ಸೀಲ್ಡೌನ್ ಪ್ರದೇಶಕ್ಕೆ ಸೌಲಭ್ಯ ಕಲ್ಪಿಸಿ
Team Udayavani, Jul 5, 2020, 2:40 PM IST
ಮೊಳಕಾಲ್ಮೂರು: ಅಗತ್ಯ ಸೌಲಭ್ಯ ಕಲ್ಪಿಸುವಂತೆ ಮನವಿ ಮಾಡುತ್ತಿರುವ ಕಾಟನಾಯಕನಹಳ್ಳಿ ಗ್ರಾಮದ ಗ್ರಾಮಸ್ಥರು.
ಮೊಳಕಾಲ್ಮೂರು: ಎರಡು ಕೋವಿಡ್ ಪಾಸಿಟಿವ್ ಪ್ರಕರಣ ಪತ್ತೆಯಾಗಿ ಸೀಲ್ ಡೌನ್ ಆದ ಕಾಟನಾಯಕನಹಳ್ಳಿ ಗ್ರಾಮದ ಗ್ರಾಮಸ್ಥರಿಗೆ ಆರೋಗ್ಯ ತಪಾಸಣೆ ಹಾಗೂ ಅಗತ್ಯ ಸೌಲಭ್ಯವನ್ನು ಕಲ್ಪಿಸುವಲ್ಲಿ ತಾಲೂಕು ಆಡಳಿತ ಮತ್ತು ಆರೋಗ್ಯ ಇಲಾಖೆ ಸಂಪೂರ್ಣ ನಿರ್ಲಕ್ಷ್ಯ ತಾಳಿವೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಗ್ರಾಮದ ಮುಖಂಡ ಹಾಗೂ ವಕೀಲ ಶಂಕರಣ್ಣ ಮಾತನಾಡಿ, ಸೀಲ್ಡೌನ್ ಆಗಿರುವ ತಾಲೂಕಿನ ಕಾಟನಾಯಕಹಳ್ಳಿ ಗ್ರಾಮದಲ್ಲಿನ ನೂರಾರು ಗ್ರಾಮಸ್ಥರು ಕಿರಾಣಿ ಸಾಮಾನುಗಳು, ತರಕಾರಿ, ಹಾಲು ಸೇರಿದಂತೆ ಇನ್ನಿತರ ಅಗತ್ಯ ಆಹಾರ ಪದಾರ್ಥಗಳಿಲ್ಲದೆ ಪರದಾಡುವಂತಾಗಿದೆ. ಸೀಲ್ಡೌನ್ ಮಾಡಿದ ದಿನ ಆಗಮಿಸಿದ್ದ ತಹಶೀಲ್ದಾರ್, ತಾಲೂಕು ಆರೋಗ್ಯಾಧಿಕಾರಿ ಸೇರಿದಂತೆ ಅಧಿಕಾರಿಗಳು ಗ್ರಾಮಸ್ಥರಿಗೆ ಯಾವುದೇ ಅಗತ್ಯ ವಸ್ತುಗಳ ಕೊರತೆ ಬಾರದಂತೆ ನೋಡಿಕೊಳ್ಳುತ್ತೇವೆ, ತರಕಾರಿ, ಕಿರಾಣಿ ಸಾಮಾನು, ಹಾಲು ಸೇರಿದಂತೆ ಆಹಾರ ವಸ್ತುಗಳು ಮತ್ತು ಆರೋಗ್ಯ ತಪಾಸಣೆ ಸೌಲಭ್ಯ ಕಲ್ಪಿಸುವುದಾಗಿ ಭರವಸೆ ನೀಡಿದ್ದರು. ನಂತರ ನಿರ್ಲಕ್ಷ್ಯ ತಾಳಿದ್ದಾರೆ. ಅವರು ನೀಡುವ ಅಗತ್ಯ ವಸ್ತುಗಳಿಗೆ ಸೂಕ್ತ ದರ ನೀಡಿ ಪಡೆಯುತ್ತೇವೆ ಎಂದರು.