ಆರ್ಚ್ ಬಿಷಪ್ ಬರ್ನಾರ್ಡ್ ಮೊರಾಸ್ ಗುರು ದೀಕ್ಷೆ
Team Udayavani, Dec 11, 2017, 10:16 AM IST
ಮಹಾನಗರ: ಕರ್ನಾಟಕ ಕೆಥೋಲಿಕ್ ಕ್ರೈಸ್ತ ಮಹಾ ಧರ್ಮಪ್ರಾಂತದ ಮಹಾ ಧರ್ಮಾಧ್ಯಕ್ಷ ಬೆಂಗಳೂರಿನ ಆರ್ಚ್ ಬಿಷಪ್ ರೆ| ಡಾ| ಬರ್ನಾರ್ಡ್ ಮೊರಾಸ್ ಅವರ ಗುರು ದೀಕ್ಷೆಯ ಸುವರ್ಣ ಮಹೋತ್ಸವ ಮತ್ತು ಹುಟ್ಟೂರ ಸಮ್ಮಾನ ಸಮಾರಂಭ ರವಿವಾರ ಕುಪ್ಪೆಪದವಿನಲ್ಲಿ ವಿವಿಧ ಧರ್ಮಪ್ರಾಂತಗಳ ಧರ್ಮಾಧ್ಯಕ್ಷರು ಮತ್ತು ಧರ್ಮಗುರುಗಳ ಉಪಸ್ಥಿತಿಯಲ್ಲಿ ನೆರವೇರಿತು.
ದಿ ಇಮ್ಯಾಕ್ಯುಲೆಟ್ ಹಾರ್ಟ್ ಆಫ್ ಮೇರಿ ಚರ್ಚ್ನಲ್ಲಿ ಕೃತಜ್ಞತಾರ್ಪಣೆಯ ಬಲಿ ಪೂಜೆ ಹಾಗೂ ಬಳಿಕ ಮೊರಾಸ್ ಕುಟುಂಬದ ಹಿರಿಯರ ಮನೆ ಆವರಣದಲ್ಲಿ ಸಾರ್ವಜನಿಕ ಅಭಿನಂದನ ಸಮಾರಂಭ ಜರಗಿತು.
ಬಲಿ ಪೂಜೆಯಲ್ಲಿ ರೆ| ಡಾ| ಬರ್ನಾರ್ಡ್ ಮೊರಾಸ್ ಅವರ ಜತೆಗೆ ಬಿಷಪರಾದ ರೆ| ಡಾ| ಅಲೋಶಿಯಸ್ ಪಾವ್ಲ್ ಡಿ’ಸೋಜಾ (ಮಂಗಳೂರು), ರೆ| ಡಾ| ಜೆರಾಲ್ಡ್ ಐಸಾಕ್ ಲೋಬೋ (ಉಡುಪಿ), ರೆ| ಡಾ| ಹೆನ್ರಿ ಡಿ’ಸೋಜಾ (ಬಳ್ಳಾರಿ), ಮಾರ್ ದಿವಾನಿಯೋಸ್ ಮಕಾರಿಯೋಸ್ (ಪುತ್ತೂರು) ಅವರು ಹಾಗೂ ಮಂಗಳೂರು ಧರ್ಮ ಪ್ರಾಂತದ ಪ್ರಧಾನ ಗುರು ಮೊ| ಡೆನಿಸ್ ಮೊರಾಸ್ ಪ್ರಭು, ಬೆಂಗಳೂರು ಮಹಾ ಧರ್ಮ ಪ್ರಾಂತದ ಪ್ರಧಾನ ಗುರುಗಳಾದ ಮೊ| ಜಯನಾಥನ್ ಮತ್ತು ಮೊ| ಸಿ. ಫ್ರಾನ್ಸಿಸ್, ಛಾನ್ಸಲರ್ ಫಾ| ಆ್ಯಂಟನಿ ಸ್ವಾಮಿ, ಕುಪ್ಪೆಪದವು ಚರ್ಚ್ನ ಧರ್ಮಗುರು ಫಾ| ವಲೇರಿಯನ್ ಡಿ’ಸೋಜಾ ಸಹಿತ 25ಕ್ಕೂ ಮಿಕ್ಕಿ ಧರ್ಮಗುರುಗಳಿದ್ದರು.
ಅನೇಕ ಮಂದಿ ಧರ್ಮ ಭಗಿನಿಯರು ಹಾಗೂ ಕುಪ್ಪೆಪದವು ಚರ್ಚ್ನ ಕ್ರೈಸ್ತರು, ಮಹಾ ಧರ್ಮಾಧ್ಯಕ್ಷರ ಅಭಿಮಾನಿಗಳು, ಮೊರಾಸ್ ಕುಟುಂಬದ ಹಿತೈಷಿಗಳು ಭಾಗವಹಿಸಿ ಆರ್ಚ್ಬಿಷಪ್ ಬರ್ನಾರ್ಡ್ ಮೊರಾಸ್ ಅವರಿಗೆ ಶುಭ ಕೋರಿದರು.
ಪ್ರಾರಂಭದಲ್ಲಿ ಆರ್ಚ್ ಬಿಷಪ್ ಅವರನ್ನು ಕುಪ್ಪೆಪದವು ಪೇಟೆಯಲ್ಲಿ ಸ್ವಾಗತಿಸಿ ಮೆರವಣಿಗೆ ಮೂಲಕ ಚರ್ಚ್ಗೆ ಕರೆದೊಯ್ಯಲಾಯಿತು. ಬಲಿ ಪೂಜೆಯ ನೇತೃತ್ವವನ್ನು ಆರ್ಚ್ ಬಿಷಪ್ ಬರ್ನಾರ್ಡ್ ಮೊರಾಸ್ ವಹಿಸಿದ್ದರು. ಬಳ್ಳಾರಿಯ ಬಿಷಪ್ ರೆ| ಡಾ| ಹೆನ್ರಿ ಡಿ’ಸೋಜಾ ಪ್ರವಚನ ನೀಡಿದರು.
ಹಿರಿಯರ ಮನೆಯಲ್ಲಿ ಅಭಿನಂದನೆ
ಬಲಿಪೂಜೆ ಬಳಿಕ ಆರ್ಚ್ ಬಿಷಪ್ ಅವರನ್ನು ಚರ್ಚ್ನಿಂದ ಪಕ್ಕದ ಮೊರಾಸ್ ಕುಟುಂಬದ ಹಿರಿಯರ ಮನೆ ಆವರಣಕ್ಕೆ ಮೆರವಣಿಗೆಯಲ್ಲಿ ಕರೆದೊಯ್ಯಲಾಯಿತು. ಮನೆಯ ದ್ವಾರದಲ್ಲಿ ಗುರು ಆರತಿ ಬೆಳಗಿ ಸ್ವಾಗತ ಕೋರಲಾಯಿತು ಹಾಗೂ ರೆ| ಡಾ| ಬರ್ನಾರ್ಡ್ ಮೊರಾಸ್ ಅವರು ತಮ್ಮ 50 ವರ್ಷಗಳ ಧಾರ್ಮಿಕ ಜೀವನದ ಸಂಕೇತವಾಗಿ 50 ಬೆಲೂನುಗಳನ್ನು ಆಕಾಶಕ್ಕೆ ತೇಲಿ ಬಿಟ್ಟರು.
ಅಭಿನಂದನ ಸಮಾರಂಭದ ಅಧ್ಯಕ್ಷತೆಯನ್ನು ಮಂಗಳೂರಿನ ಬಿಷಪ್ ರೆ| ಡಾ| ಅಲೋಶಿಯಸ್ ಪಾವ್ಲ್ ಡಿ’ಸೋಜಾ ವಹಿಸಿದ್ದರು. ಧರ್ಮಾಧ್ಯಕ್ಷರಾದ ರೆ| ಡಾ| ಜೆರಾಲ್ಡ್ ಐಸಾಕ್ ಲೋಬೋ, ರೆ| ಡಾ| ಹೆನ್ರಿ ಡಿ’ಸೋಜಾ, ಮಂಗಳೂರು ಧರ್ಮ ಪ್ರಾಂತದ ಪ್ರಧಾನ ಗುರು ಮೊ| ಡೆನಿಸ್ ಮೊರಾಸ್ ಪ್ರಭು, ಪಾಲನ ಪರಿಷತ್ ಕಾರ್ಯದರ್ಶಿ ಎಂ.ಪಿ. ನೊರೋನ್ಹಾ, ಮೊ| ಜಯನಾಥನ್ ಮತ್ತು ಮೊ| ಸಿ. ಫ್ರಾನ್ಸಿಸ್, ಛಾನ್ಸಲರ್ ಫಾ| ಆ್ಯಂಟನಿ ಸ್ವಾಮಿ, ಕುಪ್ಪೆಪದವು ಚರ್ಚ್ನ ಫಾ| ವಲೇರಿಯನ್ ಡಿ’ಸೋಜಾ, ಕೊಡಗು ಜಿಲ್ಲಾಧಿಕಾರಿ, ಮೊರಾಸ್ ಕುಟುಂಬದ ಡಾ| ರಿಚಾರ್ಡ್ ವಿನ್ಸೆಂಟ್ ಡಿ’ಸೋಜಾ, ಶಾಸಕ ಮೊದಿನ್ ಬಾವಾ ಉಪಸ್ಥಿತರಿದ್ದರು.
ಸುವರ್ಣೋತ್ಸವದ ಕೇಕ್ ಅನ್ನು ಮೊರಾಸ್ ಕತ್ತರಿಸಿದರು. ಜಪ್ಪು ಸೆಮಿನರಿಯಲ್ಲಿ ಅವರ ಸಹಪಾಠಿಯಾಗಿದ್ದು, ಡಿ. 5ರಂದು ಗುರು ದೀಕ್ಷೆಯ 50 ವರ್ಷಗಳನ್ನು ಪೂರ್ತಿ ಗೊಳಿ ಸಿದ್ದ ಮೊ| ಡೆನಿಸ್ ಮೊರಾಸ್ ಪ್ರಭು ಕೂಡ ಕೇಕ್ ಕತ್ತರಿಸಿದರು.
ಆರ್ಚ್ ಬಿಷಪ್ ಅವರನ್ನು ಫಾ| ಫಾವುಸ್ತಿನ್ ಲೋಬೋ ಅಭಿನಂದಿಸಿದರು. ಪೋಪ್ ಫ್ರಾನ್ಸಿಸ್ ಕಳುಹಿಸಿದ್ದ ಶುಭಾಶಯ ಸಂದೇಶವನ್ನು ಮೊ| ಜಯನಾಥನ್ ವಾಚಿಸಿದರು. ಬಿಷಪ್ ಅಲೋಶಿಯಸ್ ಪಾವ್ಲ್ ಡಿ’ಸೋಜಾ ಅವರು ಕರ್ನಾಟಕದ ಧರ್ಮಾಧ್ಯಕ್ಷರ ಮಂಡಳಿ ಪರವಾಗಿ ಆರ್ಚ್ ಬಿಷಪ್ ಅವರನ್ನು ಹಾರ ಹಾಕಿ, ಮೈಸೂರು ಪೇಟ ತೊಡಿಸಿ ಸಮ್ಮಾನಿಸಿದರು. ವೇದಿಕೆಯಲ್ಲಿದ್ದ ಬಿಷಪರು, ಪ್ರಧಾನ ಗುರು ಗಳು ಮತ್ತು ಕುಪ್ಪೆಪದವು ಚರ್ಚ್ನ ಗುರುಗಳನ್ನು ಆರ್ಚ್ ಬಿಷಪ್ ಸಮ್ಮಾನಿಸಿದರು.
ಆರ್ಚ್ ಬಿಷಪ್ ಅವರನ್ನು ಮಂಗಳೂರು ಧರ್ಮ ಪ್ರಾಂತದ ಪರವಾಗಿ ಪಾಲನ ಪರಿಷತ್ ಕಾರ್ಯದರ್ಶಿ ಎಂ.ಪಿ. ನೊರೋನ್ಹಾ, ಕುಪ್ಪೆಪದವು ವಾರ್ಡ್ ವತಿಯಿಂದ ಗುರಿಕಾರ ಇಗ್ನೇಶಿಯಸ್ ನೇತೃತ್ವದಲ್ಲಿ ಹಾಗೂ ಮುತ್ತೂರು ಗ್ರಾ. ಪಂ. ಪರವಾಗಿ ಅಧ್ಯಕ್ಷೆ ನಾಗಮ್ಮ ನೇತೃತ್ವದಲ್ಲಿ ಸಮ್ಮಾನಿಸಲಾಯಿತು.
ಮೊರಾಸ್ ಕುಟುಂಬದ ಸಿಸಿಲಿಯಾ ಮೊರಾಸ್, ಅಲಿಸ್ ಮೊರಾಸ್, ಮೇರಿ ಮೊರಾಸ್, ಜಾನ್ ಮೊರಾಸ್, ಮಾರ್ಟಿನ್ ಮೊರಾಸ್, ಮೋನಿಕಾ ಪಿಂಟೊ, ಎಡ್ಮಂಡ್ ಮೊರಾಸ್, ಜಾನ್ ಕ್ರೂಜ್ ಮೊರಾಸ್, ಜೋಸೆಫ್ ಮೊರಾಸ್ ಮೊದಲಾದವರು ಉಪಸ್ಥಿತರಿದ್ದರು.