ಆಳ್ವಾಸ್:’ನಿಂಗೋಲ್ ಚಕೋಬ’ ಮಣಿಪುರಿ ಹಬ್ಬ
Team Udayavani, Oct 25, 2017, 1:03 PM IST
ಮೂಡಬಿದಿರೆ: ಮಣಿಪುರ ರಾಜ್ಯದ ಸಂಸ್ಕೃತಿ, ಸಂಪ್ರದಾಯವನ್ನು ಕನ್ನಡಿಗರಿಗೆ ಪರಿಚಯಿಸುವ ನಿಟ್ಟಿನಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನವು ಮಿಜಾರಿನ ಎಐಇಟಿ ಕ್ಯಾಂಪಸ್ನಲ್ಲಿ ಮಣಿಪುರಿ ಹಬ್ಬ ‘ನಿಂಗೋಲ್ ಚಕೋಬ’ ಆಯೋಜಿಸಲಾಗಿತ್ತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಮಣಿಪಾಲ ಕಾಲೇಜಿನ ನರ್ಸಿಂಗ್ ವಿಭಾಗದ ಮುಖ್ಯಸ್ಥೆ ಎಲ್ಸಾ ಸನಾತೊಂಬ ದೇವಿ ಅವರು, ‘ಮಣಿಪುರದಿಂದ ಹೊರಗೆ ಓದುವ ವಿದ್ಯಾರ್ಥಿಗಳ ಬಗ್ಗೆ ಮಣಿಪುರದಲ್ಲಿರುವವರಿಗೆ ಒಂದು ರೀತಿಯ ನಕಾರಾತ್ಮಕ ನಿಲುವಿದೆ. ಇತರ ರಾಜ್ಯಗಳಲ್ಲಿ ಓದುತ್ತಿರುವ ಮಣಿಪುರಿ ಮಕ್ಕಳು ತಮ್ಮ ಸಂಸ್ಕೃತಿಯನ್ನು ಅರಿಯಲಾರರು ಎಂಬುದು ಈ ನಿಲುವಿನ ಹಿಂದಿರುವ ಕಲ್ಪನೆ. ಆದರೆ ಆಳ್ವಾಸ್ನಲ್ಲಿ ಆಯೋಜಿಸಿರುವ ಮಣಿಪುರಿ ಹಬ್ಬ ನಮ್ಮ ಮಣಿಪುರಿ ಸಂಸ್ಕೃತಿಯನ್ನು ಚಿತ್ರಿಸಿ ಕೊಡುವುದಲ್ಲದೆ ಅವರ ಬಗ್ಗೆ ಇರುವ ಪೂರ್ವಾಗ್ರಹ ಪೀಡಿತ ತಪ್ಪು ಕಲ್ಪನೆಗಳನ್ನು ಹೋಗಲಾಡಿಸುತ್ತದೆ’ ಎಂದರು.
ಮಣಿಪುರ ಶಿಕ್ಷಣ ಸಚಿವ ಥೋಕೋಮ್ ರಾಧೆಶಾಮ್ ಸಿಂಗ್ ವೀಡಿಯೋ ತುಣುಕು ಕಳುಹಿಸುವ ಮೂಲಕ ಹಬ್ಬದ ಆಚರಣೆಯನ್ನು ಬೆಂಬಲಿಸಿದರು.
ಅಧ್ಯಕ್ಷತೆ ವಹಿಸಿದ್ದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ವಿವೇಕ್ ಆಳ್ವ ಮಾತನಾಡಿ, ‘ಸಂಸ್ಕೃತಿ ವಿನಿಮಯ ಎರಡೂ ಕಡೆಯಿಂದ ಸಾಧ್ಯವಾಗಬೇಕು. ಇಂಥ ವಿನಿಮಯ ವಿಭಿನ್ನ ಸಂಸ್ಕೃತಿಯ ಜನರ ನಡುವೆ ಉತ್ತಮ ಬಾಂಧವ್ಯ ಬೆಸೆಯುತ್ತದೆ. ಈ ನಿಟ್ಟಿನಲ್ಲಿ ವಿಭಿನ್ನ ಪ್ರದೇಶಗಳ ಹಬ್ಬಗಳು, ಸಂಸ್ಕೃತಿಯ ಆಚರಣೆ ಹೆಚ್ಚು ಸೂಕ್ತವಾದವು’ ಎಂದರು. ಆರೆಸ್ಸೆಸ್ ಪೂರ್ವಾಂಚಲ ಸಂಘಟಕರಾದ ಪಪ್ಪುರಾಜ್, ನಿಟ್ಟೆ ವಿ.ವಿ. ಸಂಶೋಧನ ವಿಭಾಗದ ಅನಿರ್ಬನ್ ಚಕ್ರವರ್ತಿ ಹಾಗೂ ಗುನಿಮಾಲ ಚಕ್ರವರ್ತಿ ಉಪಸ್ಥಿತರಿದ್ದರು. ಮಣಿಪುರಿ ವಿದ್ಯಾರ್ಥಿಗಳು ನಾಟಕ, ನೃತ್ಯ, ಸಂಗೀತ, ಸಾಹಸ ಪ್ರದರ್ಶನ ನಡೆಯಿತು. ವಿಶೇಷ ಆಕರ್ಷಣೆಯಾಗಿ ಮಣಿಪುರದ ಖಾದ್ಯಗಳಾದ ಛಿಂಜೊ ಉತಿ, ಎರೊಂಬಾ, ಕೊಂಗ್ಹೌ, ಹಿಯೊಂಥೊವಾ ಮೊಯ್ ರಾಂಗು ಒಳಗೊಂಡ ಅದ್ದೂರಿ ಭೋಜನ ಏರ್ಪಡಿಸಲಾಗಿತ್ತು.