ಬೆಳ್ತಂಗಡಿ ತಾ|ಕಚೇರಿ ನಿಷ್ಕ್ರಿಯತೆ :ಬಿಜೆಪಿ ಪ್ರತಿಭಟನೆ
Team Udayavani, Nov 2, 2017, 4:04 PM IST
ಬೆಳ್ತಂಗಡಿ: ನಿಷ್ಕ್ರಿಯಗೊಂಡ ತಾ| ಕಚೇರಿ ಸಕ್ರಿಯಗೊಳಿಸುವ ಉದ್ದೇಶದಿಂದ ಬೆಳ್ತಂಗಡಿ ಮಂಡಲ ಬಿಜೆಪಿ ವತಿಯಿಂದ
ಬೃಹತ್ ಪ್ರತಿಭಟನೆ ನಡೆಯಿತು.
ಇಲ್ಲಿ ರಾಜಾರೋಷವಾಗಿ ನಡೆಯುತ್ತಿರುವ ಭ್ರಷ್ಟಾಚಾರ, ಸಾರ್ವಜನಿಕರ ಅಗತ್ಯ ಕೆಲಸ ಕಾರ್ಯಗಳ ವಿಳಂಬ ಇದರ ಬಗ್ಗೆ ಖಂಡಿಸಿ, ಪೂರ್ಣಕಾಲಿಕ ತಹಶೀಲ್ದಾರರನ್ನು ನೇಮಕಗೊಳಿಸುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಯಿತು.
ಕಚೇರಿಗೆ ಬೀಗ ಜಡಿಯಲು ಕೂಡ ಪ್ರತಿಭಟನಕಾರರು ಮುಂದಾಗಿದ್ದರು. ಪಕ್ಷದ ಮಂಗಳೂರು ವಿಭಾಗ ಸಂಘಟನ
ಕಾರ್ಯದರ್ಶಿ ಪ್ರಸಾದ್ ಕುಮಾರ್, ತಾ| ಕಚೇರಿಗೆ ಖಾಯಂ ತಹಶೀಲ್ದಾರ್ ಇಲ್ಲದೆ ತಿಂಗಳು ಕಳೆದಿದೆ. ಗ್ರಾಮೀಣ ಪ್ರದೇಶದ ಜನರು ತಮ್ಮ ಅಗತ್ಯ ಕೆಲಸಗಳಿಗೆ ದಿನವಿಡಿ ಕಾದರೂ ಯಾವುದೇ ಕೆಲಸ ಆಗುತ್ತಿಲ್ಲ. ತಿಂಗಳುಗಟ್ಟಲೆ ಅಲೆದಾಡಿದರೂ ಜನರ ಸಮಸ್ಯೆಗೆ ಪರಿಹಾರ ಸಿಕ್ಕಿಲ್ಲ. ಸರಕಾರದ ವೈಫಲ್ಯಕ್ಕೆ ಇಲ್ಲಿನ ಆಡಳಿತವೇ ನಿದರ್ಶನ
ವಾಗಿದೆ ಎಂದರು.
ವಕೀಲ ಸುಬ್ರಹ್ಮಣ್ಯ ಕುಮಾರ್ ಅಗರ್ತ, ಬಿಜೆಪಿ ಶಾಸಕರ ಅವಧಿಯಲ್ಲಿ ತಾ| ಕಚೇರಿಯ ಭ್ರಷ್ಟಾಚಾರದ ಬಗ್ಗೆ ಮಾತ
ನಾಡುತ್ತಿದ್ದ ಹಾಲಿ ಶಾಸಕರು, ಅಕ್ರಮ ಸಕ್ರಮ, 94 ಸಿ. ಮತ್ತಿತರ ಕೆಲಸಗಳ ಹೆಸರಲ್ಲಿ ನಡೆಯುತ್ತಿರುವ ದೊಡ್ಡ ಮಟ್ಟದ ಭ್ರಷ್ಟಾಚಾರದ ವಿರುದ್ಧ ಧ್ವನಿ ಎತ್ತಿಲ್ಲ. ತಮ್ಮದೇ ಸರಕಾರವಿದ್ದರೂ ಕಾಯಂ ತಹಶೀಲ್ದಾರರನ್ನು ನಿಯೋಜಿಸಿಲ್ಲ
ಎಂದು ಆಪಾದಿಸಿದರು.
ಪ್ರತಿಭಟನ ಸ್ಥಳಕ್ಕೆ ಆಗಮಿಸಿದ ಪುತ್ತೂರು ಉಪವಿಭಾಗಾಧಿಕಾರಿ ರಘುನಂದನ ಮೂರ್ತಿ ಅವರಿಗೆ
ಮನವಿ ನೀಡಲಾಯಿತು. ಮನವಿ ಸ್ವೀಕರಿಸಿ, ವಾರದಲ್ಲಿ ನಾಲ್ಕು ದಿನ ಮೂಡಬಿದಿರೆಯ ತಹಶೀಲ್ದಾರ್ ಕಾರ್ಯ ನಿರ್ವಹಿಸುವಂತೆ ನಿಯೋಜನೆ ಮಾಡಲಾಗುವುದು. ಅಕ್ರಮ-ಸಕ್ರಮ, 94ಸಿ, 94ಸಿಸಿ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು.
ಪ್ರತಿಭಟನೆಯಲ್ಲಿ ಜಿ.ಪಂ. ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಮಂಡಲ ಅಧ್ಯಕ್ಷ ರಂಜನ್ ಜಿ. ಗೌಡ, ಉಪಾಧ್ಯಕ್ಷರಾದ
ಜಯಂತ ಕೋಟ್ಯಾನ್, ಪ್ರಭಾಕರ ಮೊಗ್ರು, ವಿಜಯ ಆರಂಬೋಡಿ, ಮಂಜುಳಾ ಉಮೇಶ್, ಪ್ರ. ಕಾರ್ಯದರ್ಶಿ ಪ್ರಭಾಕರ ಉಪ್ಪಡ್ಕ, ಯುವ ಮೋರ್ಚಾ ಜಿಲ್ಲಾಧ್ಯಕ್ಷ ಹರೀಶ್ ಪೂಂಜ, ತಾಲೂಕು ಅಧ್ಯಕ್ಷ ಸಂಪತ್ ಸುವರ್ಣ, ಕಾರ್ಯದರ್ಶಿ ರಕ್ಷಿತ್ ಶೆಟ್ಟಿ, ಜಿ.ಪಂ. ಸದಸ್ಯರಾದ ಕೊರಗಪ್ಪ ನಾಯ್ಕ, ಮಮತಾ ಶೆಟ್ಟಿ, ಸೌಮ್ಯಲತಾ, ತಾ.ಪಂ. ಉಪಾಧ್ಯಕ್ಷೆ ವೇದಾವತಿ, ಸ್ಥಾಯೀ ಸಮಿತಿ ಅಧ್ಯಕ್ಷ ಸುಧೀರ್ ಸುವರ್ಣ,ಸುಧಾಕರ ಬಿ. ಎಲ್., ಅಲ್ಪಸಂಖ್ಯಾಕ ಮೋರ್ಚಾದ ಅಧ್ಯಕ್ಷ ಅರುಣ್ ಕ್ರಾಸ್ತಾ, ಕಚೇರಿ ನಿರ್ವಾಹಕ ನಾರಾಯಣ ಆಚಾರ್ ಮೊದಲಾದವರು ಉಪಸ್ಥಿತರಿದ್ದರು.