್ಷಣ ಪರಿವೀಕ್ಷಕ ಬಿ.ಎಸ್. ಶಿವಕುಮಾರ್, ಮುಖ್ಯೋಪಾಧ್ಯಾಯ ಟಿ.ಎ. ನಿಸ್ಸಾರ್ ಅಹಮದ್, ಗ್ರಾಮ ಪಂಚಾಯಿತಿ ಅಧ್ಯಕ್ಷೆ
ಲಕ್ಷ್ಮೀದೇವಿ ಟಿ.ಎಸ್. ತಿಪ್ಪೇಸ್ವಾಮಿ, ಸದಸ್ಯರಾದ ವಿರೂಪಾಕ್ಷಪ್ಪ, ಚಂದ್ರಶೇಖರ, ಎಸ್ಡಿಎಂಸಿ ಅಧ್ಯಕ್ಷ ಟಿ.ಪಿ. ಮಂಜುನಾಥ, ಅನುದಾನಿತ ಶಾಲಾ ಶಿಕ್ಷಕರ ನೌಕರ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಬಿ. ಓಬಣ್ಣ, ದೈಹಿಕ ಶಿಕ್ಷಕರ ಸಂಘದ ಜಿಲ್ಲಾ ಕಾರ್ಯದರ್ಶಿ ಜಾಕೀರ್ ಹುಸೇನ್, ತಾಲೂಕು ದೈಹಿಕ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ವೀರಪ್ಪ, ಸಿಆರ್ಪಿ ಖಾಲೀದ್ ಹುಸೇನ್, ಶಿಕ್ಷಕರಾದ ದೇವರಾಜ್, ವೀರೇಶ್, ಮುಖಂಡರಾದ ಟಿ.ಎಸ್. ಪಾಲಯ್ಯ, ಗ್ರಾಪಂ ಮಾಜಿ ಸದಸ್ಯ ಮಂಜುನಾಥ, ಮಾರಣ್ಣ, ಡ್ರೈವರ್ ತಿಪ್ಪೇಸ್ವಾಮಿ, ಗುಂಡಯ್ಯ, ಸುರೇಶ್, ಕೆ. ಪಾಲಣ್ಣ, ಶ್ರೀನಿವಾಸ್ ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು.