ಇಲ್ಲಿ ಮಕ್ಕಳು ಕೊಠಡಿಯೊಳಗೆ ಕೊಡೆ ಹಿಡಿದೇ ಕೂರಬೇಕು!
Team Udayavani, Jul 29, 2017, 11:25 PM IST
ಕೆಯ್ಯೂರು: ಒಂದೆಡೆ ಸರಕಾರ ಹೈಟೆಕ್ ಅಂಗನವಾಡಿ ಕನಸು ಬಿತ್ತಿದೆ. ಆದರೆ ತಾಲೂಕಿನ ಕೆಯ್ಯೂರು ಗ್ರಾಮದ ಪಂಜಿಗುಡ್ಡೆ ಅಂಗನವಾಡಿ ಸ್ಥಿತಿ ಹೇಗಿದೆ ಅಂದರೆ, ಕೊಡೆ ಹಿಡಿದೇ ಕೊಠಡಿಯೊಳಗೆ ಮಕ್ಕಳು ಕುಳಿತುಕೊಳ್ಳಬೇಕು! ಛಾವಣಿಗೆ ಸಿಮೇಂಟ್ ಶೀಟು, ತೆರದ ಗೋಡೆಗೆ ಅಡಿಕೆ ಮರದ ಸಲಾಕೆ, ಸಣ್ಣ ಮಳೆಗೂ ಕೆರೆಯಾಗುವ ಕೊಠಡಿ, ಮಳೆ ಬಂದರೆ ಮೂಲೆಯಲ್ಲಿ ಮುದುಡಿಕೊಳ್ಳುವ ಮಕ್ಕಳು, ಇಂತಹ ಗುಡಿಸಲು ರೂಪದ ಅಂಗನವಾಡಿಯಲ್ಲಿ ಹೆತ್ತವರಿಗೆ ಮಕ್ಕಳ ಸುರಕ್ಷತೆಯ ಭೀತಿ ಎದುರಾಗಿದೆ.
ಪಂಜಿಗುಡ್ಡೆ ಅಂಗನವಾಡಿ
2009ರಲ್ಲಿ ಪಂಜಿಗುಡ್ಡೆಯಲ್ಲಿ ಅಂಗನವಾಡಿ ಸ್ಥಾಪಿಸಲಾಗಿತ್ತು. ಎಂಟು ವರ್ಷಗಳ ಹಿಂದೆ ತಾತ್ಕಾಲಿಕವಾಗಿ ನಿರ್ಮಿಸಿದ ಕೊಠಡಿಯೊಳಗೆ ಮಕ್ಕಳು ಕುಳಿತುಕೊಳ್ಳುತ್ತಾರೆ. 16 ಮಕ್ಕಳಿದ್ದ ಇಲ್ಲಿ ಈಗ ಸಂಖ್ಯೆ 9ಕ್ಕೆ ಇಳಿದಿದೆ. ಅದರಲ್ಲೂ ದಿನಾಲು ಬರುವವರು 6 ಮಂದಿ ಮಾತ್ರ. ಇಲ್ಲಿನ ದುಃಸ್ಥಿತಿ ಕಂಡು ಮಕ್ಕಳನ್ನು ಕಳುಹಿಸಲು ಹೆತ್ತವರಿಗೂ ಆತಂಕ.
ಕನಿಷ್ಠ ಸೌಕರ್ಯವೂ ಇಲ್ಲ
ಕಟ್ಟಡದಲ್ಲಿ ಕನಿಷ್ಠ ಮೂಲ ಸೌಕರ್ಯ ಇಲ್ಲ. ಕೆಂಪು ಕಲ್ಲಿನಿಂದ ಕಟ್ಟಿದ ಕಟ್ಟಡದ ಗೋಡೆ ಪೂರ್ಣ ಪ್ರಮಾಣಗೊಂಡಿಲ್ಲ. ತೆರೆದ ಭಾಗದಲ್ಲಿ ಅಡಿಕೆ ಮರದ ಸಲಾಕೆ ಗಳನ್ನು ಜೋಡಿಸಲಾಗಿದೆ. ಅದರಲ್ಲಿ ಕೆಲವು ಎದ್ದಿವೆ. ಮಳೆಯೊಂದಿಗೆ ಗಾಳಿಯ ಬೀಸಿದರೆ, ಮಳೆ ನೀರು ಸಲಾಕೆಯ ಎಡೆಯಿಂದ ಕೊಠಡಿಯೊಳಗೆ ಬರುತ್ತದೆ. ಸುತ್ತಲು ಪೊದೆ ತುಂಬಿದ ಕಾರಣ, ಅದಕ್ಕಾಗಿ ಪರದೆ ಆಗಲಿ, ಸುರಕ್ಷತಾ ಕ್ರಮವಾಗಿ ಒದಗಿಸಿಲ್ಲ.
ಅಡುಗೆ ಕೊಠಡಿಯ ದುಃಸ್ಥಿತಿ
ಮಕ್ಕಳಿಗೆ ಸಿಗಬೇಕಾದ ಎಲ್ಲ ಪೌಷ್ಟಿಕ ಆಹಾರಗಳನ್ನು ನೀಡಲಾಗುತ್ತಿದೆ. ಆಹಾರ ತಯಾರಿ ಕೊಠಡಿ ಗೂಡಿನಂತಿದ್ದು, ದುಃಸ್ಥಿತಿಯಲ್ಲಿದೆ. ಮಕ್ಕಳು ನೀರಿನ ಪಸೆ ತುಂಬಿರುವ ನೆಲದಲ್ಲಿಯೇ ದಿನವಿಡಿ ಕಾಲ ಕಳೆಯಬೇಕಿದೆ. ಆಟೋಟ ಸಾಮಗ್ರಿಗಳಿದ್ದರೂ ಆಟವಾಡಲು ಕೊಠಡಿಯೊಳಗೆ ಜಾಗವೇ ಇಲ್ಲ. ವಿದ್ಯುತ್ ಸಂಪರ್ಕ ಕಲ್ಪಿಸಿಲ್ಲ. ದಾನಿಯೊಬ್ಬರು ನೀಡಿದ ಸೋಲಾರ್ ದೀಪ ಅಳವಿಡಿಸಲಾಗಿದ್ದು ಬಿಟ್ಟರೆ ಉಳಿದಂತೆ ಕತ್ತಲೇ ಇಲ್ಲಿನ ಲೋಕವಾಗಿದೆ.
ಪಹಣಿಪತ್ರ ಸಿಕ್ಕಿದೆ
ನಾಲ್ಕು ತಿಂಗಳುಗಳ ಹಿಂದೆ ಅಂಗನವಾಡಿಗೆ 3 ಸೆಂಟ್ಸ್ ಜಾಗದ ಪಹಣಿ ಪತ್ರ ಸಿಕ್ಕಿದೆ. ಸಮಸ್ಯೆಯ ಬಗ್ಗೆ ಪ್ರತಿ ಗ್ರಾಮಸಭೆಗಳಲ್ಲಿ ಆ ಭಾಗದ ಜನರು ಮನವಿ ಸಲ್ಲಿಸುತ್ತಾರೆ. ಆದರೆ ಪ್ರಯೋಜನ ಕಂಡಿಲ್ಲ. ತಾಲೂಕಿಗೆ ಕೋಟಿ – ಕೋಟಿ ಅನುದಾನದ ಬಿಡುಗಡೆ ಆಗಿರುವ ಲೆಕ್ಕ ಕೊಡುವ ಜನಪ್ರತಿನಿಧಿಗಳಿಗೆ ಈ ಪಂಜಿಗುಡ್ಡೆ ಅಂಗನವಾಡಿಗೆ ಕಟ್ಟಡ ನಿರ್ಮಾಣಕ್ಕೆ ಅನುದಾನ ಸಿಗದಿರುವುದು ಅಚ್ಚರಿಯ ಸಂಗತಿ ಅನ್ನುತ್ತಾರೆ ಶಿಕ್ಷಣಾಭಿಮಾನಿಗಳು. ಇಲ್ಲಿನ ಅಂಗನವಾಡಿ ಕಾರ್ಯಕರ್ತೆ, ಸಹಾಯಕಿ ಹುದ್ದೆಗಳು ಭರ್ತಿ ಆಗಿವೆ. ಇರುವ ವ್ಯವಸ್ಥೆಯಲ್ಲೂ ಮಕ್ಕಳನ್ನು ಚಟುವಟಿಕೆಯಿಂದ ತೊಡಗಿಸಿಕೊಳ್ಳಲು ಪ್ರಯತ್ನ ಮಾಡಿದ್ದರೂ ಇಲ್ಲಿನ ಮೂಲ ಸೌಕರ್ಯದ ಕೊರತೆ ಅದಕ್ಕೆ ಅಡ್ಡಿಯಾಗಿದೆ.
2000 ರೂ. ಮಾತ್ರ ಸಿಕ್ಕಿದೆ!
ಈ ಅಂಗನವಾಡಿಗೆ ಅನುದಾನ ರೂಪದಲ್ಲಿ ಪಂಚಾಯತ್ ವತಿಯಿಂದ 2 ಸಾವಿರ ರೂ. ಮಾತ್ರ ಸಿಕ್ಕಿದೆ. ಅದು ಬಿಟ್ಟರೆ ದುರಸ್ತಿಗಾಗಲೀ, ಹೊಸ ಕಟ್ಟಡ ನಿರ್ಮಾಣಕ್ಕಾಗಲಿ ನಯಾಪೈಸೆ ಅನುದಾನ ಬಿಡುಗಡೆಯಾಗಿಲ್ಲ. ಹಾಗಾಗಿ ಮಕ್ಕಳನ್ನು ಇಲ್ಲಿಗೆ ಕಳುಹಿಸಲು ಹೆತ್ತವರು ಹಿಂದೇಟು ಹಾಕುತ್ತಿದ್ದಾರೆ. ಇದರಿಂದ ಸರಕಾರವೇ ಅಂಗನವಾಡಿಯನ್ನು ಮುಚ್ಚುವಂತೆ ಪ್ರೇರಪಿಸುವಂತಾಗಿದೆ.
– ಗೋಪಾಲಕೃಷ್ಣ ಸಂತೋಷ್ನಗರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್
Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು
Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ
Father; ಚಂದ್ರು ನಿರ್ಮಾಣದ ‘ಫಾದರ್’ ಚಿತ್ರಕ್ಕೆ ಮುಹೂರ್ತ
Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ