ಕೇಂದ್ರ ಸರಕಾರವನ್ನು ಬೊಟ್ಟು ಮಾಡಿದರೆ ಪ್ರಾಮಾಣಿಕತೆಯನ್ನೇ ಪ್ರಶ್ನಿಸುತ್ತಾರೆ: ರೈ
Team Udayavani, Sep 9, 2019, 5:00 AM IST
ಮಂಗಳೂರು: ಶಶಿಕಾಂತ ಸೆಂಥಿಲ್ ಆಡಳಿತ ನಡೆಸುವ ಸಮಯದಲ್ಲಿ ಅತ್ಯಂತ ಪ್ರಾಮಾಣಿಕ ಹಾಗೂ ದಕ್ಷ ಅಧಿಕಾರಿ ಎಂದು ಬಿಜೆಪಿ ಸೇರಿದಂತೆ ಎಲ್ಲ ರಾಜಕೀಯ ಪಕ್ಷಗಳು, ಸಂಘಟನೆ, ಜನರು ಹೇಳುತ್ತಿದ್ದರು. ಆದರೆ ಅವರು ರಾಜೀನಾಮೆ ನೀಡುವಾಗ ಕೇಂದ್ರ ಸರಕಾರದ ವಿರುದ್ಧ ಬೊಟ್ಟು ಮಾಡಿದ್ದಾರೆ ಎನ್ನುವ ಕಾರಣಕ್ಕೆ ಅವರ ಪ್ರಾಮಾಣಿಕತೆಯನ್ನೇ ಈಗ ಕೆಲವರು ಪ್ರಶ್ನೆ ಮಾಡಲು ಆರಂಭಿಸಿದ್ದಾರೆ ಎಂದು ಮಾಜಿ ಸಚಿವ ಬಿ. ರಮಾನಾಥ ರೈ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲಾಧಿಕಾರಿಯಾಗಿದ್ದ ಸಮಯದಲ್ಲಿ ಸೆಂಥಿಲ್ ವಿರುದ್ಧ ಏನನ್ನೂ ಮಾತನಾಡದವರು ಈಗ ಅವರು ಸರಿ ಇಲ್ಲ ಎನ್ನುತ್ತಿದ್ದಾರೆ. ಕೇಂದ್ರ ಸರಕಾರ, ಅದರ ನೀತಿಯನ್ನು ಪ್ರಶ್ನಿಸಿದವರನ್ನೆಲ್ಲ ದೇಶದ್ರೋಹಿಗಳು ಎಂಬಂತೆ ಪರಿಗಣಿಸಲಾಗುತ್ತಿದೆ. ಇದು ಯಾವ ನ್ಯಾಯ ಎಂದು ಪ್ರಶ್ನಿಸಿದರು.ರಾಜ್ಯದಲ್ಲಿ ಪ್ರವಾಹ ಪೀಡಿತರ ಪ್ರದೇಶಗಳ ಸಮೀಕ್ಷೆಗೆ ಮನಸ್ಸು ಮಾಡದ ಪ್ರಧಾನಿ, ಕೇಂದ್ರದಿಂದ ಕನಿಷ್ಠ ನೆರವನ್ನೂ ಬಿಡುಗಡೆ ಮಾಡಿಲ್ಲ. ಶನಿವಾರ ಪ್ರಧಾನಿ ಬೆಂಗಳೂರು ಭೇಟಿ ವೇಳೆ ನೆರೆ ಸಂತ್ರಸ್ತರಿಗೆ ಅನುದಾನ ಕೋರುವುದಾಗಿ ಮುಖ್ಯಮಂತ್ರಿ ಹೇಳಿದ್ದರೂ ಹಾಗೆ ಮಾಡಿಲ್ಲ ಎಂದರು.
ಮುಖಂಡರಾದ ಕೋಡಿಜಾಲ್ ಇಬ್ರಾಹಿಂ, ಎಂ. ಶಶಿಧರ ಹೆಗ್ಡೆ, ಕವಿತಾ ಸನಿಲ್, ಆರ್.ಕೆ. ಪೃಥ್ವಿರಾಜ್, ವಿಶ್ವಾಸ್ ಕುಮಾರ್ದಾಸ್, ಸಂತೋಷ್ ಕುಮಾರ್ ಶೆಟ್ಟಿ, ಗಣೇಶ್ ಪೂಜಾರಿ, ಬಿ.ಎಂ. ಅಬ್ಟಾಸ್ ಆಲಿ, ನೀರಜ್ಪಾಲ್, ಜಯಶೀಲ ಅಡ್ಯಂತಾಯ, ಮುಸ್ತಾಫ, ಪ್ರೇಮನಾಥ್, ನಝೀರ್ ಬಜಾಲ್ ಉಪಸ್ಥಿತರಿದ್ದರು.
ಮೋದಿ-ಇಮ್ರಾನ್ ಒಂದೇ!
ಪ್ರಧಾನಿ ಮೋದಿಗೆ ಪ್ರವಾಹದಿಂದ ಸಂಕಷ್ಟಕ್ಕೆ ಒಳಗಾದ ಜನರ ಒಳಿತಿನ ಚಿಂತೆ ಇಲ್ಲ. ಮೋದಿ ಮತ್ತು ಪಾಕ್ ಪ್ರಧಾನಿ ಇಮ್ರಾನ್ ಖಾನ್ ಇಬ್ಬರೂ ಒಂದೇ ರೀತಿಯವರು. ಇಬ್ಬರೂ ಚುನಾವಣೆಯಲ್ಲಿ ಗೆಲ್ಲುವ ಬಗ್ಗೆ ಒಳಒಪ್ಪಂದ ಮಾಡಿಕೊಂಡಿದ್ದಾರೆ. ಅದಕ್ಕಾಗಿಯೇ ಇಬ್ಬರು ಪರಸ್ಪರ ಆರೋಪ ಮಾಡಿಕೊಳ್ಳುತ್ತಿದ್ದಾರೆ ಎಂದು ರಮಾನಾಥ ರೈ ಹೇಳಿದರು.