ಸಂಸ್ಕಾರ ಅಳವಡಿಸಿಕೊಳ್ಳಿ: ಜಯಂತ
Team Udayavani, Nov 24, 2017, 2:36 PM IST
ಪುತ್ತೂರು: ಸಂಸ್ಕಾರ ಎಂದು ಬಾಯಲ್ಲಿ ಹೇಳಿದರೆ ಸಾಲದು, ಅದನ್ನು ಧಾರ್ಮಿಕ ನೆಲೆಗಟ್ಟಿನಲ್ಲಿ ಅಳವಡಿಸಿಕೊಳ್ಳಬೇಕಾದ್ದು ಮುಖ್ಯ ಎಂದು ರೋಟರಿ ಕ್ಲಬ್ ಪುತ್ತೂರು ಪೂರ್ವ ಅಧ್ಯಕ್ಷ ಜಯಂತ ನಡುಬೈಲು ಹೇಳಿದರು.
ಗುರುವಾರ ಕೆಮ್ಮಿಂಜೆ ಶ್ರೀ ಷಣ್ಮುಖ ಸುಬ್ರಹ್ಮಣ್ಯ-ಶ್ರೀ ಮಹಾವಿಷ್ಣು ದೇವಸ್ಥಾನದಲ್ಲಿ ಷಷ್ಠಿ ಮಹೋತ್ಸವದ ಅಂಗವಾಗಿ ಏರ್ಪಡಿಸಿದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ನೂತನ ಸಭಾ ವೇದಿಕೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಮಾಜ ಸೇವೆಯಲ್ಲಿ ದೇವರನ್ನು ಕಾಣುವ ಮೂಲಕ ದೇವಸ್ಥಾನಗಳ ಅಭಿವೃದ್ಧಿಯಲ್ಲಿ ತೊಡಗಿಸಿಕೊಳ್ಳಬೇಕು. ಜಗತ್ತಿನಲ್ಲಿ ಮನುಷ್ಯನದ್ದು ಏನೂ ಇಲ್ಲ. ದೈವ-ದೇವರುಗಳಲ್ಲಿ ನಾವು ಇಡುವ ಭಕ್ತಿಯ ಮೂಲಕ ದೇವರು ಕೊಡುಗೆ ನೀಡುವ ಶಕ್ತಿಯನ್ನು ನೀಡಿದ್ದಾನೆ. ಇದನ್ನು ಕ್ಷೇತ್ರದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಕೇಶವ ಪೂಜಾರಿ ಬಲ್ನಾಡು ಅವರು ಮಾಡುವ ಮೂಲಕ ಅಲ್ಪ ಸಮಯದಲ್ಲೇ ಕ್ಷೇತ್ರದ ಅಭಿವೃದ್ಧಿಯನ್ನು ಮಾಡಿದ್ದಾರೆ ಎಂದು ಹೇಳಿದರು.
ಇನ್ನೋರ್ವ ಮುಖ್ಯ ಅತಿಥಿ ಕಾವು ಹೇಮನಾಥ ಶೆಟ್ಟಿ ಮಾತನಾಡಿ, ಕ್ಷೇತ್ರದ ಅಭಿವೃದ್ಧಿಗೆ ದೇವಸ್ಥಾನದ ಸಮಿತಿ ಪ್ರಾಮಾಣಿಕ ಪ್ರಯತ್ನ ಮಾಡಿದೆ. ದೇವರ ಮಹಿಮೆ ಇದ್ದಲ್ಲಿ ಮನುಷ್ಯನ ಪ್ರಯತ್ನ ಇದೆ ಎಂಬುದಕ್ಕೆ ಇಲ್ಲಿ ನಡೆದಿರುವ ಅಭಿವೃದ್ಧಿ ಸಾಕ್ಷಿ ಎಂದು ಹೇಳಿದರು.
ಹಾಸುಕಲ್ಲು ಮೇಲ್ಛಾವಣಿ ಉದ್ಘಾಟನೆ
ಹಾಸುಕಲ್ಲು ಹಾಗೂ ಮೇಲ್ಛಾವಣಿಯನ್ನು ರಾಜ್ಯ ಧಾರ್ಮಿಕ ಪರಿಷತ್ ಸದಸ್ಯ ಜಗನ್ನಿವಾಸ ರಾವ್ ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ನಗರಸಭಾ ಅಧ್ಯಕ್ಷೆ ಜಯಂತಿ ಬಲ್ನಾಡು, ಸದಸ್ಯ ಬಾಲಚಂದ್ರ, ಉದ್ಯಮ ನಾಗೇಶ ರಾವ್ ಅತ್ತಾಳ, ಕ್ಯಾಂಪ್ಕೋ ಸಂಸ್ಥೆಯ ಎಜಿಎಂ ಕರುಣಾಕರ ಶೆಟ್ಟಿಗಾರ್ ಪಾಲ್ಗೊಂಡು ಶುಭ ಹಾರೈಸಿದರು.
ಸಹಾಯಕ ಅಚಕ ಸುಬ್ರಾಯ ಅಂಗಿತ್ತಾಯ, ವಿವಿಧ ಸೇವೆ ಸಲ್ಲಿಸಿದ ಮೋನಪ್ಪ ಗೌಡ, ಚಂದ್ರಶೇಖರ ಗೌಡ, ಕೇಶವ ಪೈ ಅವರನ್ನು, ಕ್ಷೇತ್ರದ ಅಭಿವೃದ್ಧಿಗೆ ಧನ ಸಹಾಯ ನೀಡಿದವರನ್ನು ಗೌರವಿಸಲಾಯಿತು. ಅಧ್ಯಕ್ಷತೆ ವಹಿಸಿದ್ದ ದೇಗುಲದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಕೇಶವ ಪೂಜಾರಿ ಬೆದ್ರಾಳ ಸ್ವಾಗತಿಸಿದರು. ಶಶಿಧರ ಕಿನ್ನಿಮಜಲು ವಂದಿಸಿದರು. ಸಮಿತಿ ಸದಸ್ಯರಾದ ಪ್ರಧಾನ ಅರ್ಚಕ ಕೆ. ವೆಂಕಟೇಶ, ಉದಯ ಕುಮಾರ ಕೆ.ಕೆ., ನಾರಾಯಣ ನಾಯ್ಕ, ಪಿ. ಚಂದ್ರಪ್ರಭಾ ಸತೀಶ್, ಆಶಾಲತಾ, ಮಹೇಶ್ ಬಿ., ಸೂರಪ್ಪ ಗೌಡ ಬಿ., ಬಾಲಕೃಷ್ಣ ಪೂಜಾರಿ ಕೋಲಾಡಿ ಅತಿಥಿಗಳನ್ನು ಗೌರವಿಸಿದರು.
ದೇವರ ನಾಡು
ಮುಖ್ಯ ಅತಿಥಿ ಕ್ಯಾಂಪ್ಕೋ ಮಾಜಿ ನಿರ್ದೇಶಕ ಸಂಜೀವ ಮಠಂದೂರು ಮಾತನಾಡಿ, ನಾಗಾರಾಧನೆ, ಭೂತಾರಾಧನೆ, ಗುರುವಿನ ಆರಾಧನೆ ಮೂಲಕ ದಕ್ಷಿಣ ಕನ್ನಡ ದೇವರ ನಾಡು ಎಂದೆನಿದೆ. ಇದಕ್ಕೆ ಈ ಜಿಲ್ಲೆಯ ಜನರು ಇಟ್ಟ ನಂಬಿಕೆ, ಭಕ್ತಿಯಿಂದ ಆರಾಧನೆಯಲ್ಲಿ ಪರಂಪರೆ ಬೆಳೆಸಿರುವುದೇ ಕಾರಣ. ಮುಂದೆ ಈ ಕ್ಷೇತ್ರ ಇನ್ನಷ್ಟು ಅಭಿವೃದ್ಧಿ ಕಾಣಲಿ ಎಂದರು.