ಜೆಡಿಎಸ್ ಅಧಿಕಾರಕ್ಕೆ ತರಲು ಶ್ರಮಿಸುವೆ
Team Udayavani, Jul 29, 2017, 2:38 PM IST
ಚಿತ್ರದುರ್ಗ: ತಾವು ಕಾಂಗ್ರೆಸ್ ತೊರೆದು ಜೆಡಿಎಸ್ಗೆ ಸೇರ್ಪಡೆಯಾಗಿರುವುದು ಮುಖ್ಯವಲ್ಲ. ಮುಂದಿನ ವಿಧಾನಸಭೆ ಚುನಾವಣೆಯನ್ನು ಹೇಗೆ ನಿಭಾಯಿಸಬಲ್ಲೆ ಎಂಬುದು ಪಕ್ಷದ ವರಿಷ್ಠ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರ ಆಸೆಯಾಗಿದೆ ಎಂದು ಮಾಜಿ ಸಚಿವ ಹೆಚ್. ವಿಶ್ವನಾಥ್ ಹೇಳಿದರು.
ಇಲ್ಲಿನ ಅಮೋಘ ಇಂಟರ್ನ್ಯಾಷನಲ್ ಹೋಟೆಲ್ನಲ್ಲಿ ಜಿಲ್ಲಾ ಜಾತ್ಯತೀತ ಜನತಾದಳದಿಂದ ಶುಕ್ರವಾರ ನಡೆದ ಜಿಲ್ಲಾ ಜೆಡಿಎಸ್ ಪದಾಧಿಕಾರಿಗಳ ಹಾಗೂ ಹಿರಿಯ ಮುಖಂಡರ ಸಭೆಯಲ್ಲಿ ಅವರು ಮಾತನಾಡಿದರು. ಜೆಡಿಎಸ್ ಸೇರ್ಪಡೆಯಾಗಿರುವ ನಾನು ಸಾಮಾನ್ಯ ಕಾರ್ಯಕರ್ತನಾಗಿ ಪಕ್ಷದ ಗೆಲುವಿಗಾಗಿ ಸೇವೆ ಮಾಡುತ್ತೇನೆ. ಕೇವಲ ಭಾಷಣ ಕೇಳಿ ಚಪ್ಪಾಳೆ ಹೊಡೆದು ಹೋಗುವ ಜನರ ಮತ ಜೆಡಿಎಸ್ ಗೆ ಪರಿವರ್ತನೆಯಾಗಬೇಕಾದರೆ ಒಳ ಸಂಘಟನೆ ಅತಿ ಮುಖ್ಯ. ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ನಾನು ಸೇರಿಕೊಂಡು ಬೇರೆ ತರದ ಕಾರ್ಯತಂತ್ರ ಮಾಡುತ್ತಿದ್ದೇವೆ ಎಂದರು.
ಬಿಜೆಪಿ, ಕಾಂಗ್ರೆಸ್ ಜನರಿಗೆ ಏನು ಬೇಕೋ ಅದನ್ನು ಕೊಡಲಿಲ್ಲ. ಬೇಡವಾದುದನ್ನು ಕೊಡುತ್ತಿವೆ. ಅದಕ್ಕಾಗಿ ರಾಜ್ಯಕ್ಕೆ ಜೆಡಿಎಸ್ ಏಕೆ ಬೇಕು. ಕುಮಾರಸ್ವಾಮಿ ಮತ್ತೂಮ್ಮೆ ರಾಜ್ಯದ ಮುಖ್ಯಮಂತ್ರಿ ಏಕೆ ಆಗಬೇಕು, ಜನರಿಗೆ ಏನು ಕೊಡಬೇಕು ಎಂದು ಜೆಡಿಎಸ್ ಎದುರಿಗೆ ಈಗ ಇರುವ ಪ್ರಶ್ನೆ. ಇವೆಲ್ಲವನ್ನು ಮನದಲ್ಲಿಟ್ಟುಕೊಂಡು ಪಕ್ಷ ಸಂಘಟನೆ ಮಾಡಬೇಕು ಎಂದು ಹೇಳಿದರು.
ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಬಾಗಿಲು ಹಾಕಿದ್ದರಿಂದ ಆ ಸಮಾಜದ ಮೇಲೆ ಆಗಿರುವ ಆಘಾತ ಬಿಜೆಪಿಗೆ ಗೊತ್ತಿಲ್ಲ. ಮಹದಾಯಿ ಯೋಜನೆ, ಕಾವೇರಿ ವಿವಾದ ಇವುಗಳಾವು ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿಗೆ ಗೊತ್ತಿಲ್ಲ ಮತ್ತು ಬೇಕಾಗಿಲ್ಲ. ದೆಹಲಿಯ ಹಿಂದಿ ದಬ್ಟಾಳಿಕೆಯಿಂದ ರಾಜ್ಯವನ್ನು
ಬಿಡಿಸಿಕೊಳ್ಳಲು ಜೆಡಿಎಸ್ ಮತ್ತೆ ಅಧಿಕಾರಕ್ಕೆ ಬರಬೇಕು ಎಂದರು. ಕಾಂಗ್ರೆಸ್, ಬಿಜೆಪಿಯಿಂದ ಬೇಸತ್ತು ಬಹಳಷ್ಟು ಮಂದಿ ಜೆಡಿಎಸ್ ಸೇರುವವರಿದ್ದಾರೆ. 2018 ರ ಚುನಾವಣೆಯಲ್ಲಿ ಅಭ್ಯರ್ಥಿಗಳನ್ನು ಹಾಕುವಾಗ ಯಾರ ಮುಲಾಜು ಇಲ್ಲದಂತೆ ದೇವೇಗೌಡರು ಹಾಗೂ ಎಚ್.ಡಿ. ಕುಮಾರಸ್ವಾಮಿರವರು ಯೋಗ್ಯ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದ್ದಾರೆ ಎಂದು ಹೇಳಿದರು.
ಸ್ತ್ರೀಶಕ್ತಿ ಸಂಘಗಳು, ಬಿಸಿಯೂಟದಲ್ಲಿ ಅಡುಗೆ ಮಾಡಲು ಮೀಸಲಾತಿ, ಎಸ್.ಡಿ.ಎಂ.ಸಿ ಇವುಗಳನ್ನೆಲ್ಲಾ ಜಾರಿಗೆ ತಂದಿದ್ದು ನಾನು. ಸಿದ್ದರಾಮಯ್ಯನವರಲ್ಲ. ರಾಜ್ಯಾದ್ಯಂತ ಪ್ರತಿ ಗ್ರಾಪಂಗೆ 3500 ಗ್ರಂಥಾಲಯಗಳನ್ನು ಕೊಟ್ಟಿದ್ದೇನೆ. ಸಂಸದನಾಗಿದ್ದಾಗ ಪಾರ್ಲಿಮೆಂಟ್ ನಲ್ಲಿ ಮಂಗಳಮುಖೀಯರ ಪರವಾಗಿ ಮಾತನಾಡಿದ್ದೇನೆ. ಜನತಂತ್ರ ವ್ಯವಸ್ಥೆಯಲ್ಲಿ ಎಲ್ಲರಿಗೂ ಸಮಾನ ಹಕ್ಕು ಸಿಗಬೇಕಾದರೆ ಜೆಡಿಎಸ್ ಪಕ್ಷ ಬೆಂಬಲಿಸಿ ಅ ಧಿಕಾರಕ್ಕೆ ತನ್ನಿ ಎಂದು ಮನವಿ ಮಾಡಿದರು.
ಮಾಜಿ ಶಾಸಕ ಎಚ್.ಡಿ. ಬಸವರಾಜ್ ಮಾತನಾಡಿ, ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಚಿತ್ರದುರ್ಗ ಜಿಲ್ಲೆಯಲ್ಲಿ ಜೆಡಿಎಸ್ ಪತಾಕೆ ಹಾರಿಸಬೇಕಾದರೆ ಎಲ್ಲರೂ ಒಗ್ಗಟ್ಟಿನಿಂದ ಶ್ರಮಿಸಿದಾಗ ಮಾತ್ರ ಸಾಧ್ಯ. ದೆಹಲಿ ಸರ್ಕಾರದ ಆಡಳಿತ ಕಿತ್ತೂಗೆಯುವಲ್ಲಿ ಸಂಕಲ್ಪ ಮಾಡಿ ಎಂದರು.
ಜೆಡಿಎಸ್ ಜಿಲ್ಲಾಧ್ಯಕ್ಷ ಡಿ.ಯಶೋಧರ ಮಾತನಾಡಿ, ಜನರ ಬದುಕು ಭಾವನೆಗಳೊಂದಿಗೆ ಚೆಲ್ಲಾಟವಾಡುತ್ತಿರುವ ಬಿಜೆಪಿ ಮತ್ತು ಕಾಂಗ್ರೆಸ್ಗೆ ಮುಂಬರುವ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಬೇಕು. ರಾಜಕೀಯ ಮೀಸಲಾತಿ ನೀಡಿದ ಜೆಡಿಎಸ್ ಪಕ್ಷದ ಕಡೆ ಜನ ನೋಡುತ್ತಿದ್ದಾರೆ. ಇದನ್ನು
ಲಾಭವನ್ನಾಗಿ ಮಾಡಿಕೊಂಡು ರಾಜ್ಯದಲ್ಲಿ ಜೆಡಿಎಸ್ ಅ ಧಿಕಾರಕ್ಕೆ ತರಬೇಕಿದೆ ಎಂದರು.
ಜೆಡಿಎಸ್ ರಾಜ್ಯ ಪ್ರತಿನಿಧಿ ನಗರಸಭೆ ಮಾಜಿ ಅಧ್ಯಕ್ಷ ಬಿ. ಕಾಂತರಾಜ್ ಮಾತನಾಡಿದರು. ಮೀನಾಕ್ಷಿ ನಂದೀಶ್, ನಗರಸಭೆ ಪ್ರಭಾರೆ ಅಧ್ಯಕ್ಷ ಕೆ. ಮಲ್ಲೇಶಪ್ಪ, ಲಲಿತಾ ಕೃಷ್ಣಮೂರ್ತಿ, ಜೆಡಿಎಸ್ ವಕ್ತಾರ ಡಿ. ಗೋಪಾಲಸ್ವಾಮಿ ನಾಯಕ, ಪ್ರತಾಪ್ ಜೋಗಿ ಇದ್ದರು. ರಾಜಣ್ಣ ಲಕ್ಷ್ಮೀಸಾಗರ
ನಿರೂಪಿಸಿದರು.