ಬಡಗನ್ನೂರು: ವಿದ್ಯುತ್ ಆಘಾತ, ವಿದ್ಯಾರ್ಥಿ ಸಾವು
Team Udayavani, Dec 18, 2022, 11:49 PM IST
ಬಡಗನ್ನೂರು: ವಿದ್ಯುತ್ ಆಘಾತಕ್ಕೊಳಗಾಗಿ ಪ್ರೌಢಶಾಲಾ ವಿದ್ಯಾರ್ಥಿಯೋರ್ವ ಮೃತಪಟ್ಟ ಘಟನೆ ಬಡಗನ್ನೂರು ಅಂಬಟೆಮೂಲೆ ಎಂಬಲ್ಲಿ ಡಿ.17ರಂದು ಸಂಜೆ ಸಂಭವಿಸಿದೆ. ಬಡಗನ್ನೂರು ಗ್ರಾ. ಪಂ.ನಲ್ಲಿ ನೀರು ನಿರ್ವಾಹಕರಾಗಿ ಕೆಲಸ ಮಾಡಿಕೊಂಡಿದ್ದ ಅಂಬಟೆ ಮೂಲೆ ಕೃಷ್ಣಪ್ಪ ನಾಯ್ಕರವರ ಮಗ, ಪಟ್ಟೆ ಪ್ರತಿಭಾ ಪ್ರೌಢಶಾಲೆಯ ಹತ್ತನೇ ತರಗತಿ ವಿದ್ಯಾರ್ಥಿ ರಂಜಿತ್ (16)ಮೃತಪಟ್ಟವರು.
ರಂಜಿತ್ ತಮ್ಮ ಮನೆಯಿಂದ ಸ್ವಲ್ಪವೇ ದೂರದಲ್ಲಿದ್ದ ಟ್ರಾ®Õ…ಫಾರ್ಮರ್ ಬಳಿ ವಿದ್ಯುತ್ ಆಘಾತಕ್ಕೊಳಗಾಗಿ ಬಿದ್ದಿದ್ದರು. ಆಸ್ಪತ್ರೆಗೆ ಕರೆತರುತ್ತಿದ್ದಾಗ ದಾರಿ ಮಧ್ಯೆ ಮೃತಪಟ್ಟಿದ್ದಾರೆ. ಪಕ್ಕದ ಮನೆಯ ನಿವಾಸಿ ಸ್ನೇಹಿತನೋರ್ವ ತನ್ನ ಮನೆಗೆ ಕರೆಂಟ್ ಇಲ್ಲ ಎಂದು ಹೇಳಿ ಪರಿಶೀಲಿಸಲೆಂದು ರಂಜಿತ್ ಅವರನ್ನು ವಿದ್ಯುತ್ ಟ್ರಾನ್ಸ್ ಫಾರ್ಮರ್ ಬಳಿಗೆ ಕರೆದೊಯ್ದಿದ್ದರು ಎನ್ನಲಾಗುತ್ತಿದೆ.
ರಂಜಿತ್ ಹೆತ್ತವರು ಕೂಲಿ ಕಾರ್ಮಿಕರಾಗಿದ್ದು ಹೃದಯಸಂಬಂಧಿತ ಕಾಯಿಲೆಯಿಂದ ಬಳಲುತ್ತಿರುವ ತಂದೆ ಕೃಷ್ಣಪ್ಪ ನಾಯ್ಕ ಅವರಿಗೆ ಇದೇ 20ರಂದು ಬೈಪಾಸ್ ಸರ್ಜರಿಗೆ ಸಿದ್ಧತೆ ನಡೆಸಲಾಗಿತ್ತು. ಈ ನಡುವೆ ಪುತ್ರ ಮೃತಪಟ್ಟಿದ್ದರಿಂದ ಮನೆಯಲ್ಲಿ ಮೌನ ಆವರಿಸಿದೆ.
ಮೃತ ರಂಜಿತ್ ತಂದೆ, ತಾಯಿ ಹಾಗೂ ಅಣ್ಣನನ್ನು ಅಗಲಿದ್ದಾರೆ. ಸಂಪ್ಯ ಪೊಲೀಸರು ಹಾಗೂ ಮೆಸ್ಕಾಂ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದರು.ಘಟನೆ ಕುರಿತು ಸಂಪ್ಯ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.