ಸೇತುವೆಗೆ ಜೀಪು ಢಿಕ್ಕಿ: ಇಬ್ಬರ ಸಾವು
Team Udayavani, Nov 25, 2017, 8:21 AM IST
ಉಪ್ಪಿನಂಗಡಿ: ಜೀಪೊಂದು ಸೇತುವೆಗೆ ಢಿಕ್ಕಿಯಾಗಿ ಜೀಪಿನಲ್ಲಿದ್ದ ಇಬ್ಬರು ಸ್ಥಳದಲ್ಲೇ ಸಾವಿಗೀಡಾದ ಘಟನೆ ಗುರುವಾರ ಮಧ್ಯರಾತ್ರಿ ಕೆಮ್ಮಾರದಲ್ಲಿ ಸಂಭವಿಸಿದೆ. ಈ ಅಪಘಾತದಲ್ಲಿ 8 ಮಂದಿ ಗಾಯಗೊಂಡಿದ್ದಾರೆ.
ಉಪ್ಪಿನಂಗಡಿಯಿಂದ ಆಲಂಕಾರು ಮೂಲಕ ಕಾಣಿಯೂರು ಕಡೆಗೆ ತೆರಳುತ್ತಿದ್ದ ಜೀಪು, ಕೆಮ್ಮಾರ ತಿರುವಿನಲ್ಲಿ ಸೇತುವೆಗೆ ಢಿಕ್ಕಿ ಹೊಡೆದಿದ್ದು, ಜೀಪಲ್ಲಿದ್ದ ಸುಶೀಲಾ (65) ಮತ್ತು ಶಿವಪ್ಪ ಗೌಡ (68) ಸ್ಥಳದಲ್ಲೇ ಮೃತ ಪಟ್ಟಿದ್ದಾರೆ. ಶಿವಪ್ಪ ಗೌಡ ನಿವೃತ್ತ ರೈಲ್ವೇ ಸಿಬಂದಿಯಾಗಿದ್ದಾರೆ.
ಜೀಪಲ್ಲಿದ್ದ ಜಲಜಾಕ್ಷಿ (38), ಪ್ರೀತಿ (11), ಪ್ರಿತೇಶ್ (15), ಚಿತ್ರಾ (29), ನಾರಾಯಣ ಗೌಡ (45), ಕೇಶವ ಗೌಡ (48), ಭವಾನಿ (60), ದಯಾನಂದ (50) ತೀವ್ರ ಗಾಯಗೊಂಡಿದ್ದು ಆಸ್ಪತ್ರೆಗಳಿಗೆ ದಾಖಲಾಗಿದ್ದಾರೆ. ಈ ಪೈಕಿ ನಾರಾಯಣ ಗೌಡ ಸ್ಥಿತಿ ಚಿಂತಾ ಜನಕವಾಗಿದ್ದು, ಅವರನ್ನು ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಆಸ್ಪತ್ರೆಗೆ ಸಾಗಿಸಲು ನೆರವಾದರು
ವಿಷಯ ತಿಳಿಯುತ್ತಲೇ ಸ್ಥಳ ಕ್ಕಾಗ ಮಿಸಿದ ಸ್ಥಳೀಯರಾದ ಇಸ್ಮಾ ಯಿಲ್, ಮುಸ್ತಾಫ, ಬಶೀರ್, ಅಬ್ದುಲ್ ರಮಾನ್, ನವಾಝ್, ಸಂಶುದ್ದೀನ್ ಮತ್ತು ಆ್ಯಂಬುಲೆನ್ಸ್ ಚಾಲಕ ಮಹಮ್ಮದ್ ಗಾಯಾಳು ಗಳನ್ನು ಆಸ್ಪತ್ರೆಗೆ ಸಾಗಿಸಲು ನೆರವಾದರು.
ಸಂಚಾರ ಅಡಚಣೆ
ಕೆಮ್ಮಾರ ಸೇತುವೆಯಲ್ಲೇ ಜೀಪು ಢಿಕ್ಕಿಯಾದ್ದರಿಂದ ವಾಹನ ಸಂಚಾರಕ್ಕೆ ಅಡಚಣೆ ಉಂಟಾಯಿತು. ಸುಮಾರು 1 ಕಿ.ಮೀ. ತನಕ ವಾಹನಗಳ ಸಾಲು ಕಂಡು ಬಂದಿತ್ತು. ಪುತ್ತೂರು ಸಂಚಾರ ಠಾಣಾ ಪೊಲೀಸರು ಮತ್ತು ಉಪ್ಪಿನಂಗಡಿ ಪೊಲೀಸರು ಸಂಚಾರ ಸುಗಮಗೊಳಿಸಿದರು.
ಛಿದ್ರವಾದ ಮೃತದೇಹಗಳು
ಜೀಪು ಕಾಣಿಯೂರು ಕಟ್ಟತ್ತಾರು ನಿವಾಸಿ ದಯಾನಂದ ಅವ ರಿಗೆ ಸೇರಿದ್ದು, ಅಪಘಾತದ ತೀವ್ರತೆಗೆ ಮೃತದೇಹಗಳು ಛಿದ್ರ ವಾಗಿ ಬಿದ್ದ ದೃಶ್ಯ ದಾರುಣ ವಾಗಿತ್ತು. ಜೀಪಲ್ಲಿದ್ದವರೂ ಕಟ್ಟತ್ತಾರು ನಿವಾಸಿ ಗಳಾ ಗಿದ್ದು 34ನೇ ನೆಕ್ಕಿಲಾಡಿ ಬೊಳ್ಳಾರಿನಲ್ಲಿ ನಡೆದ ಕಾರ್ಯಕ್ರಮದಿಂದ ರಾತ್ರಿ ಮನೆಗೆ ಹಿಂದಿರುಗುತ್ತಿದ್ದಾಗ ಅಪಘಾತ ಸಂಭವಿಸಿದೆ.
ಸೂಚನಾ ಫಲಕವೇ ಇಲ್ಲ
ಅಪಘಾತ ಸಂಭವಿಸಿದ ಕೆಮ್ಮಾರ ತಿರುವು ದೀರ್ಘವಾಗಿದ್ದು, ಪಕ್ಕದಲ್ಲೇ ಕೆಮ್ಮಾರ ಹೊಳೆ ಹರಿಯುತ್ತಿದೆ. ಸೂಚನಾ ಫಲಕ ಇಲ್ಲದಿರುವುದರಿಂದ ತಿರುವಿನ ಬಗ್ಗೆ ಚಾಲಕರಿಗೆ ಅರಿವಾಗದೆ ಅಪಘಾತ ಸಂಭವಿಸುತ್ತಿವೆ. ಒಂದೊಮ್ಮೆ ವಾಹನಗಳು ವೇಗವಾಗಿ ಬಂದರೆ ಒಂದೋ ಪಕ್ಕದ ಹೊಳೆಗೆ ಬೀಳಬೇಕು, ಇಲ್ಲವೇ ಸೇತುವೆಗೆ ಢಿಕ್ಕಿಯಾಗಲೇಬೇಕಾದ ಪರಿಸ್ಥಿತಿ ಇದೆ. ಇನ್ನಾದರೂ ಸಂಬಂಧಪಟ್ಟವರು ಎಚ್ಚೆತ್ತುಕೊಂಡು ಸೂಚನಾ ಫಲಕ ಅಳವಡಿಸಲಿ ಎಂಬುದು ಸ್ಥಳೀಯರ ಆಗ್ರಹ.