ಅಪರಾಧರಹಿತ ಸಮಾಜ ನಿರ್ಮಾಣದಲ್ಲಿ ಸಹಕರಿಸಿ: ರಾಮ ನಾಯ್ಕ
Team Udayavani, Mar 15, 2017, 12:31 PM IST
ಬೆಳ್ತಂಗಡಿ: ವಿದ್ಯಾರ್ಥಿ ದೆಸೆಯಲ್ಲಿ ಕೆಲವು ಕಾನೂನಿನ ಅರಿವನ್ನು ಪಡೆದು, ಅಪರಾಧ – ಅಪಘಾತ ರಹಿತ ಸಮಾಜ ನಿರ್ಮಾಣದಲ್ಲಿ ಸಹಕರಿಸಿ ಎಂದು ಧರ್ಮಸ್ಥಳ ಪೊಲೀಸ್ ಠಾಣಾ ಉಪ ನಿರೀಕ್ಷಕ ರಾಮ ನಾಯ್ಕ ಹೇಳಿದರು.
ಧರ್ಮಸ್ಥಳದ ಶ್ರೀ ಮಂಜುನಾಥೇಶ್ವರ ಅನುದಾನಿತ ಪ್ರೌಢಶಾಲೆಯಲ್ಲಿ ಜರಗಿದ ಸುರಕ್ಷತೆ ಹಾಗೂ ಕಾನೂನು ಮಾಹಿತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.ವಿದ್ಯಾರ್ಥಿ ಜೀವನದಲ್ಲಿ ಮೊಬೈಲ್, ವಾಹನ, ಟಿ.ವಿಯ ಬಳಕೆಯ ಬಗ್ಗೆ ಜಾಗರೂಕರಾಗಿ ಇರುವಂತೆ ಎಚ್ಚರಿಕೆ ನೀಡಿದರು. ಮಾದಕದ್ರವ್ಯ ಅಪಾಯದ ಬಗ್ಗೆ ಮಾಹಿತಿ ನೀಡಿದರು. ಅಪಘಾತ ಸಂಭವಿಸಿದಾಗ ವಿದ್ಯಾರ್ಥಿಗಳು ಏನು ಮಾಡಬಹುದು ಎಂಬ ಬಗ್ಗೆ ತಿಳಿಸಿದ ಅವರು ಪೊಲೀಸ್ ಇಲಾಖೆಯ ರೂಪುರೇಷೆ – ಕಾರ್ಯವೈಖರಿಯ ಬಗ್ಗೆ ಮಾಹಿತಿ ನೀಡಿದರು.
ಠಾಣಾಧಿಕಾರಿ ರವೀಂದ್ರ ಹಾಗೂ ಶಾಲಾ ಮುಖ್ಯೋಪಾಧ್ಯಾಯ ಜನಾರ್ದನ ಬಿ. ಭಾಗವಹಿಸಿದ್ದರು. ಶಿಕ್ಷಕರಾದ ಮುಕುಂದಚಂದ್ರ ವಂದಿಸಿ, ಧನ್ಯ ಕುಮಾರ್ ಕಾರ್ಯಕ್ರಮ ನಿರ್ವಹಿಸಿದರು.