ಆಯುರ್ವೇದ ಕೊಡುಗೆ ಅಪಾರ: ಒಡಿಯೂರು ಶ್ರೀ
Team Udayavani, May 2, 2018, 9:39 AM IST
ವಿಟ್ಲ: ದೃಢಸಂಕಲ್ಪ, ಆತ್ಮವಿಶ್ವಾಸದಿಂದ ಮಾಡುವ ಕಾರ್ಯಕ್ಕೆ ದೇವರ ಅನುಗ್ರಹವಿರುತ್ತದೆ. ದೇಗುಲ ನಿರ್ಮಾಣವೆಂದರೆ ಸಂಸ್ಕೃತಿಗೆ ದೊಡ್ಡ ಕೊಡುಗೆಯಾಗಿದೆ. ಅಳಿಕೆಯಲ್ಲಿ ಸಂಸ್ಕೃತಿ ಉಳಿದಿದೆ. ಆಯುರ್ವೇದ ಪದ್ಧತಿ ಪರಂಪರೆಯ ಕೊಡುಗೆ. ಅದರ ಪ್ರತಿಫಲ ಅಪಾರವಾಗಿದೆ ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ ಹೇಳಿದರು.
ಅವರು ರವಿವಾರ ಅಳಿಕೆ ಗ್ರಾಮದ ಜೆಡ್ಡು ಪದ್ಮಗಿರಿ ಶ್ರೀ ಆದಿ ಧನ್ವಂತರಿ ಕ್ಷೇತ್ರದಲ್ಲಿ ನಿರ್ಮಾಣಗೊಂಡಿರುವ ಶಿಲಾಮಯ ದೇವಸ್ಥಾನದಲ್ಲಿ ಶ್ರೀ ಧನ್ವಂತರಿ ದೇವರ ಪ್ರತಿಷ್ಠಾಷ್ಟಬಂಧ ಬ್ರಹ್ಮಕಲಶ ಸಂದರ್ಭ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದರು.
ಮಾಣಿಲ ಶ್ರೀ ಧಾಮದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಆಶೀರ್ವಚನ ನೀಡಿ, ದೇಗುಲಗಳ ನಿರ್ಮಾಣದಿಂದ ಸಮಾಜ ಸದೃಢವಾಗುತ್ತದೆ ಎಂದರು.
ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಸಾಧ್ವಿà ಶ್ರೀ ಮಾತಾನಂದಮಯೀ ಅವರು ಆಶೀರ್ವಚನ ನೀಡಿ, ನಾವು ದೇವಋಣ, ಪಿತೃಋಣ ಮತ್ತು ಸಮಾಜ ಋಣವನ್ನು ತೀರಿಸಿ ಆಧ್ಯಾತ್ಮಿಕ ಚಿಂತನೆಗಳ ಮೂಲಕ
ಸುಖ ಮತ್ತು ಶಾಂತಿಯನ್ನು ಪಡೆಯಬೇಕು ಎಂದರು.
ಸಮ್ಮಾನ
ವಿಟ್ಲ ಅರಮನೆಯ ವಿ. ಜನಾರ್ದನ ವರ್ಮ ಅರಸರು, ವಾಸ್ತುಶಾಸ್ತ್ರಜ್ಞರಾದ ಎಸ್.ಎಂ. ಪ್ರಸಾದ್ ಮುನಿಯಂಗಳ, ದೇವಾಲಯದ ಶಿಲ್ಪಿ ಪದ್ಮನಾಭ, ಅಣ್ಣು ಆಚಾರ್ಯ, ಕಾರ್ಕಳ ಕೆನರಾ ಬ್ಯಾಂಕ್ ಶಿಲ್ಪಕಲಾ ತರಬೇತಿ ಸಂಸ್ಥೆಯ ಮುಖ್ಯ ಶಿಕ್ಷಕ ಕೋಟಿಮೂಲೆ ಗುಣವಂತೇಶ್ವರ ಭಟ್, ಕಾರ್ಯಾಧ್ಯಕ್ಷ ಪ್ರಭಾಕರ ಶೆಟ್ಟಿ ದಂಪತಿ, ಒಡಿಯೂರು ಶ್ರೀ ಗುರುದೇವ ಬಳಗದ ಅಧ್ಯಕ್ಷ ಅಶೋಕ್ ಕುಮಾರ್ ಬಿಜೈ ದಂಪತಿ, ಒಡಿಯೂರು ವಜ್ರಮಾತಾ ಮಹಿಳಾ ವಿಕಾಸ ಕೇಂದ್ರದ ಅಧ್ಯಕ್ಷೆ ಸರ್ವಾಣಿ ಪಿ. ಶೆಟ್ಟಿ, ಕನ್ಯಾನ ಭಾರತ ಸೇವಾಶ್ರಮದ ಕಾರ್ಯದರ್ಶಿ ಈಶ್ವರ ಭಟ್ ಹಾಗೂ ವಿಗ್ರಹ ದಾನ ನೀಡಿದ ದಾನಿಗಳನ್ನು ಸಮ್ಮಾನಿಸಲಾಯಿತು.
ಕೇಪು ವಲಯ ಬಂಟರ ಸಂಘದ ಮಾಜಿ ಅಧ್ಯಕ್ಷ ರಾಧಾಕೃಷ್ಣ ಶೆಟ್ಟಿ ಚೆಲ್ಲಡ್ಕ, ಜಯಶ್ರೀ ಕೋಡಂದೂರು, ಶ್ರೀ ಆದಿ ಧನ್ವಂತರಿ ಕ್ಷೇತ್ರದ ಧರ್ಮದರ್ಶಿ ಜೆಡ್ಡು ನಾರಾಯಣ ಭಟ್, ಬ್ರಹ್ಮಕಲಶ ಸಮಿತಿ ಅಧ್ಯಕ್ಷ ತಾರಾನಾಥ ಕೊಟ್ಟಾರಿ ಅವರು ಭಾಗವಹಿಸಿದ್ದರು.
ಕಾರ್ಯಾಧ್ಯಕ್ಷ ಪ್ರಭಾಕರ ಶೆಟ್ಟಿ ದಂಬೆಕಾನ ಸ್ವಾಗತಿಸಿದರು. ಬ್ರಹ್ಮಕಲಶ ಸಮಿತಿ ಪ್ರಧಾನ ಕಾರ್ಯದರ್ಶಿ ಡಾ| ಜೆಡ್ಡು ಗಣಪತಿ ಭಟ್ ಪ್ರಸ್ತಾವನೆಗೈದರು. ಸಭೆ ನಿರ್ವಹಣೆ ಸಮಿತಿ ಸಂಚಾಲಕ ಈಶ್ವರ ನಾಯ್ಕ ಅಳಿಕೆ ಕಾರ್ಯಕ್ರಮ ನಿರ್ವಹಿಸಿದರು. ಸದಸ್ಯ ವೇಣುಗೋಪಾಲ ಶೆಟ್ಟಿ ಮರುವಾಳ ವಂದಿಸಿದರು.