ಶಿವಕುಮಾರ ಶ್ರೀಗಳ ಆದರ್ಶ ಪಾಲಿಸಿ
Team Udayavani, Jan 23, 2019, 9:14 AM IST
ಚಳ್ಳಕೆರೆ: ಬಸವ ತತ್ವದ ಮೂಲಕ ನಾಡಿನ ಜನರ ಸೇವೆ ಮತ್ತು ಧಾರ್ಮಿಕ ಜಾಗೃತಿ ಮೂಡಿಸಿದ ತುಮಕೂರು ಸಿದ್ಧಗಂಗಾ ಮಠದ ಪೀಠಾಧಿಪತಿ ಡಾ| ಶ್ರೀ ಶಿವಕುಮಾರ ಸ್ವಾಮೀಜಿಗಳು ಲಿಂಗೈಕ್ಯರಾಗಿರುವುದು ರಾಜ್ಯ ಮತ್ತು ರಾಷ್ಟ್ರಕ್ಕೆ ತುಂಬಲಾರದ ನಷ್ಟ ಎಂದು ತಾಲೂಕು ವೀರಶೈವ ಸಮಾಜದ ಅಧ್ಯಕ್ಷ, ವಾಣಿಜ್ಯೋದ್ಯಮಿ ಎಚ್. ಗಂಗಣ್ಣ ಹೇಳಿದರು.
ಇಲ್ಲಿನ ವೀರಶೈವ ಕಲ್ಯಾಣ ಮಂಟಪದಲ್ಲಿ ತಾಲೂಕಿನ ವೀರಶೈವ ಸಮಾಜದ ಸಂಘಟನೆಗಳ ಸಹಯೋಗದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಶ್ರೀಗಳ ಶ್ರದ್ಧಾಂಜಲಿ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಪೂಜ್ಯ ಸ್ವಾಮೀಜಿಗಳು ಸಿದ್ಧಗಂಗಾ ಮಠದಲ್ಲಿ ಪ್ರತಿನಿತ್ಯ ಸುಮಾರು 11 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಅಕ್ಷರ ಮತ್ತು ಅನ್ನ ದಾಸೋಹದ ಕಾಯಕ ಮಾಡಿದರು. ನಾವೆಲ್ಲರೂ ಮಹಾನ್ ಶ್ರೇಷ್ಠ ಸ್ವಾಮೀಜಿಯವರ ಆದರ್ಶಗಳನ್ನು ಮೈ ಗೂಡಿಸಿಕೊಳ್ಳಬೇಕು ಎಂದರು.
ತಾಲೂಕು ವೀರಶೈವ ಹಾಸ್ಟಲ್ ಅಧ್ಯಕ್ಷ ಡಾ| ಕೆ.ಎಂ. ಜಯಕುಮಾರ್ ಮಾತನಾಡಿ, ಇಂದು ನಾಡಿನೆಲ್ಲೆಡೆ ಕತ್ತಲು ಆವರಿಸಿದ ಎಂಬ ಭಾವನೆ ಉಂಟಾಗಿದೆ. ನಡೆದಾಡುವ ದೇವರು ಇಡೀ ಸಮಾಜಕ್ಕೆ ಜ್ಞಾನದ ಶಕ್ತಿಯಾಗಿದ್ದರು. ಇಂತಹ ಶ್ರೇಷ್ಠ ದಾರ್ಶನಿಕ ಮತ್ತೂಮ್ಮೆ ಈ ನಾಡಿನಲ್ಲಿ ಜನ್ಮತಾಳುವುದು ಕಷ್ಟ ಎಂದು ಹೇಳಿದರು.
ತಾಲೂಕು ವೀರಶೈವ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಕೆ.ಎಂ. ಜಗದೀಶ್ ಮಾತನಾಡಿ, ಜನಸಾಮಾನ್ಯರ ಅಸಾಮಾನ್ಯ ಶಕ್ತಿಯಾಗಿ ಶ್ರೀಗಳು ತಮ್ಮ ಸಾರ್ಥಕ ಬದುಕನ್ನು ನಡೆಸಿದ್ದಾರೆ. ವಿಶೇಷವಾಗಿ 12ನೇ ಶತಮಾನದ ಜಗಜ್ಯೋತಿ ಬಸವಣ್ಣನವರ ಧಾರ್ಮಿಕ ವಿಚಾರಗಳನ್ನು ನಾಡಿನ ಎಲ್ಲರಿಗೂ ಧಾರೆ ಎರೆದ ಕೀರ್ತಿ ಅವರದ್ದು ಎಂದರು.
ವೀರಶೈವ ಮಹಿಳಾ ವೇದಿಕೆ ಕಾರ್ಯದರ್ಶಿ ಮಂಜುಳಾ ನಾಗರಾಜು ಮಾತನಾಡಿ, ರಾಷ್ಟ್ರ ಕಂಡ ಅಪರೂಪದ ದಿವ್ಯ ಜ್ಞಾನದ ಶಕ್ತಿಯಾಗಿದ್ದ ಪರಮಪೂಜ್ಯರು ಮಕ್ಕಳಲ್ಲಿ ದೇವರನ್ನು ಕಂಡ ಪುಣ್ಯಪುರುಷರು. ಯಾವುದೇ ಪ್ರತಿಫಲಾಷೇಕ್ಷೆ ನಿರೀಕ್ಷಿಸದೆ ನಿರಂತರವಾಗಿ ಸೇವೆಯಲ್ಲೇ ದೈವತ್ವ ಕಂಡ ಮಹಾಪುರುಷರು. ಶ್ರೀಮಠಕ್ಕೆ ಆಗಮಿಸುವ ಎಲ್ಲ ಭಕ್ತರಿಗೂ ದಾಸೋಹದ ಜತೆಯಲ್ಲಿ ಜ್ಞಾನದ ದೀಕ್ಷೆ ನೀಡಿದ ಕೀರ್ತಿ ಅವರದ್ದು ಎಂದು ಹೇಳಿದರು.
ಹಿರಿಯ ವಾಣಿಜ್ಯೋದ್ಯಮಿ ಬಿ.ಕೆ. ರಾಜಶೇಖರಪ್ಪ, ಮಹಿಳಾ ಘಟಕದ ಅಧ್ಯಕ್ಷೆ ಪದ್ಮಾ ನಾಗರಾಜು, ಎಸ್. ರಾಜಶೇರಪ್ಪ, ಉಪಾಧ್ಯಕ್ಷ ಕೆ.ಎಂ. ಜಗದೀಶ್, ದಲ್ಲಾಳರ ಸಂಘದ ಅಧ್ಯಕ್ಷ ಕೆ.ಎಂ.ಅರವಿಂದ್, ಉಪಾಧ್ಯಕ್ಷ ಡಿ.ಎಂ. ತಿಪ್ಪೇಸ್ವಾಮಿ, ವೃಷಬೇಂದ್ರಪ್ಪ, ಎಚ್. ಮಂಜುನಾಥ, ಹೊಟ್ಟೆಪ್ಪನಹಳ್ಳಿ ಪ್ರಸನ್ನಕುಮಾರ್, ಕೆ.ವಿ.ಪ್ರಕಾಶ್, ಎನ್.ವಿ. ತಿಪ್ಪೇಸ್ವಾಮಿ, ಜಯಪ್ರಕಾಶ್, ವಂದನಾರಾಜು, ಈಶ್ವರಪ್ಪ ಮುಂತಾದವರು ಭಾಗವಹಿಸಿದ್ದರು. ಶಿಕ್ಷಕ ಎಚ್.ಮಂಜುನಾಥ ಸ್ವಾಗತಿಸಿದರು. ದೈಹಿಕ ಶಿಕ್ಷಕ ಎಸ್.ರೇವಣ್ಣ ವಂದಿಸಿದರು.